ಕಳಸ: ಇಲ್ಲಿನ ಸಾಯಿ ಮಂದಿರದಲ್ಲಿ ಉದ್ಯಮಿ ಕೆ.ಕೆ.ಬಾಲಕೃಷ್ಣ ಭಟ್ ಕುಟುಂಬಸ್ಥರು ದಸರಾ ಬೊಂಬೆಗಳನ್ನು ಜೋಡಿಸಿದ್ದು, ಸ್ಥಳೀಯರನ್ನು ಸೆಳೆಯುತ್ತಿವೆ.
ಸಾಲುಸಾಲಾಗಿ ಬೊಂಬೆಗಳನ್ನು ಜೋಡಿಸಿದ್ದು, ಕುಟುಂಬದ ಸದಸ್ಯರೇ ಬೊಂಬೆಗಳ ವೈಶಿಷ್ಟ್ಯತೆ ವಿವರಿಸುವುದು ವಿಶೇಷ.
ಪುರಾಣ ಕಥೆಗಳನ್ನು ಸಾರುವ ಬೊಂಬೆಗಳ ಜತೆಗೆ ಆಧುನಿಕತೆಯ ದರ್ಶನವನ್ನೂ ಕೆಲ ಬೊಂಬೆಗಳು ಮಾಡುತ್ತವೆ. ಪುರಾತನ ವಸ್ತುಗಳ ಸಂಗ್ರಹದ ಜತೆಗೆ ನವೀನ ಮಾದರಿಗಳು ಕೂಡ ಬೊಂಬೆಗಳ ಮಗ್ಗುಲಲ್ಲೇ ಇವೆ.
ರಾಮಾಯಣ, ಮಹಾಭಾರತದ ಪ್ರಸಂಗಗಳನ್ನು ಚಿತ್ರಿಸುವ ಸಾಂಪ್ರದಾಯಿಕ ಬೊಂಬೆಗಳು ಈ ಪ್ರದರ್ಶನದ ಪ್ರಮುಖ ಭಾಗ. ಬಾಲಕೃಷ್ಣ, ರಾಧಾಕೃಷ್ಣ, ಬಕಾಸುರ, ರಾಮ-ಲಕ್ಷ್ಮಣ, ಶಂಕರಾಚಾರ್ಯ, ಈಶ್ವರನ ಬೊಂಬೆಗಳು ಗಮನ ಸೆಳೆಯುತ್ತವೆ.
ಮಲೆನಾಡಿನ ಬೆಟ್ಟ ಗುಡ್ಡಗಳ ಮಾದರಿಯ ಜೊತೆಗೆ ಕಣಿವೆಯಲ್ಲಿ ಓಡಾಡುವ ಅತ್ಯಾಧುನಿಕ ವಾಹನಗಳ ಮಾದರಿ ಕೂಡ ವಾಸ್ತವಿಕತೆಗೆ ಹತ್ತಿರವಾಗಿದೆ.
ಪ್ಯಾರಿಸ್ನ ಐಫೆಲ್ ಟವರ್, ಮಲೇಶ್ಯಾದ ಅವಳಿ ಕಟ್ಟಡ, ದುಬೈನ ಬುರ್ಝ್ ಖಲಿಫಾದ ಮಾದರಿಗಳು ಗಮನ ಸೆಳೆಯುತ್ತಿವೆ. 10 ವರ್ಷಗಳಿಂದ ಈ ಬೊಂಬೆ ಪ್ರದರ್ಶನವನ್ನು ನಡೆಸಲಾಗುತ್ತಿದೆ.
ಬಾಲಕೃಷ್ಣ ಭಟ್ ಅವರ ಮಕ್ಕಳು ಮತ್ತು ಕುಟುಂಬಸ್ಥರು ಈ ಬೊಂಬೆ ಪ್ರದರ್ಶನವನ್ನು ಅತ್ಯಂತ ಕಲೆಗಾರಿಕೆಯಿಂದ ಮಾಡಿದ್ದಾರೆ. ಆಸಕ್ತರು ಸಾಯಿ ಮಂದಿರಕ್ಕೆ ಬಂದು ಬೊಂಬೆ ಪ್ರದರ್ಶನ ನೋಡಿ ಆನಂದಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.