ADVERTISEMENT

ಚಿಕ್ಕಮಗಳೂರು: 4 ಕಡೆ ಜಲಸಾಹಸ ಕ್ರೀಡೆಗೆ ತಯಾರಿ

ಮದಗದ ಕೆರೆ, ಅಯ್ಯನಕೆರೆ, ಮೂಗ್ತಿಹಳ್ಳಿ, ಬೆಳವಾಡಿ ಕೆರೆಯಲ್ಲಿ ಜಲಸಾಹಸ

ವಿಜಯಕುಮಾರ್ ಎಸ್.ಕೆ.
Published 18 ಮಾರ್ಚ್ 2025, 8:05 IST
Last Updated 18 ಮಾರ್ಚ್ 2025, 8:05 IST
ಚಂದ್ರದ್ರೋಣ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ಅಯ್ಯನಕೆರೆ
ಚಂದ್ರದ್ರೋಣ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ಅಯ್ಯನಕೆರೆ    

ಚಿಕ್ಕಮಗಳೂರು: ಮಳೆಗಾಲದಲ್ಲಿ ಉತ್ತಮವಾಗಿ ಮಳೆಯಾಗಿದ್ದರಿಂದ ಬೇಸಿಗೆಯಲ್ಲೂ ಕೆರೆಗಳಲ್ಲಿ ನೀರಿದ್ದು, ನಾಲ್ಕು ಕೆರೆಗಳಲ್ಲಿ ಜಲಸಾಹಸ ಕ್ರೀಡೆಗೆ ಅವಕಾಶ ನೀಡಲು ಪ್ರವಾಸೋದ್ಯಮ ಇಲಾಖೆ ಆಲೋಚನೆ ನಡೆಸಿದೆ.

ಮಳೆಗಾಲದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತದೆ. ಬರುವ ಪ್ರವಾಸಿಗರನ್ನು ಆಕರ್ಷಿಸುವ ಹೊಸ ತಾಣಗಳನ್ನು ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.

ಜಲಸಾಹಸ ಕ್ರೀಡೆಗಳನ್ನು ಆಯೋಜಿಸಲು ಇರುವ ಸೂಕ್ತ ಸ್ಥಳಗಳನ್ನು ಹುಡುಕಾಡುತ್ತಿದೆ. ಭದ್ರಾ ನದಿಯಲ್ಲಿ ಒಂದು ಕಡೆ ಮಾತ್ರ ಸದ್ಯ ಜಲಸಾಹಸ ಕ್ರೀಡೆ ನಡೆಸಲಾಗುತ್ತಿದೆ. ಉಳಿದೆಡೆ ಅದರಲ್ಲೂ ಚಿಕ್ಕಮಗಳೂರು ಜಿಲ್ಲಾ ಕೇಂದ್ರದ ಸುತ್ತಮುತ್ತ ಜಲಸಾಹಸ ಕ್ರೀಡೆಗಳಿಲ್ಲ. 

ADVERTISEMENT

ಐತಿಹಾಸಿಕ ಕೆರೆಗಳಾದ ಮದಗದ ಕೆರೆ ಮತ್ತು ಅಯ್ಯನಕೆರೆಗಳು ವಿಸ್ತಾರವಾಗಿದ್ದು, ಬೇಸಿಗೆಯಲ್ಲೂ ನೀರು ಉಳಿಸಿಕೊಳ್ಳುವಷ್ಟು ದೊಡ್ಡ ಕೆರೆಗಳಾಗಿವೆ. ಇಲ್ಲಿ ಜಲಸಾಹಸ ಕ್ರೀಡೆಗಳನ್ನು ಆರಂಭಿಸಲು ತಯಾರಿ ನಡೆಸುತ್ತಿದೆ. ಅದರ ಜತೆಗೆ ಬೆಳವಾಡಿ ಕೆರೆ ಮತ್ತು ನಗರದ ಹೊರ ವಲಯದಲ್ಲಿ ಮೂಡಿಗೆರೆ ರಸ್ತೆಯಲ್ಲಿರುವ ಮೂಗ್ತಿಹಳ್ಳಿ ಕೆರೆಗಳಲ್ಲಿ ಜಲಸಾಹಸ ಕ್ರೀಡೆಗಳನ್ನು ಆಯೋಜಿಸಲು ಅವಕಾಶ ಇದೆ.

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ ಕೆರೆಗಳಲ್ಲಿ ಈ ಕ್ರೀಡೆಗಳನ್ನು ಆರಂಭಿಸಲು ಆ ಇಲಾಖೆಯಿಂದ ನಿರಾಕ್ಷೇಪಣೆ ಪಡೆಯಬೇಕಿದೆ. ನೀರಾಕ್ಷೇಪಣೆ ದೊರೆತರೆ ಖಾಸಗಿ ಸಹಭಾಗಿತ್ವದಲ್ಲಿ ಜಲಸಾಹಸ ಕ್ರೀಡೆಗಳನ್ನು ಆರಂಭಿಸಬಹುದು ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಕೆಲವೆಡೆ ಅರಣ್ಯ ಇಲಾಖೆ ಅನುಮತಿಯನ್ನೂ ಪಡೆಯಬೇಕಿದ್ದು, ಈ ಪ್ರಕ್ರಿಯೆ ಕೂಡ ನಡೆಯುತ್ತಿದೆ ಎಂದು ತಿಳಿಸಿದರು.

ಮೂಗ್ತಿಹಳ್ಳಿ ಕೆರೆ ನಗರಕ್ಕೆ ಸಮೀಪದಲ್ಲೇ ಅದರಲ್ಲೂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಇರುವುದರಿಂದ ಜನರಿಗೆ ಹತ್ತಿರವಾಗಲಿದೆ. ಇಲ್ಲಿ ಜಲಸಾಹಸ ಕ್ರೀಡೆಗಳು ಆರಂಭವಾದರೆ ಯಶಸ್ವಿಯಾಗಲಿದೆ ಎಂದು ವಿವರಿಸಿದರು.

ಕೋಟೆಕೆರೆ, ರಾಮನಹಳ್ಳಿ ಕೆರೆಗಳಲ್ಲೂ ಜಲಸಾಹಸ ಕ್ರೀಡೆ ನಡೆಸಬಹುದು. ಹಿರೇಕೊಳೆಲೆ ಕೆರೆಯಿಂದ ಕುಡಿಯುವ ನೀರು ಸರಬರಾಜು ಆಗುತ್ತಿರುವುದರಿಂದ ಅಲ್ಲಿ ಜಲಸಾಹಸ ಕ್ರೀಡೆಗೆ ಅವಕಾಶ ಇಲ್ಲ. ಡೀಸೆಲ್ ಮೋಟರ್ ಬಳಸದೆ ಕೇವಲ ಪೆಡಲ್‌ ಮಾಡುವ ಬೋಟ್‌ಗಳನ್ನು ಬಳಸಬಹುದು. ಮುಂದಿನ ದಿನಗಳಲ್ಲಿ ಪರಿಶೀಲಿಸಲಾಗುವುದು. ಸದ್ಯ ಗುರುತಿಸಿರುವ ನಾಲ್ಕು ಕೆರೆಗಳಲ್ಲಿ ಜಲ ಸಾಹಸ ಕ್ರೀಡೆ ಆರಂಭಿಸಲು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಮೂಲಕ ಟೆಂಡರ್ ಕರೆಯಲಾಗುವುದು ಎಂದು ಮಾಹಿತಿ ನೀಡಿದರು.

ಸರ್ಕಾರಕ್ಕೂ ವರಮಾನ

ಕ್ರೀಡೆ ನಡೆಸುವ ಮುಂದೆ ಬರುವ ಏಜೆನ್ಸಿಗಳು ಹಣ ಪಾವತಿಸಬೇಕಿದ್ದು ಇದರಿಂದ ಸರ್ಕಾರಕ್ಕೂ ವರಮಾನ ಬರಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಮೂಲಸೌಕರ್ಯ ಸೇರಿ ಎಲ್ಲವನ್ನೂ ಗುತ್ತಿಗೆ ಪಡೆದ ಏಜೆನ್ಸಿಯೇ ನೋಡಿಕೊಳ್ಳಲಿದೆ. ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಜಲ ಸಾಹಸ ಕ್ರೀಡೆಯಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ ಎಂದರು.

***

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.