ಬೀರೂರು: ಕಡೂರು- ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಬೈಕ್ಗಳಲ್ಲಿ ಸಂಚರಿಸುತ್ತಾ, ಮಾರ ಕಾಸ್ತ್ರಗಳನ್ನು ಹಿಡಿದು ಪ್ರಯಾಣಿಕರನ್ನು ಅಡ್ಡಗಟ್ಟಿ, ಬೆದರಿಸಿ ಹಣ, ಚಿನ್ನಾಭರಣ ದೋಚುತ್ತಿದ್ದ ನಾಲ್ವರು ಆರೋಪಿಗಳನ್ನು ಬೀರೂರು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ 11.25 ಗ್ರಾಂ ಚಿನ್ನದ ಬಳೆ, ₹ 6,070 ನಗದು ಮತ್ತು ಹಿರಿಯೂರು ತಾಲ್ಲೂಕಿನಲ್ಲಿ ಕಳವು ಮಾಡಿದ್ದ ಒಂದು ಬೈಕ್, ಕೃತ್ಯಕ್ಕೆ ಬಳಸಿದ ಮೂರು ಬೈಕ್, ಒಂದು ಮೊಬೈಲ್, ಮಚ್ಚು, ಚೂರಿ, ಮರದ ದೊಣ್ಣೆಗಳನ್ನು ವಶಪಡಿಸಿಕೊಂಡಿದ್ದಾರೆ.
ಹೆದ್ದಾರಿ ದರೋಡೆ ಪ್ರಕರಣಗಳು ನಾಗರಿಕರಲ್ಲಿ ಆತಂಕ ಮೂಡಿಸಿದ್ದ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ತರೀಕೆರೆ ಡಿವೈಎಸ್ಪಿ ಏಗನಗೌಡರ, ಬೀರೂರು ಸಿಪಿಐ ಕೆ.ಆರ್.ಶಿವಕುಮಾರ್ ಮತ್ತು ಪಿಎಸ್ಐ ಕೆ.ವಿ.ರಾಜಶೇಖರ್ ನೇತೃತ್ವದಲ್ಲಿ ತಂಡ ರಚಿಸಿದ್ದರು.
ಅಧಿಕಾರಿಗಳ ಸಲಹೆಯಂತೆ ರಾತ್ರಿ ಗಸ್ತಿನ ಕರ್ತವ್ಯದಲ್ಲಿದ್ದ ಪಿಎಸ್ಐ ರಾಜಶೇಖರ್, ಪ್ರೊಬೆಷನರಿ ಪಿಎಸ್ಐ ಶಶಿಕುಮಾರ್, ಅಪರಾಧ ವಿಭಾಗದ ಎಚ್.ಬಸವರಾಜಪ್ಪ, ಅಪರಾಧ ವಿಭಾಗದ ಸಿಬ್ಬಂದಿ ಕುಮಾರಸ್ವಾಮಿ, ಡಿ.ವಿ. ಹೇಮಂತಕುಮಾರ್, ಬಿ.ಜಿ.ಮಧು ಮತ್ತು ಸಿ.ಶಿವಕುಮಾರ್ ಬೀರೂರು ಹೊರವಲಯದ ಬ್ಯಾಗಡೆಹಳ್ಳಿ ಗೇಟ್ ಸಮೀಪದ ಐಎಂಎ ಅಸೋಸಿಯೇಷನ್ ಹತ್ತಿರ ಮಂಗಳವಾರ ರಾತ್ರಿ 1.40ರ ಸುಮಾರಿನಲ್ಲಿ ಪೊಲೀಸರನ್ನು ನೋಡಿ ಓಡಿಹೋಗಲು ಯತ್ನಿಸಿದ ಆರೋಪಿಗಳನ್ನು ತಡೆದು ವಿಚಾರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಆರೋಪಿಗಳು ದರೋಡೆ ನಡೆಸುತ್ತಿದ್ದುದು ಬೆಳಕಿಗೆ ಬಂದಿದೆ. ಹೊಸದುರ್ಗ ಮೂಲದ ಮಣಿಕಂಠ, ಮಲ್ಲಿಕಾರ್ಜುನ, ಸುರೇಶ ಮತ್ತು ಗೌತಮ್ ಬಂಧಿತರು. ಮತ್ತೊಬ್ಬ ಆರೋಪಿ ರಮೇಶ ಪರಾರಿಯಾಗಿದ್ದಾನೆ.
ಕಾರ್ಯಾಚರಣೆಯಲ್ಲಿ ಬೀರೂರು ಪೊಲೀಸ್ ಠಾಣಾ ಹೆಡ್ ಕಾನ್ಸ್ಟೆಬಲ್ಗ ಳಾದ ಸಿ.ಎಸ್.ಮಲ್ಲಿಕಾರ್ಜುನ, ಜಿ.ಎಂ.ಶಿವಕುಮಾರ್, ತಿಮ್ಮರಾಯಪ್ಪ, ಎಲ್.ಕೆ.ಹರೀಶ, ರವಿ, ಕಾನ್ಸ್ಪೆಬಲ್ಗಳಾದ ಮಹೇಂದ್ರಕುಮಾರ್, ಜಿ.ಬಿ.ರಾಮಪ್ಪ, ಉಮೇಶ್, ಕಿರಣ್, ಕೆ.ಆರ್.ಶಿವಕುಮಾರ್, ಗಿರೀಶ್ ನಾಯ್ಕ, ಮಧುನಾಯ್ಕ, ರಘು, ಮಂಜಾ ನಾಯ್ಕ, ಜೀಪ್ ಚಾಲಕರಾದ ಅಶೋಕ್, ಜಿ.ಎಸ್.ಮಧು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.