ADVERTISEMENT

ನ್ಯಾಯ ಸಿಗುವವರೆಗೂ ಹೋರಾಟ: ಗೋವಿಂದ ಸಣ್ಣಕ್ಕಿ

ಮೂರನೇ ದಿನಕ್ಕೆ ಕಾಲಿಟ್ಟ ಭೂಮಿಗಾಗಿ ಅಹೋರಾತ್ರಿ ಹೋರಾಟ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 3:11 IST
Last Updated 19 ಫೆಬ್ರುವರಿ 2026, 3:11 IST
ನರಸಿಂಹರಾಜಪುರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ (ಪ್ರೊ.ಕೃಷ್ಣಪ್ಪ ಸ್ಥಾಪಿತ) ಭೂಮಿಗಾಗಿ ಆರಂಭಿಸಿರುವ ಹೋರಾಟಕ್ಕೆ ಬುಧವಾರ ಡಿಎಸ್‌ಎಸ್ ಮುಖಂಡರು ಬೆಂಬಲ ಸೂಚಿಸಿದರು
ನರಸಿಂಹರಾಜಪುರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ (ಪ್ರೊ.ಕೃಷ್ಣಪ್ಪ ಸ್ಥಾಪಿತ) ಭೂಮಿಗಾಗಿ ಆರಂಭಿಸಿರುವ ಹೋರಾಟಕ್ಕೆ ಬುಧವಾರ ಡಿಎಸ್‌ಎಸ್ ಮುಖಂಡರು ಬೆಂಬಲ ಸೂಚಿಸಿದರು   

ನರಸಿಂಹರಾಜಪುರ: ತಾಲ್ಲೂಕು ಆಡಳಿತ ಕಚೇರಿ ಮುಂಭಾಗದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ (ಪ್ರೊ.ಕೃಷ್ಣಪ್ಪ ಸ್ಥಾಪಿತ) ಆರಂಭಿಸಿರುವ ಭೂಮಿಗಾಗಿ ಹೋರಾಟ ಅಹೋರಾತ್ರಿ ಪ್ರತಿಭಟನಾ ಸಭೆಯು ಬುಧವಾರವೂ ಮುಂದುವರೆಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಬೆಳಗಾವಿ ಜಿಲ್ಲಾ ಸಂಚಾಲಕ ಗೋವಿಂದ ಸಣ್ಣಕ್ಕಿ, ‘ಮೂರು ದಿನಗಳಿಂದಲೂ ಭೂಮಿಗಾಗಿ ಹೋರಾಟ ನಡೆಸುತ್ತಿದ್ದರೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ. ತಹಶೀಲ್ದಾರ್ ನಿರಾಶಾದಾಯಕ ಉತ್ತರ ನೀಡಿದ್ದಾರೆ. ‌ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸಲಾಗುವುದು’ ಎಂದರು.

ದಲಿತ ಸಂಘರ್ಷ ಸಮಿತಿಯ ಶಿವನಿಯ ಎನ್. ಮಹೇಂದ್ರ ಸ್ವಾಮಿ ಮಾತನಾಡಿ, ‘ದಲಿತರಿಗೆ ಭೂಮಿ ಮಂಜೂರು ಮಾಡುವಂತೆ 2005ರಲ್ಲಿ ಒಂದು ತಿಂಗಳ ಕಾಲ ಪ್ರತಿಭಟನೆ ನಡೆಸಲಾಗಿತ್ತು. ಅಂದಿನ ಶಾಸಕರು, ಉಪವಿಭಾಗಾಧಿಕಾರಿಗಳು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರಿಂದ ತಾತ್ಕಾಲಿಕವಾಗಿ ಹೋರಾಟ ಹಿಂಪಡೆಯಲಾಗಿತ್ತು. ದಲಿತರಿಗೆ ನ್ಯಾಯ ಇದುವರೆಗೆ ಸಿಕ್ಕಿಲ್ಲ. ನ್ಯಾಯ ಕೊಡಿಸಲು ತಾಲ್ಲೂಕು ಆಡಳಿತ ವಿಫಲವಾಗಿದೆ’ ಎಂದು ದೂರಿದರು.

ADVERTISEMENT

ರಾಜ್ಯ ಸಮಿತಿ ಸದಸ್ಯ ರಾಜೇಶ್ ಮಾತನಾಡಿ, ಮೂರು ದಿನಗಳಿಂದ ಹೋರಾಟ ಮಾಡುತ್ತಿದ್ದರೂ ಸರ್ಕಾರ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸರ್ಕಾರ ದಲಿತರಿಗೆ ಭೂಮಿ ಕೊಡದಿದ್ದರೆ ದಯಾಮರಣ ನೀಡಲಿ ಎಂದರು.

ದಲಿತ ಸಂಘರ್ಷ ಸಮಿತಿಯ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಎಂ.ವಿ. ಭವಾನಿ ಮಾತನಾಡಿ, ಸಂವಿಧಾನ ಸರ್ವರಿಗೂ ಸಮಪಾಲು, ಸಮಬಾಳಿನ ಹಕ್ಕನ್ನು ನೀಡಿದೆ. ಭೂಮಿ ಕೊಡದಿದ್ದರೆ ಜೀವ ಹೋದರೂ ಪ್ರತಿಭಟನಾ ಸ್ಥಳದಿಂದ ಕದಲುವುದಿಲ್ಲ ಎಂದರು.

ಜಿಲ್ಲಾ ಎಸ್.ಸಿ, ಎಸ್.ಟಿ ದೌರ್ಜನ್ಯ ಸಮಿತಿಯ ಸದಸ್ಯ ಎಂ. ಮಹೇಶ್ ಮಾತನಾಡಿ, ಭೂಮಿಯ ಹಕ್ಕಿಗಾಗಿ ದಲಿತರು ಹೋರಾಟ ಮಾಡುತ್ತಾ ಬಂದರೂ ನ್ಯಾಯ ಸಿಕ್ಕಿಲ್ಲ. ಹೋರಾಟದಲ್ಲಿ ದಲಿತರು, ಅರ್ಹ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರೆ ಸರ್ಕಾರದ ಗಮನ ಸೆಳೆಯಲು ಸಾಧ್ಯವಾಗುತ್ತದೆ ಎಂದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ತರೀಕೆರೆ ಎನ್. ವೆಂಕಟೇಶ್ ಮಾತನಾಡಿ, ‘ಪ್ರೊ.ಬಿ.ಕೃಷ್ಣಪ್ಪ ಅವರು ದಲಿತರಿಗೆ ಭೂಮಿಯ ಹಕ್ಕಿಗಾಗಿ ಒಂದು ವರ್ಷಗಳ ಕಾಲ ಹೋರಾಟ ಮಾಡಿದ ಫಲವಾಗಿ ಪಿಟಿಸಿಯಲ್ ಕಾಯ್ದೆ ಜಾರಿಗೆ ತಂದಿತ್ತು. ಪ್ರಸ್ತುತ ಸರ್ಕಾರ ಇದನ್ನು ತಿದ್ದುಪಡಿ ಮಾಡಲು ಹೊರಟಿರುವುದನ್ನು ಸಮಿತಿ ಖಂಡಿಸುತ್ತದೆ. ದಲಿತರು ಭೂಮಾಲೀಕರು, ಶ್ರೀಮಂತರ ಜಮೀನುಗಳಲ್ಲಿ ಜೀತದಾಳುಗಾಗಿ ದುಡಿದಿದ್ದು ಸ್ವಾಭಿಮಾನಿಗಳಾಗಿ ಬದುಕಲು ಭೂಮಿಗಾಗಿ ಹೋರಾಟ ಮಾಡಲಾಗುತ್ತಿದೆ. ಭೂಮಿ ಕೊಡಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಸರ್ಕಾರಿ ಜಾಗವಿದ್ದ ಪಹಣಿಯನ್ನು ರಾತ್ರೋರಾತ್ರಿ ಅರಣ್ಯ ಎಂದು ತಿದ್ದುಪಡಿ ಮಾಡುವ ಮೂಲಕ ದಲಿತರಿಗೆ ಭೂಮಿ ಸಿಗದಂತೆ ಹುನ್ನಾರ ಮಾಡಲಾಗುತ್ತಿದೆ’ ಎಂದು ದೂರಿದರು.

ಹೋರಾಟವನ್ನು ಬೆಂಬಲಿಸಿ ಡಿಎಸ್‌ಎಸ್ ಮುಖಂಡರಾದ ಡಿ.ರಾಮು, ವಾಲ್ಮೀಕಿ ಶ್ರೀನಿವಾಸ್, ಮಂಜುನಾಥ್ ಮಾತನಾಡಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಎಂ.ಜೆ. ಸಿಜು, ಡಿಎಸ್‌ಎಸ್ ಮುಖಂಡರಾದ ಫಿಕಪ್ ಚಂದ್ರು, ಪವಿತ್ರದೇವರಾಜ್, ವಿಜಯಕುಮಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.