ADVERTISEMENT

ಚಿಕ್ಕಮಗಳೂರು | ಅಕ್ರಮ ಭೂಮಂಜೂರಾತಿ ಪ್ರಕರಣ: 1400 ಎಕರೆ ಮಂಜೂರಾತಿ ರದ್ದು

ಇನ್ನೂ 3,682 ಪ್ರಕರಣಗಳ ವಿಚಾರಣೆ

ವಿಜಯಕುಮಾರ್ ಎಸ್.ಕೆ.
Published 28 ಮಾರ್ಚ್ 2025, 7:41 IST
Last Updated 28 ಮಾರ್ಚ್ 2025, 7:41 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚಿಕ್ಕಮಗಳೂರು: ಕಡೂರು ಮತ್ತು ಮೂಡಿಗೆರೆಯಲ್ಲಿ ನಡೆದಿದ್ದ ಅಕ್ರಮ ಭೂಮಂಜೂರಾತಿ ಪ್ರಕರಣದಲ್ಲಿ 483 ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸಿರುವ ಕಂದಾಯ ಇಲಾಖೆ, 1,412 ಎಕರೆಯಷ್ಟು ಭೂಮಿ ಸರ್ಕಾರದ್ದು ಎಂದು ಆದೇಶ ಹೊರಡಿಸಿದೆ. ಇನ್ನೂ 3,682 ಪ್ರಕರಣಗಳ ವಿಚಾರಣೆಯನ್ನು ಇಲಾಖೆ ನಡೆಸುತ್ತಿದೆ.

ಎರಡೂ ತಾಲ್ಲೂಕಿನಲ್ಲಿ ಅಕ್ರಮ ಭೂಮಂಜೂರಾತಿ ಬಗ್ಗೆ ತನಿಖೆ ನಡೆಸಲು 2023ರ ಆಗಸ್ಟ್‌ನಲ್ಲಿ 13 ತಹಶೀಲ್ದಾರ್‌ಗಳ ತಂಡವನ್ನು ಸರ್ಕಾರ  ರಚನೆ ಮಾಡಿತ್ತು. ತನಿಖೆ ನಡೆಸಿ ಸರ್ಕಾರಕ್ಕೆ ತಂಡ ವರದಿ ಸಲ್ಲಿಸಿದ್ದು, ಅದರ ಪ್ರಕಾರ 10,598 ಎಕರೆ ಅಕ್ರಮ ಮಂಜೂರಾತಿ ಎಂಬುದನ್ನು ಪತ್ತೆ ಮಾಡಿತ್ತು. ಕಡೂರು ತಾಲ್ಲೂಕಿನಲ್ಲಿ 2,243 ಪ್ರಕರಣದಲ್ಲಿ 5,238 ಎಕರೆ, ಮೂಡಿಗೆರೆ ತಾಲ್ಲೂಕಿನ 1,961 ಪ್ರಕರಣಗಳಲ್ಲಿ 5,360 ಎಕರೆಯನ್ನು ಅಕ್ರಮ ಮಂಜೂರಾತಿ ಎಂದು ತನಿಖಾ ತಂಡ ಗುರುತಿಸಿತ್ತು.

ADVERTISEMENT

ಎರಡೂ ತಾಲ್ಲೂಕಿನಲ್ಲಿ ಪ್ರತಿಯೊಂದು ಮಂಜೂರಾತಿಯನ್ನೂ ಪ್ರತ್ಯೇಕವಾಗಿ ಇಬ್ಬರು ಉಪವಿಭಾಗಾಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ಪೈಕಿ 483 ಪ್ರಕಣಗಳ ವಿಚಾರಣೆ ಪೂರ್ಣಗೊಳಿಸಿದ್ದಾರೆ. ಮೂಡಿಗೆರೆ ತಾಲ್ಲೂಕಿನಲ್ಲಿ 404 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದ್ದು, 1,242 ಎಕರೆಯನ್ನು ಸರ್ಕಾರಿ ಜಾಗ ಎಂದು ಆದೇಶ ಹೊರಡಿಸಲಾಗಿದೆ. ಇದರಲ್ಲಿ 815 ಎಕರೆ ಅರಣ್ಯ ಇಲಾಖೆಯ ಜಾಗವಾಗಿದ್ದರೆ, 427 ಎಕರೆ ಕಂದಾಯ ಜಾಗ ಎಂದು ಗುರುತಿಸಲಾಗಿದೆ.

ಕಡೂರು ತಾಲ್ಲೂಕಿನಲ್ಲಿ 79 ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸಲಾಗಿದ್ದು, 200 ಎಕರೆಯನ್ನು ಸರ್ಕಾರಿ ಜಾಗ ಎಂದು ಆದೇಶ ಹೊರಡಿಸಲಾಗಿದೆ. ಅಷ್ಟೂ ಕಂದಾಯ ಜಾಗವೇ ಆಗಿದ್ದು. ಅರಣ್ಯ ಭೂಮಿಯಲ್ಲಿನ ಮಂಜೂರಾತಿ ಕುರಿತು ವಿಚಾರಣೆ ನಡೆಯುತ್ತಿದೆ.

ಮತ್ತೊಂದೆಡೆ ಅಕ್ರಮ ಮಂಜೂರಾತಿ ಎಂಬುದನ್ನು ತನಿಖಾ ತಂಡ ಗುರುತಿಸಿರುವ ಅಷ್ಟೂ ಜಾಗದ ಪಹಣಿಗಳ ಕಾಲಂ –11ರಲ್ಲಿ ಅಕ್ರಮ ಭೂಮಂಜೂರಾತಿ ವ್ಯಾಜ್ಯ ತನಿಖಾ ಹಂತದಲ್ಲಿದೆ ಎಂದು ನಮೂದಿಸಲಾಗುತ್ತಿದೆ. ಹೀಗೆ ನಮೂದಾದ ಪಹಣಿಗಳ ಜಾಗದ ಪರಭಾರೆ, ಖಾತೆ ಬದಲಾವಣೆ ಸೇರಿ ಎಲ್ಲಾ ರೀತಿಯ ವಹಿವಾಟಿಗೆ ತಡೆ ಬಿದ್ದಿದೆ. ಕಡೂರು ತಾಲ್ಲೂಕಿನಲ್ಲಿ ಈ ರೀತಿಯ 4,341 ಎಕರೆಗೆ ಸಂಬಂಧಿಸಿದ 1,934 ಪಹಣಿ, ಮೂಡಿಗೆರೆ ತಾಲ್ಲೂಕಿನ 3,196 ಎಕರೆಗೆ ಸಂಬಂಧಿಸಿದ 1,479 ಪಹಣಿಗಳ ಮೇಲೆ ವ್ಯಾಜ್ಯ ಎಂದು ನಮೂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.