ADVERTISEMENT

ಬಾಲಕಿಯ ಅತ್ಯಾಚಾರ ಪ್ರಕರಣ: ನಿಷ್ಪಕ್ಷಪಾತ ತನಿಖೆಗೆ ಒತ್ತಾಯ

ಡಾ.ಅಂಶುಮಂತ್ ಖಂಡನೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 17:10 IST
Last Updated 2 ಫೆಬ್ರುವರಿ 2021, 17:10 IST
ಡಾ.ಕೆ.ಪಿ ಅಂಶುಮಂತ್
ಡಾ.ಕೆ.ಪಿ ಅಂಶುಮಂತ್   

ಶೃಂಗೇರಿ: ‘ಗೋಚವಳ್ಳಿಯಲ್ಲಿ ಬಾಲಕಿ ಮೇಲೆ ನಡೆದಿರುವ ಅತ್ಯಾಚಾರ ಘಟನೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಇದರ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು ಹಾಗೂ ಆರೋಪಿಗಳಿಗೆ ಶಿಕ್ಷೆಯಾಗಬೇಕು’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಪಿ ಅಂಶುಮಂತ್ ಆಗ್ರಹಿಸಿದರು.

ಶೃಂಗೇರಿಯ ಶಾರದಾ ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ ಇದಾಗಿದ್ದು, ಈ ಕೃತ್ಯ ಜಿಲ್ಲೆಗೆ ಕಪ್ಪು ಚುಕ್ಕೆಯಾಗಿದೆ. ಬಿಜೆಪಿ, ಬಜರಂಗದಳ, ಶ್ರೀರಾಮಸೇನೆ ಮತ್ತು ಸಹ ಸಂಘಟನೆಗಳು ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಸಮಾಜ ಮತ್ತು ಕಾನೂನಿನ ಬಗ್ಗೆ ಗೌರವವಿಲ್ಲದ ದುಷ್ಕರ್ಮಿಗಳು ಅತ್ಯಂತ ನೀಚ ಕೃತ್ಯಕ್ಕೆ ಇಳಿದಿದ್ದಾರೆ’ ಎಂದು ಹೇಳಿದರು.

‘ಸಂಸದೆ ಶೋಭಾ ಕರಂದ್ಲಾಜೆ ರಾಜ್ಯದಲ್ಲಿ ನಡೆಯುವ ಎಲ್ಲಾ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡುತ್ತಾರೆ. ಆದರೆ, ತಮ್ಮ ಕ್ಷೇತ್ರದಲ್ಲಿ ಆದ ಅತ್ಯಾಚಾರ ಘಟನೆ ಬಗ್ಗೆ ಮಾತನಾಡದಿರುವುದು ಅನುಮಾನಕ್ಕೆ ಕಾರಣವಾಗಿದೆ. ಆಡಳಿತ ವ್ಯವಸ್ಥೆ ಬಿಗಿಯಾಗಿರಬೇಕು. ಮುಖ್ಯಮಂತ್ರಿ ರಾಜ ಕೀಯ ಕಾರ್ಯದರ್ಶಿ ಡಿ.ಎನ್ ಜೀವ ರಾಜ್ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡದಿ ರುವುದರಿಂದ ಘಟನೆಗೆ ಪರೋಕ್ಷ ಬೆಂಬಲ ನೀಡುತ್ತಿರುವಂತೆ ಗೋಚರಿ ಸುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಕಂದಾಯ ಸಚಿವ ಆರ್.ಅಶೋಕ್‍ ಅವರ ಆಪ್ತ ಕಾರ್ಯದರ್ಶಿಯು ಶೃಂಗೇರಿ ಉಪ ನೋಂದಾಣಾಧಿಕಾರಿಯ ಬಳಿ ಹಣ ಕೀಳುವ ಪ್ರಯತ್ನ ಮಾಡಿರುವುದರ ಹಿಂದೆ ಸಚಿವರ ಕುಮ್ಮಕ್ಕು ಇರುವ ಅನುಮಾನವಿದೆ. ಯಾವುದೇ ಶಿಕ್ಷೆಯನ್ನು ನೀಡದೆ ಆಪ್ತ ಕಾರ್ಯದರ್ಶಿಯನ್ನು ವರ್ಗಾವಣೆ ಮಾಡಿರುವುದು, ಭ್ರಷ್ಟಾ ಚಾರ ಮಾಡಿರುವುದು ಗೋಚರಿಸುತ್ತದೆ. ಸಚಿವರನ್ನು ಸಂಪುಟದಿಂದ ಕೈಬಿಡಬೇಕು’ ಎಂದು ಒತ್ತಾಯಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಮಾತನಾಡಿ, ‘ಗೋಚವಳ್ಳಿ ಅತ್ಯಾಚಾರ ಘಟನೆ ಖಂಡನೀಯವಾಗಿದ್ದು, ಮಹಿಳೆ ಯರು ನಿರ್ಭಯದಿಂದ ಇರುವಂತಹ ವಾತಾವರಣ ನಿರ್ಮಾಣವಾಗಬೇಕು. ಸರ್ಕಾರ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು’ ಎಂದರು.

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಕೀಲಾ ಗುಂಡಪ್ಪ, ಸಂಧ್ಯಾ, ಲತಾ, ಕುಸುಮಾ, ಉಮೇಶ್ ಪುದುವಾಳ್, ಶಿವಮೂರ್ತಿ, ಲ್ಯಾಬ್ ದಿನೇಶ್ ಶೆಟ್ಟಿ, ಮುರುಳಿಧರ ಪೈ, ರಫೀಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.