ADVERTISEMENT

ಅ.6ರಿಂದ ದತ್ತಮಾಲಾ ಅಭಿಯಾನ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 20:22 IST
Last Updated 10 ಸೆಪ್ಟೆಂಬರ್ 2019, 20:22 IST
ಗಂಗಾಧರ ಕುಲಕರ್ಣಿ
ಗಂಗಾಧರ ಕುಲಕರ್ಣಿ   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಶ್ರೀರಾಮಸೇನೆ ವತಿಯಿಂದ ಅ. 6ರಿಂದ 13ರವರೆಗೆ ದತ್ತಮಾಲಾ ಅಭಿಯಾನ ನಡೆಯಲಿದೆ ಎಂದು ಸಂಘಟನೆ ರಾಜ್ಯಘಟಕದ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಇಲ್ಲಿ ಮಂಗಳವಾರ ತಿಳಿಸಿದರು.

6ರಂದು ಬೆಳಿಗ್ಗೆ 9 ಗಂಟೆಗೆ ನಗರದ ಶಂಕರ ಮಂಠದಲ್ಲಿ ದತ್ತ ಮಾಲಾಧಾರಣೆ ನಡೆಯಲಿದೆ. ಮಾಲಾಧಾರಿಗಳು ಏಳು ದಿನಗಳು ವೃತಾಚರಣೆ ಮಾಡುವರು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

13ರಂದು ಬೆಳಿಗ್ಗೆ 9.30ಕ್ಕೆ ಶಂಕರಮಠದ ಬಳಿ ಸಭಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಶೋಭಾಯಾತ್ರೆಯು ಎಂ.ಜಿ.ರಸ್ತೆ ಮೂಲಕ ಹಾದು ಆಜಾದ್ ಪಾರ್ಕ್ ತಲುಪಲಿದೆ. ನಾಡಿನ ವಿವಿಧೆಡೆಗಳ ದತ್ತ ಭಕ್ತರು ಪಾಲ್ಗೊಳ್ಳುವರು ಎಂದು ತಿಳಿಸಿದರು.

ADVERTISEMENT

ಶೋಭಾಯಾತ್ರೆ ನಂತರ ದತ್ತಭಕ್ತರು ದತ್ತಪೀಠಕ್ಕೆ ತೆರಳುವರು. ದತ್ತ ಪಾದುಕೆಗಳ ದರ್ಶನ ಮಾಡುವರು. ಗಿರಿಯಲ್ಲಿ ಧಾರ್ಮಿಕ ಸಭೆ, ಹೋಮ, ಪೂಜಾ ಕೈಂಕರ್ಯ ಜರುಗಲಿವೆ. ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಪುನನ್ ಕಾಶ್ಮೀರ ಸಂಘಟನೆಯ ರಾಷ್ಟ್ರೀಯ ಸಂಚಾಲಕ ರಾಹುಲ್‌ಕೌಲ್, ಹಿಂದೂ ಜನಜಾಗೃತಿ ವೇದಿಕೆ ಸದಸ್ಯರು, ಅವಧೂತರು, ಸಾಧುಸಂತರು ಪಾಲ್ಗೊಳ್ಳುವರು ಎಂದರು.

‘ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿಗೆ ಗಮನಹರಿಸುವುದಾಗಿ ಗೃಹಸಚಿವ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್‌ಜೋಶಿ ಹೇಳಿದ್ದಾರೆ. ನಿಷೇಧಕ್ಕೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಶ್ರೀರಾಮಸೇನೆ ರಾಜ್ಯ ಘಟಕದ ಉಪಾಧ್ಯಕ್ಷ ಮಹೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಆನಂದಶೆಟ್ಟಿ ಅಡ್ಯಾರ್, ವಿಭಾಗ ಅಧ್ಯಕ್ಷ ಅಭಿಲಾಷ್, ಜಿಲ್ಲಾಘಟಕದ ಅಧ್ಯಕ್ಷ ರಂಜಿತ್ ಶೆಟ್ಟಿ, ದುರ್ಗಾಸೇನೆ ಜಿಲ್ಲಾಧ್ಯಕ್ಷೆ ಶಾರದಮ್ಮ ಇದ್ದರು.

‘ಸಿ.ಎಂಗೆ ಆಮಂತ್ರಣ’

ದತ್ತಮಾಲಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಇದೇ 16ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಆಮಂತ್ರಣ ನೀಡಲಾಗುವುದು ಎಂದು ಗಂಗಾಧರ ಕುಲಕರ್ಣಿ ತಿಳಿಸಿದರು.

‘ದತ್ತಮಾಲೆ ಧರಿಸಿ ಅಭಿಯಾನದಲ್ಲಿ ಭಾಗವಹಿಸುವುದಾಗಿ ಹಿಂದೊಮ್ಮೆ ಯಡಿಯೂರಪ್ಪ ಹೇಳಿದರು. ಅದರಂತೆ ಅಭಿಯಾನದಲ್ಲಿ ಭಾಗವಹಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.