ADVERTISEMENT

ಶಿಕ್ಷಣವು ಸೇವಾ ಕ್ಷೇತ್ರವಾಗಲಿ: ವೆಂಕಟೇಶಯ್ಯ

ಗುರುನಮನದಲ್ಲಿ ನಿವೃತ್ತ ಶಿಕ್ಷಕ ವೆಂಕಟೇಶಯ್ಯ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 5:20 IST
Last Updated 14 ನವೆಂಬರ್ 2022, 5:20 IST
ಕೊಪ್ಪ ತಾಲ್ಲೂಕು ಭಂಡಿಗಡಿಯಲ್ಲಿ ಸ್ನೇಹ ಸಮ್ಮಿಲನ ಬಳಗದಿಂದ ನಿವೃತ್ತ ಹಿರಿಯ ಶಿಕ್ಷಕರನ್ನು ಗೌರವಿಸಲಾಯಿತು.
ಕೊಪ್ಪ ತಾಲ್ಲೂಕು ಭಂಡಿಗಡಿಯಲ್ಲಿ ಸ್ನೇಹ ಸಮ್ಮಿಲನ ಬಳಗದಿಂದ ನಿವೃತ್ತ ಹಿರಿಯ ಶಿಕ್ಷಕರನ್ನು ಗೌರವಿಸಲಾಯಿತು.   

ಕೊಪ್ಪ: ‘ಶಿಕ್ಷಣ ಲಾಭದಾಯಕ ಕ್ಷೇತ್ರವಾಗದೆ ಸೇವಾ ಕ್ಷೇತ್ರವಾಗಬೇಕು. ಆ ಮೂಲಕ ಎಲ್ಲರಿಗೂ ಶಿಕ್ಷಣ ತಲುಪುವಂತಾಗಬೇಕು’ ಎಂದು ನಿವೃತ್ತ ಶಿಕ್ಷಕ ವೆಂಕಟೇಶಯ್ಯ ಹೇಳಿದರು.

ತಾಲ್ಲೂಕಿನ ಭಂಡಿಗಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1981-83 ಸಾಲಿನಲ್ಲಿ 7ನೇ ತರಗತಿ ವ್ಯಾಸಂಗ ಮಾಡಿದ್ದ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಬಳಗದಿಂದ ಶನಿವಾರ ಆಯೋಜಿಸಿದ್ದ ಶಿಕ್ಷಕರಿಗೆ ಗುರು ನಮನ ಕಾರ್ಯಕ್ರಮದಲ್ಲಿ ಅವರು ಗೌರವ ಸ್ವೀಕರಿಸಿ ಮಾತನಾಡಿದರು.

‘ಗುರು ಶಿಷ್ಯರ ಬಾಂಧವ್ಯ ಸಡಿಲಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ 40 ವರ್ಷದ ಹಿಂದೆ ಶಿಕ್ಷಣ ಪಡೆದ ನಮ್ಮ ಶಿಷ್ಯ ಬಳಗ ಗುರುನಮನ ಸಲ್ಲಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ. ಈ ಶಾಲೆಯಲ್ಲಿ ಕಲಿತ ಮಕ್ಕಳು ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡಿದ್ದಾರೆ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು. ಅಲ್ಲಿ ಮಕ್ಕಳು ಶಿಕ್ಷಣದ ಜೊತೆ ಜೀವನ ಪಾಠವನ್ನೂ ಕಲಿಯುತ್ತಾರೆ’ ಎಂದು ಅವರು ಹೇಳಿದರು.

ADVERTISEMENT

ಭಾರತಿ ಪ್ರತಿಷ್ಠಾನದ ಜಗದೀಶ ಕಾರಂತ, ವಿದ್ಯಾಧರ ದೇಸಾಯಿ, ಸ್ನೇಹ ಸಮ್ಮಿಲನ ಬಳಗದ ಸಂಚಾಲಕಿ ರೂಪಕಲಾ ಮಾತನಾಡಿದರು. ನಿವೃತ್ತ ಶಿಕ್ಷಕರಾದ ವೆಂಕಟೇಶಯ್ಯ, ಸುಬ್ಬೇನಾಯ್ಕ್, ಗುರುಮೂರ್ತಿ, ಚಂದ್ರಶೇಖರ್, ಅಬ್ದುಲ್ ಹಮೀದ್ ಅವರನ್ನು ಸ್ನೇಹ ಮಿಲನ ಬಳಗದಿಂದ ಗೌರವಿಸಲಾಯಿತು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರೇಮ್ ಕುಮಾರ್, ಮುಖ್ಯ ಶಿಕ್ಷಕ ಶ್ರೀನಿವಾಸ್, ಸ್ನೇಹ ಸಮ್ಮಿಲನ ಬಳಗದ ಎ.ಈ.ಅಶೋಕ್, ಭಾಗ್ಯಲಕ್ಷ್ಮಿ, ಸುರೇಶ್, ಮಂಜುಳಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.