ADVERTISEMENT

ಉಡುಪಿ ಮೀನುಗಾರರ ಕಣ್ಮರೆ: ಕೇಂದ್ರ,ರಾಜ್ಯ ಸರ್ಕಾರದ ವಿರುದ್ಧ ದಾವೆ–ಪಿ.ಅಮೃತ್‌ಶೆಣೈ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 9:44 IST
Last Updated 15 ಏಪ್ರಿಲ್ 2019, 9:44 IST
ಪಿ.ಅಮೃತ್‌ಶೆಣೈ
ಪಿ.ಅಮೃತ್‌ಶೆಣೈ   

ಚಿಕ್ಕಮಗಳೂರು: ಉಡಪಿಯ ಮೀನುಗಾರರು ಸಮುದ್ರದಲ್ಲಿ ಕಣ್ಮರೆಯಾಗಿರುವ ಪ್ರಕರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಪ್ರತಿವಾದಿಯಾಗಿಸಿ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಎಂದು ಉಡುಪಿ–ಚಿಕ್ಕಮಗಳೂರು ಲೋಕಸಭಾಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಪಿ.ಅಮೃತ್‌ಶೆಣೈ ಇಲ್ಲಿ ಸೋಮವಾರ ತಿಳಿಸಿದರು.

ಉಡುಪಿಯ ಮೀನುಗಾರರು ಸಮುದ್ರದಲ್ಲಿ ಬೋಟ್ ಸಮೇತ ಕಣ್ಮರೆಯಾಗಿ ನೂರಕ್ಕು ಹೆಚ್ಚು ದಿನಗಳಾಗಿವೆ. ಅವರ ಬಗ್ಗೆ ಈ ವರೆಗೆ ಸಣ್ಣ ಕುರುಹು ಸಿಕ್ಕಿಲ್ಲ. ಪ್ರಕರಣದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೇ ಸ್ಪಷ್ಟನೆ ನೀಡುತ್ತಿಲ್ಲ. ಸರ್ಕಾರಕ್ಕೆ ಬಿಸಿ ಮುಟ್ಟಿಸುವ ನಿಮಿತ್ತ ಚುನಾವಣೆ ನಂತರ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಅವರು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

‘ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಎರಡು ಟ್ಯಾಬ್ಲೋ ತಂಡಗಳು ಪ್ರಚಾರ ನನ್ನ ಪರವಾಗಿ ಪ್ರಚಾರ ನಡೆಸುತ್ತಿವೆ. ಒಂದು ತಂಡದಲ್ಲಿ ಮನಶಾಸ್ತ್ರಜ್ಞೆ ಜಯಶ್ರೀಭಟ್ ಹಾಗೂ ಮತ್ತೊಂಡು ತಂಡದಲ್ಲಿ ಕವಿ ಶಾಹಿದ್ ಅಲಿ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್‌, ಬಿಜೆಪಿಯ ಬಲಿಷ್ಠ ಅಭ್ಯರ್ಥಿಗಳ ಎದುರು ಮತದಾರರು ನನ್ನೊಂದಿಗೆ ಬಹಿರಂಗವಾಗಿ ಗುರತಿಸಿಕೊಳ್ಳಲು ಇಷ್ಟಪಡುತ್ತಿಲ್ಲ. ಆದರೆ ನನಗೆ ಮತನೀಡುವುದಾಗಿ ಭರವಸೆ ನೀಡಿದ್ದಾರೆ.ಅದರಿಂದ ಗೆಲ್ಲುವ ವಿಶ್ವಾಸ ಇಮ್ಮಡಿಯಾಗಿದೆ’ ಎಂದರು.

ADVERTISEMENT

ಉಡುಪಿ, ಚಿಕ್ಕಮಗಳೂರು ಜಿಲ್ಲೆ ಅದ್ಭುತ ಪ್ರಾಕೃತಿಕ ಸೊಬಗನ್ನು ಹೊಂದಿದೆ. ಇಲ್ಲಿನ ಪ್ರವಾಸಿ ತಾಣಗಳನ್ನು ವಿಶ್ವದರ್ಜೆಯಲ್ಲಿ ಅಭಿವೃದ್ಧಿ ಪಡಿಸಿದರೆ, ಎರಡು ಜಿಲ್ಲೆಗಳಲ್ಲಿ ವ್ಯಾಪಾರ ವಹಿವಾಟು ಹೆಚ್ಚುತ್ತದೆ. ಸ್ಥಳೀಯರು ಆರ್ಥಿಕವಾಗಿ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದರು.

‘ಚಿಕ್ಕಮಗಳೂರು ಜಿಲ್ಲೆಗೆ ಈರುಳ್ಳಿ ಗೋದಾಮು ಅಗತ್ಯವಿದೆ. ಬಡವರು ಸಾಲ ಪಡೆಯಲು, ಮರುಪಾವತಿಸಲು ಅನುಕೂಲವಾಗುವಂತೆ ಬ್ಯಾಂಕಿಂಗ್ ನೀತಿ ಬದಲಾವಣೆ ಆಗಬೇಕು. ಉಡುಪಿ ಜಿಲ್ಲೆಯ ವಿದ್ಯಾವಂತರನ್ನು ಉತ್ಪಾದಿಸುವ ಕಾರ್ಖಾನೆಯಂತಾಗಿದೆ. ಪದವಿ ಪಡೆದ ನಂತರ ಯುವಪೀಳಿಗೆ ಅಮೆರಿಕ, ದುಬೈ ಕಡೆಗೆ ಉದ್ಯೋಗ ಅರಸಿ ಹೋಗುತ್ತಿದ್ದಾರೆ. ಅವರ ಪೋಷಕರಿಗೆ ತಿಂಗಳಿಗೊಮ್ಮೆ ಹಣ ಕಳುಹಿಸುತ್ತಾರೆ. ಇದು ಹೀಗೆ ಮುಂದುವರೆದರೆ ಒಂದು ದಿನ ಜಿಲ್ಲೆಯು ವೃದ್ಧಾಶ್ರಮವಾಗುತ್ತದೆ. ಅದಕ್ಕೆ ಜಿಲ್ಲೆಯಲ್ಲಿ ಕೈಗಾರಿಕೆಗೆ ಒತ್ತು ನೀಡಬೇಕು. ಸಂಸದನಾಗಿ ಆಯ್ಕೆಯಾದರೆ ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಸಂಸತ್ತಿನಲ್ಲಿ ಧ್ವನಿ ಎತ್ತುತ್ತೇನೆ’ಎಂದರು.

ಬೆಂಬಲಿಗರಾದ ಅನಿತಾಡಿಸೋಜಾ, ಪ್ರಶಾಂತ್ ಕುಂದರ್, ಹನೀಫ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.