ADVERTISEMENT

ಕಳಸ| ಕಂದಾಯ ನಿರೀಕ್ಷಕರಿಗೆ ಡಿಸಿ ಕಪಾಳಮೋಕ್ಷ ಯತ್ನ; ವಿಡಿಯೊ ವೈರಲ್‌

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 16:00 IST
Last Updated 23 ಜನವರಿ 2020, 16:00 IST

ಕಳಸ:ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕಳಸ ಸಮೀಪದ ಹಿರೇಬೈಲಿನಲ್ಲಿ ಬುಧವಾರ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ಅವರು ಕಂದಾಯ ನಿರೀಕ್ಷಕ (ಆರ್‌ಐ) ಅಜ್ಜೇಗೌಡ ಅವರಿಗೆ ಕಪಾಳಮೋಕ್ಷಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದ್ದು, ಸಂಬಂಧಿಸಿದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಹಿರೇಬೈಲಿನಲ್ಲಿ ಅತಿವೃಷ್ಟಿ ಸಂತ್ರಸ್ತರನ್ನು ಬಗಾದಿ ಗೌತಮ್ ಭೇಟಿ ಮಾಡಿದ್ದರು. ಆ ಸಂದರ್ಭದಲ್ಲಿ ಸ್ಥಳೀಯ ವ್ಯಾಪಾರಿ ರವೀಂದ್ರ ಭಟ್ ಎಂಬುವವರು, ಪರಿಹಾರ ಕೇಂದ್ರಕ್ಕೆ ನೀಡಿದ ಪಡಿತರ, ಹಣ ಸಂದಾಯ ಆಗಿಲ್ಲ ಎಂದು ಗಮನ ಸೆಳೆದರು. ಬಗಾದಿ ಗೌತಮ್ ಅವರು ಅಜ್ಜೇಗೌಡರಿಂದ ವಿವರಣೆ ಕೇಳಿದರು. ಉತ್ತರ ಸಮರ್ಪಕವಾಗಿರಲಿಲ್ಲ, ಆಗ ಜಿಲ್ಲಾಧಿಕಾರಿ ಕೋಪಗೊಂಡು ನಿಂದಿಸಿ, ಹೊಡೆಯಲು ಯತ್ನಿಸಿದರು ಎಂದು ಮೂಲಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಜ್ಜೇಗೌಡರ ಪ್ರತಿಕ್ರಿಯೆ ಪಡೆಯಲು ಯತ್ನಿಸಲಾಯಿತು, ಅವರ ದೂರವಾಣಿ ಚಾಲನೆಯಲ್ಲಿ ಇರಲಿಲ್ಲ.

ADVERTISEMENT

ಕಪಾಳಮೋಕ್ಷಕ್ಕೆ ಯತ್ನಿಸಿಲ್ಲ: ಸ್ಪಷ್ಪನೆ

‘ಹಿರೇಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿವೃಷ್ಟಿ ಪುನರ್ವಸತಿ ಕಾರ್ಯ ಪರಿಶೀಲನೆಗೆ ತೆರಳಿದ್ದೆವು. ಪ್ರಕೃತಿ ವಿಕೋಪ ಪರಿಹಾರ ಪಾವತಿಸುವಲ್ಲಿ ವಿಳಂಬ ಮಾಡಿರುವ ವಿಚಾರ ಗಮನಕ್ಕೆ ಬಂತು. ಸಂಬಂಧಪಟ್ಟ ಆರ್‌ಐ ಮತ್ತು ಪಿಡಿಒ ಅವರಿಂದ ವಿವರಣೆ ಕೇಳಿ ದಾಖಲೆ ಪರಿಶೀಲಿಸಿದೆ. ಯಾರಿಗೂ ಹಲ್ಲೆ, ಕಪಾಳಮೋಕ್ಷ ಮಾಡಿಲ್ಲ’ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.