
ಬಾಳೆಹೊನ್ನೂರು: ಮುಖ್ಯಮಂತ್ರಿ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದರಂತೆ ಎಲ್ಲ ನಡೆಯಲಿದ್ದು, ಕ್ರಾಂತಿ ಮಾಡಿ ತೀರ್ಮಾನ ತೆಗೆದುಕೊಳ್ಳುವ ಪರಿಸ್ಥಿತಿ ಇಲ್ಲ. ನವಂಬರ್ ತಿಂಗಳ ಆರಂಭದಿಂದ ಕೊನೆಯವರೆಗೂ ತಣ್ಣಗಿರಲಿದೆ ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ಹೇಳಿದರು.
ಪತ್ನಿ ಜೊತೆ ರಂಭಾಪುರಿ ಮಠಕ್ಕೆ ಭೇಟಿ ನೀಡಿ, ಕ್ಷೇತ್ರನಾಥ ವೀರಭದ್ರಸ್ವಾಮಿ ಹಾಗೂ ರೇಣುಕಾಚಾರ್ಯರಿಗೆ ಪೂಜೆ ಸಲ್ಲಿಸಿದ ನಂತರ ವೀರಸೋಮೇಶ್ವರ ಸ್ವಾಮೀಜಿ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಕೊನೆಯುಸಿರುವವರೆಗೂ ಸಿಎಂ, ಡಿಸಿಎಂ ಕಾಂಗ್ರೆಸ್ನಲ್ಲಿ ಒಟ್ಟಾಗಿರಲಿದ್ದು, ಯಾವುದೇ ಅನುಮಾನ ಇಲ್ಲ. ಪಕ್ಷದ ಬಲವರ್ಧನೆ ಹಾಗೂ ನಾಡಿನ ಅಭಿವೃದ್ಧಿಗೆ ಹೆಚ್ಚಿನ ಶಕ್ತಿ ನೀಡುವಂತೆ ಕೋರಿ ಪೀಠಕ್ಕೆ ಬಂದಿದ್ದು, ಸ್ವಾಮೀಜಿ ಆಶೀರ್ವಾದ ಪಡೆದಿದ್ದೇನೆ’ ಎಂದರು.
ಕಾಳುಮೆಣಸಿಗೆ ರಾಜ್ಯ ಸರ್ಕಾರ ಎಪಿಎಂಸಿ ಮೂಲಕ ಶೇ 5 ತೆರಿಗೆ ಹಾಕುತ್ತಿದ್ದು, ಬೆಳೆಗಾರರಿಗೆ ಇದರಿಂದ ಹೊರೆಯಾಗುತ್ತಿದ್ದು, ಹೊರ ರಾಜ್ಯಗಳ ಖರೀದಿದಾರರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ, ಇದಕ್ಕೆ ಪರಿಹಾರವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತೋಟಗಾರಿಕಾ ಇಲಾಖೆ ಹಾಗೂ ಎಪಿಎಂಸಿ ಅದನ್ನು ನಿರ್ವಹಿಸುತ್ತಿದ್ದು, ರೈತರಿಗೆ ತೊಂದರೆಯಾಗುತ್ತಿರುವ ಬಗ್ಗೆ ಮಾಹಿತಿ ಪಡೆದು ಸಂಬಂಧಪಟ್ಟವರ ಜತೆ ಚರ್ಚಿಸಲಾಗುವುದು. ಕಳೆದ ಬಜೆಟ್ನಲ್ಲಿ ಭತ್ತದ ಬೆಳೆಯುವ ರೈತರಿಗೆ ಪ್ರೋತ್ಸಾಹಧನ ನೀಡುವ ಕುರಿತು ಗಮನ ಸೆಳೆದಿದ್ದು, ಈ ಸಂಬಂಧ ಮುಖ್ಯಮಂತ್ರಿ ಜೊತೆ ಚರ್ಚಿಸಲಾಗುವುದು ಎಂದರು.
ಶಾಸಕ ಟಿ.ಡಿ.ರಾಜೇಗೌಡ, ಬಿ.ಕಣಬೂರು ಗ್ರಾ.ಪಂ. ಅಧ್ಯಕ್ಷ ರವಿಚಂದ್ರ, ಎಂ.ಎಸ್.ಚೆನ್ನಕೇಶವ, ಕಾಂಗ್ರೆಸ್ ಮುಖಂಡ ಬಿ.ಕೆ.ಮಧುಸೂದನ ಭಂಡಾರಿ, ಯುವರಾಜ, ಗ್ರಾ.ಪಂ. ಮಾಜಿ ಅಧ್ಯಕ್ಷ ಮಹೇಶ್ ಆಚಾರ್ಯ, ಇಬ್ರಾಹಿಂ ಶಾಫಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.