ಕೊಪ್ಪ: ದತ್ತ ಜಯಂತಿ ಹಿಂದೂ ಸಮಾಜದ ಜಯಂತಿಯಾಗಬೇಕು, ಮುಂದಿನ ದಿನಗಳಲ್ಲಿ ನಾಡ ಉತ್ಸವವಾಗಬೇಕು ಎಂದು ಬಜರಂಗದಳ ಪ್ರಾಂತ ಸಂಯೋಜಕ ಸುನಿಲ್ ಕೆ.ಆರ್ ಹೇಳಿದರು.
ದತ್ತಜಯಂತಿ ಅಂಗವಾಗಿ ಬಜರಂಗದಳ ವತಿಯಿಂದ ಶುಕ್ರವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ‘ಹಿಂದೂ ಸಂಗಮ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದತ್ತಪೀಠ ಇಸ್ಲಾಂ ಆಕ್ರಮಣಕ್ಕೆ ಒಳಗಾಗಿತ್ತು. ವಿಎಚ್ಪಿ ಹೋರಾಟ ಕೈಗೆತ್ತಿಕೊಂಡ ನಂತರ ಇಂದು ಅರ್ಚಕರ ನೇಮಕವಾಗಿದೆ, ತ್ರಿಕಾಲ ಪೂಜೆ ನಡೆಯುತ್ತಿದೆ. ನಂತರ ರಾಜಕೀಯ, ಸಾಮಾಜಿಕ ಕ್ರಾಂತಿಯಾಗಿದೆ ಎಂದರು.
ಸಂಘಟನೆಯು ಸಮಾಜವನ್ನು ಕಟ್ಟುವ ಹಾಗೂ ರಕ್ಷಣೆ ಮಾಡುವ ಕಾರ್ಯ ಮಾಡುತ್ತಿದೆ. ಲವ್ ಜಿಹಾದ್, ಗೋ ಸಾಗಾಟಗಳು ನಡೆದಾಗ ತಡೆಯುವ ಕೆಲಸ ಮಾಡಿದೆ ಎಂದರು.
ವಿಎಚ್ಪಿ ಜಿಲ್ಲಾ ಕಾರ್ಯದರ್ಶಿ ದೀವಿರ್ ಮಲ್ನಾಡ್ ಮಾತನಾಡಿದರು. ನಿವೃತ್ತ ಶಿಕ್ಷಕ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಜಿಲ್ಲಾ ಸಂಚಾಲಕ ಅಜಿತ್ ಕುಲಾಲ್, ತಾಲ್ಲೂಕು ಸಂಚಾಲಕ ಗಣೇಶ್ ಕೊರಡಿಹಿತ್ಲು ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ಮೇಲಿನಪೇಟೆ ಕುವೆಂಪು ವೃತ್ತದಿಂದ ಬಸ್ ನಿಲ್ದಾಣದವರೆಗೆ ದತ್ತಮಾಲಾಧಾರಿಗಳು ಶೋಭಾಯಾತ್ರೆ ನಡೆಸಿದರು. ಮಾಜಿ ಸಚಿವ ಡಿ.ಎನ್.ಜೀವರಾಜ್ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.