
ಚಿಕ್ಕಮಗಳೂರು: ದತ್ತ ಜಯಂತಿ ನಿಮಿತ್ತ ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತು ಶ್ರೀರಾಮ ಸೇನೆ ನೇತೃತ್ವದಲ್ಲಿ ಶೋಭಾಯಾತ್ರೆ ನಗರದಲ್ಲಿ ಬುಧವಾರ ವಿಜೃಂಭಣೆಯಿಂದ ನಡೆಯಿತು.
ಕಾಮಧೇನು ಮಹಾಶಕ್ತಿ ಗಣಪತಿ ದೇವಾಲಯ ಆವರಣದಿಂದ ಸಂಜೆ ಮೆರವಣಿಗೆ ಹೊರಟಿತು. ಅಲಂಕೃತ ವಾಹನದಲ್ಲಿ ಗುರುದತ್ತಾತ್ರೇಯರ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.
ಶ್ರೀರಾಮ ಸೇರಿ ಹಲವು ಸ್ತಬ್ಧಚಿತ್ರಗಳು ಗಮನಸೆಳೆದವು. ಪಟಾಕಿ ಸದ್ದು, ಸಾಂಸ್ಕೃತಿಕ ಕಲಾ ತಂಡಗಳ ಮೆರಗಿನಲ್ಲಿ ಶೋಭಾಯಾತ್ರೆ ಸಾಗಿತು. ಮೆರವಣಿಗೆಯುದ್ದಕ್ಕೂ ಭಗವಾಧ್ವಜಗಳ ಹಾರಾಟ ಜೋರಾಗಿತ್ತು. ಡಿ.ಜೆ ಅಬ್ಬರ, ಹಾಡು, ಸಂಗೀತಕ್ಕೆ ಯುವಕ –ಯುವತಿಯುರು ಕುಣಿದು ಕುಪ್ಪಳಿಸಿದರು.
ಮಾರ್ಗದುದ್ದಕ್ಕೂ ರಸ್ತೆಯ ಇಕ್ಕೆಲ, ಕಟ್ಟಡಗಳ ಮಹಡಿಗಳಲ್ಲಿ ನಿಂತಿದ್ದ ಜನ ಶೋಭಾಯಾತ್ರೆ ವೀಕ್ಷಿಸಿದರು. ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.