ADVERTISEMENT

ಚಿಕ್ಕಮಗಳೂರು: ಆರು ನಕ್ಸಲರು ಮುಖ್ಯವಾಹಿನಿಗೆ ನಾಳೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2025, 21:36 IST
Last Updated 6 ಜನವರಿ 2025, 21:36 IST
   

ಚಿಕ್ಕಮಗಳೂರು: ಆರು ನಕ್ಸಲರು ಮುಖ್ಯವಾಹಿನಿಗೆ ಬರುವ ದಿನಾಂಕ ಬಹುತೇಕ ಅಂತಿಮವಾಗಿದ್ದು, ಬುಧವಾರ ಈ ಪ್ರಕ್ರಿಯೆಗಳು ನಡೆಯುವ ಸಾಧ್ಯತೆ ಇದೆ.

ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಅರೋಲಿ, ಕೆ.ವಸಂತ, ಟಿ.ಎನ್.ಜೀಶ್ ಮುಖ್ಯವಾಹಿನಿಗೆ ಬರಲು ಒಪ್ಪಿದ್ದು, ಸರ್ಕಾರ ಕೂಡ ಸಮ್ಮತಿ ಸೂಚಿಸಿದೆ. ಬೇಕಿರುವ ತಯಾರಿಗಳನ್ನು ಪೊಲೀಸ್ ಇಲಾಖೆ ಮಾಡಿಕೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಗುಪ್ತಚರ ಇಲಾಖೆ ಅಧಿಕಾರಿಗಳ ಜತೆ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ, ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರು ಮೇಲಿಂದ ಮೇಲೆ ನಡೆಸಿರುವ ಸಭೆಯಲ್ಲಿ ಪೂರ್ವ ತಯಾರಿಗಳು ಅಂತಿಮಗೊಂಡಿವೆ. ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿಗೆ ಆರು ಜನ ಬರಲಿದ್ದು, ಅಲ್ಲಿ ಎಲ್ಲಾ ಪ್ರಕ್ರಿಯೆಗಳು ನಡೆಯಲಿವೆ ಎಂದು ಮೂಲಗಳು ಖಚಿತಪಡಿಸಿವೆ.

ADVERTISEMENT

ಈ ತಂಡದಿಂದ ಬೇರ್ಪಟ್ಟಿರುವ ಜಾನ್ ಅಲಿಯಾಸ್ ಜಯಣ್ಣ ಮಾತ್ರ ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನಲಾಗಿದೆ. ಅವರೂ ಮುಖ್ಯವಾಹಿನಿಗೆ ಬಂದರೆ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ನಕ್ಸಲ್ ಮುಕ್ತವಾಗಲಿವೆ ಎನ್ನಲಾಗಿದೆ.

ಸಿ.ಎಂ. ಕರೆ:
ರಾಜ್ಯದ ನಕ್ಸಲರು ಶಸ್ತ್ರಾಸ್ತ್ರ ತೊರೆದು ಮುಖ್ಯವಾಹಿನಿಗೆ ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾರದ ಹಿಂದೆ (ಡಿ.30)ಕರೆ ಕೊಟ್ಟಿದ್ದರು. ನಕ್ಸಲರು ಮುಖ್ಯವಾಹಿನಿಗೆ ಬರಲು ಮಾತುಕತೆಗೆ ಮುಂದಾದರೆ ಕಾನೂನಿನ ಚೌಕಟ್ಟಿನಲ್ಲಿ ಸ್ವಾಗತಿಸಲಾಗುವುದು. ಸಹಾನುಭೂತಿಯಿಂದ ನಡೆಸಿಕೊಳ್ಳಲಾಗುವುದು. ಸರ್ಕಾರ ಈಗಾಗಲೇ ರೂಪಿಸಿರುವ ನೀತಿಯನ್ನು ಇನ್ನಷ್ಟು ಸರಳಗೊಳಿಸಿ ಜಾರಿ ಮಾಡಲಾಗುವುದು ಎಂದು ತಿಳಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.