ADVERTISEMENT

ದತ್ತ ಜಯಂತಿ: ಸಿ.ಟಿ.ರವಿ ಸೇರಿ ನೂರಾರು ಕಾರ್ಯಕರ್ತರಿಂದ ಮಾಲೆಧಾರಣೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2023, 7:27 IST
Last Updated 17 ಡಿಸೆಂಬರ್ 2023, 7:27 IST
   

ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್‌, ಬಜರಂಗದಳದಿಂದ ಆಚರಣೆಗೊಳ್ಳುವ ದತ್ತ ಜಯಂತಿಗೆ ಮಾಲಧಾರಣೆ ಕಾರ್ಯಕ್ಕೆ ಭಾನುವಾರ ಚಾಲನೆ ದೊರೆಯಿತು.

ನಗರದ ಕಾಮಧೇನು ಗಣಪತಿ ದೇಗುಲದಲ್ಲಿ ದತ್ತಾತ್ರೇಯ ಸ್ವಾಮಿಗೆ ಪೂಜೆ ನೆರವೇರಿಸಲಾಯಿತು. ಬಿಜೆಪಿ ಮುಖಂಡ ಸಿ.ಟಿ.ರವಿ ಸೇರಿ ನೂರಾರು ಕಾರ್ಯಕರ್ತರು ಮಾಲೆಧಾರಣೆ ಮಾಡಿಕೊಂಡರು.

ಇಂದಿನಿಂದ ಹತ್ತು ದಿನಗಳ ಕಾಲ ದತ್ತ ಜಯಂತಿ ಕಾರ್ಯಕ್ರಮಗಳು ನಡೆಯಲಿವೆ. 24ರಂದು ಅನುಸೂಯ ಜಯಂತಿ, 25ರಂದು ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ, 26ರಂದು ದತ್ತ ಪಾದುಕೆ ದರ್ಶನವನ್ನು ದತ್ತ ಮಾಲಧಾರಿಗಳು ಮಾಡಲಿದ್ದಾರೆ. ಮನ್ನೆಚ್ಚರಿಕೆ ಕ್ರಮವಾಗಿ ಮುಳ್ಳಯ್ಯನಗಿರಿ ಸುತ್ತಮುತ್ತಲ ಪ್ರವಾಸಿ ತಾಣಗಳಿಗೆ ಬೇರೆ ಪ್ರವಾಸಿಗರ ಭೇಟಿಯನ್ನು ಡಿ.22ರಿಂದ 26ರವರೆಗೆ ಜಿಲ್ಲಾಡಳಿತ ನಿರ್ಬಂಧಿಸಿದೆ.  

ADVERTISEMENT

ಟಿಪ್ಪು ಹೆಸರು ಕಾಂಗ್ರೆಸ್ ಕಚೇರಿಗೆ ಇಟ್ಟುಕೊಳ್ಳಲಿ:

‘ಮೈಸೂರಿನ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವುದು ಸೂಕ್ತವಲ್ಲ. ಶಾಸಕ ಅಬ್ಬಯ್ಯ ಪ್ರಸಾದ್ ಅವರು ಬೇಕಿದ್ದರೆ ತಮ್ಮ ಮನೆಗೆ ಇಟ್ಟುಕೊಳ್ಳಲಿ, ಕಾಂಗ್ರೆಸ್‌ನವರು ತಮ್ಮ ಚೇರಿಗೆ ಇಟ್ಟುಕೊಳ್ಳಲಿ’ ಎಂದು ಸಿ.ಟಿ.ರವಿ ಹೇಳಿದರು.

ದತ್ತಮಾಲೆ ಧಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬ್ರಿಟಿಷರ ವಿರುದ್ಧ ಟಿಪ್ಪು ಹೋರಾಟ ಮಾಡಿದ್ದು ನಿರ್ವಿವಾದ. ಅದೇ ರೀತಿ ಹಿಂದೂಗಳ ಮಾರಣ ಹೋಮ ಮಾಡಿದ ಎಂಬುದೂ ಸತ್ಯ. ಮೈಸೂರು ಅರಸರ ರಾಜ ಸ್ವತ್ತಿಗೆಯನ್ನು ಮೋಸದಿಂದ ಕಬಳಿಸಲು ಸಂಚು ಮಾಡಿದ್ದ ಎಂಬುದೂ ಸತ್ಯ. ಮೈಸೂರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ನೀಡಿದ ಕೊಡುಗೆ ಹಲವು. ಆದ್ದರಿಂದ ಅವರ ಹೆಸರನ್ನೇ ವಿಮಾನ ನಿಲ್ದಾಣಕ್ಕೆ ಇಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.