ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ತಡೆಗೆ ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಸಂಸ್ಥೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಾಗರಿಕರಿಗೆ ಒಂದು ಸವಾಲ್ ಅಭಿಯಾನದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಅಕ್ಟೋಬರ್ ಅಂತ್ಯದವರೆಗೆ ಮಲೇರಿಯಾ 7, ಡೆಂಗಿ 188, ಚಿಕೂನ್ ಗುನ್ಯಾ 91, ಮಿದುಳು ಜ್ವರ 8 ಪ್ರಕರಣಗಳು ಕಂಡುಬಂದಿವೆ. ಆರೋಗ್ಯ ಇಲಾಖೆ, ನಗರ ಸಭೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಪ್ರತಿ ಮನೆ ಮನೆಗಳಿಗೆ ಭೇಟಿ ನೀಡಬೇಕು. ಡೆಂಗಿ, ಚಿಕೂನ್ ಗುನ್ಯಾ, ಮಲೇರಿಯ ತಡೆಗೆ ಮುಂಜಾಗ್ರತಾ ಕ್ರಮಗಳ ಕುರಿತು ಜನರಿಗೆ ಜಾಗೃತಿ ಮೂಡಿಸಬೇಕು ಎಂದರು.
ಕೆರೆಗಳಿಗೆ ಸೊಳ್ಳೆ ಸೇವಿಸುವ ಗಪ್ಪಿ ಮತ್ತು ಗಾಂಬೂಸಿಯಾ ಮೀನು ಮರಿಗಳನ್ನು ಬಿಡಬೇಕು. ಚರಂಡಿಗಳಲ್ಲಿ ಸರಾಗವಾಗಿ ನೀರು ಹರಿಯದಂತೆ ನೋಡಿಕೊಳ್ಳಬೇಕು. ವಾರಕ್ಕೊಮ್ಮೆ ಸೊಳ್ಳೆ ನಿಯಂತ್ರಕ ದ್ರಾವಣ ಸಿಂಪಡಿಸಬೇಕು. ತೆರೆದ ವಾತಾವರಣದಲ್ಲಿ ಹಣ್ಣುಗಳ ಮಾರಾಟ ನಿಷೇಧಿಸಬೇಕು. ಹೋಟೇಲ್ಗಳಲ್ಲಿ ಸ್ವಚ್ಛತೆ ಒತ್ತು ನೀಡುವಂತೆ ಸೂಚಿಸಬೇಕು. ಕವಿವಿಧ ಬಡಾವಣೆಗಳಿಗೆ ಸರಬರಾಜಾಗುವ ನೀರನ್ನು ಕಾಲಕಾಲಕ್ಕೆ ತಪಾಸಣೆಗೆ ಒಳಪಡಿಸಬೇಕು ಎಂದರು.
ಕೈಗಾರಿಕೆಗಳಿಗೆ ವಲಸೆ ಬರುವ ಕಾರ್ಮಿಕರಿಗೆ ಪ್ರತ್ಯೇಕ ಆರೋಗ್ಯ ಚೀಟಿ ನೀಡಬೇಕು. ಅರಣ್ಯ ವ್ಯಾಪ್ತಿ ಜನರು ಮತ್ತು ವನಪಾಲಕರಿಗೆ ಕೆಎಫ್ಡಿ ನಿಯಂತ್ರಣದ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪ್ರಭು, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಅಶ್ವಥ್ ಬಾಬು, ತಾಲ್ಲೂಕು ಆರೋಗ್ಯಧಿಕಾರಿ ಡಾ.ಸೀಮಾ, ಕೆಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಎಮ್.ದೇವರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.