ಕೊಟ್ಟಿಗೆಹಾರ: ಬಣಕಲ್ ಸಮೀಪದ ಸಬ್ಲಿ, ಚಕ್ಕೋಡು ಭಾಗದಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಅವುಗಳನ್ನು ಕಾಡಿಗೆ ಓಡಿಸಲು ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಗುರುವಾರ ರಾತ್ರಿ ಮೂರು ಕಾಡಾನೆಗಳು ಚಕ್ಕೋಡು ಭಾಗದ ಕಾಫಿ, ಬಾಳೆ, ಕಾಳು ಮೆಣಸು ಮತ್ತಿತರ ಬೆಳೆಗಳನ್ನು ಹಾನಿಯಾಗಿದೆ. ನಂತರ ಸಬ್ಲಿ ಗ್ರಾಮದಲ್ಲಿ ಬೀಡುಬಿಟ್ಟ ಕಾಡಾನೆಗಳು ಕಾಫಿ ತೋಟದಲ್ಲಿ ಅಡ್ಡಾದಿಡ್ಡಿ ಓಡಾಡಿ ಅಪಾರ ಬೆಳೆ ಹಾನಿಯಾಗಿದೆ.
ಸಬ್ಲಿ ಗ್ರಾಮದಲ್ಲಿ ಕಾಡಾನೆಗಳ ಸಂಚಾರದಿಂದ ಕೂಲಿ ಕಾರ್ಮಿಕರು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯ ಉಪವಲಯ ಅಧಿಕಾರಿ ಉಮೇಶ್ ಹಾಗೂ ಅರಣ್ಯ ಸಿಬ್ಬಂದಿ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪಟಾಕಿ ಸಿಡಿಸಿ ಕಾಡಾನೆ ಕಾಡಿಗೆ ಓಡಿಸಲು ಪ್ರಯತ್ನಿಸಿದರು.
ಸಬ್ಲಿಯಿಂದ ಹೊರಟ ಕಾಡಾನೆಗಳು ಅತ್ತಿಗೆರೆ ಭಾಗದ ತೋಟಗಳಿಗೆ ಲಗ್ಗೆಯಿಟ್ಟು ನಂತರ ಶುಕ್ರವಾರ ಸಂಜೆ ಮತ್ತೆ ಸಬ್ಲಿ ಗ್ರಾಮಕ್ಕೆ ಬಂದಿವೆ. ಮಳೆಯಾಗುತ್ತಿರುವುದರಿಂದ ಕಾಡಾನೆ ಓಡಿಸಲು ಸಾಧ್ಯವಾಗಿಲ್ಲ ಎಂದು ಅರಣ್ಯ ಸಿಬ್ಬಂದಿ ತಿಳಿಸಿದ್ದಾರೆ.
‘ಶುಕ್ರವಾರ ಕಾರ್ಯಾಚರಣೆ ಮುಂದುವರಿದಿದ್ದು, ಮಳೆಯಿಂದ ಕಾಡಾನೆಗಳು ದಟ್ಟ ಕಾಡಿನ ಬದಿಯಲ್ಲಿ ನಿಂತು ಪಟಾಕಿ ಶಬ್ದಕ್ಕೂ ಕದಲುತ್ತಿಲ್ಲ’ ಎಂದು ಸಬ್ಲಿ ಗ್ರಾಮಸ್ಥ ದೇವರಾಜ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಬೆಳೆ ಹಾನಿ ಪರಿಹಾರಕ್ಕೆ ಒತ್ತಾಯ: ಸಬ್ಲಿ, ಚಕ್ಕೋಡು ಹಾಗೂ ಅತ್ತಿಗೆರೆ ಗ್ರಾಮದ ಕಾಫಿ ತೋಟದಲ್ಲಿ ಮೂರು ಕಾಡಾನೆ ಹಿಂಡು ಅಡ್ಡಾದಿಡ್ಡಿ ಓಡಾಡಿ ಅಪಾರ ಬೆಳೆ ಹಾನಿ ಸಂಭವಿಸಿದೆ. ಕಾಡಾನೆಯಿಂದ ರೈತರು ಬೆಳೆ ಕಳೆದುಕೊಂಡು ನಷ್ಟ ಅನುಭವಿಸುತ್ತಿದ್ದಾರೆ. ಬೆಳೆ ಹಾನಿಯಾದ ರೈತರಿಗೆ ಪರಿಹಾರ ನೀಡಬೇಕು ಹಾಗೂ ಕಾಡಾನೆ ಹಿಂಡನ್ನು ಸ್ಥಳಾಂತರಿಸಬೇಕು ಎಂದು ಸಬ್ಲಿ ಭಾಗದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.