
ಚಿಕ್ಕಮಗಳೂರು: ಆಸ್ತಿ ತೆರಿಗೆ ಪಾವತಿ ಚಲನ್ ಮೇಲೆ ನಕಲಿ ಸೀಲು, ಸಹಿ ಹಾಕಿ ಗೋಲ್ಮಾಲ್ ನಡೆಸಿರುವ ಪ್ರಕರಣದ ಆರೋಪಿ ನಗರಸಭೆ ಬಿಲ್ ಕಲೆಕ್ಟರ್ ಶ್ಯಾಮು ಅವರನ್ನು ಅಮಾನತುಗೊಳಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರು ಶುಕ್ರವಾರ ಪರಿಶೀಲನೆ ನಡೆಸಿ ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಅವರಿಗೆ ಈ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ರಮೇಶ್ ಸುದ್ದಿಗಾರರೊಂದಿಗೆ ಮಾತನಾಡಿ,‘ತೆರಿಗೆ ಪಾವತಿಗೆ ವೆಬ್ಸೈಟ್ನಿಂದ್ ಚಲನ್ ಡೌನ್ಲೋಡ್ ಮಾಡಿಕೊಂಡು ಬ್ಯಾಂಕ್ನಲ್ಲಿ ಹಣ ಜಮೆ ಮಾಡುವ ವಿಧಾನ ಈಗ ಇದೆ. ಚಲನ್ವೊಂದರಲ್ಲಿ ನಮೂದಾಗಿರುವ ದಿನಾಂಕ ಮತ್ತು ಮೊಹರಿನ ದಿನಾಂಕದಲ್ಲಿ ವ್ಯತ್ಯಯ ಇರುವುದು ಗೊತ್ತಾಗಿ ಪ್ರಕರಣ ಬೆಳಕಿಗೆ ಬಂದಿದೆ. ಸೀಲು, ಸಹಿ ನಕಲು ಮಾಡಿರುವುದು ಪತ್ತೆಯಾಗಿದೆ’ ಎಂದು ತಿಳಿಸಿದರು.
‘ತೆರಿಗೆ ಹಣ ಪಾವತಿ ದಾಖಲೆಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸುತ್ತೇವೆ’ ಎಂದರು.
‘ನಗರಸಭೆ ಕಾರ್ಯಚಟುವಟಿಕೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ಬಾಕಿ ಇರುವ ಕೆಲಸಗಳನ್ನು ತಕ್ಷಣ ಮುಗಿಸುವಂತೆ ಸೂಚನೆ ನೀಡಿದ್ದೇನೆ’ ಎಂದು ಉತ್ತರಿಸಿದರು.
ಪರಿಶೀಲನೆ: 30 ಚಲನ್ ಗೋಲ್ಮಾಲ್
ರಸೀತಿ ಗೋಲ್ಮಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲನೆ ಚುರುಕುಗೊಂಡಿದೆ. ಇನ್ನು 30ಚಲನ್ ಗೋಲ್ಮಾಲ್ ಆಗಿರುವುದು ಶುಕ್ರವಾರ ಪತ್ತೆಯಾಗಿದೆ.
‘ಶುಕ್ರವಾರ ಪರಿಶೀಲಿಸಿದವುಗಳ ಪೈಕಿ 30 ಚಲನ್ಗಳು ಗೋಲ್ಮಾಲ್ ಆಗಿವೆ. ಪರಿಶೀಲನೆ ಮುಂದುವರಿಯಲಿದ್ದು, ಇನ್ನಷ್ಟು ಪತ್ತೆಯಾಗಬಹುದು’ ಎಂದು ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.