ಮೂಡಿಗೆರೆ: ಪಟ್ಟಣದ ತಾಲ್ಲೂಕು ಪಂಚಾಯಿತಿಯ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಸಭಾಂಗಣ
ದಲ್ಲಿ ಏರ್ಪಡಿಸಿರುವ ಭಾರತೀಯ ಇತಿಹಾಸ, ಸಂಸ್ಕೃತಿ, ಪರಂಪರೆ ಬಿಂಬಿಸುವ ವಸ್ತು ಪ್ರದರ್ಶನಕ್ಕೆ ಮಂಗಳವಾರ ವಿವಿಧೆಡೆಯಿಂದ ಜನರು ಬಂದು ವೀಕ್ಷಿಸಿದರು.
‘ಪ್ರಾಚೀನ ಭಾರತ, ಮಹಾ ಜನಪದ, ಮಗಧ, ಮೌರ್ಯ, ಇಂಡೋ ಗ್ರೀಕ್, ಗುಪ್ತಸಾಮ್ರಾಜ್ಯ, ಶಾತವಾಹನರು, ಕಾಶ್ಮೀರ, ಪ್ರಾಚೀನ ತಮಿಳು ನಾಡಿನ ನಾಣ್ಯಗಳು, ಪ್ರಾಚೀನ ಕರ್ನಾಟಕ, ವಿಜಯನಗರ, ಈಸ್ಟ್ ಇಂಡಿಯಾ ಕಂಪನಿ, ಗಣತಂತ್ರ ಭಾರತ, ಮರಾಠ, ಬಹುಮನಿ ಸುಲ್ತಾನ, ಅಮೇರಿಕಾ ಸಂಯುಕ್ತ ಸಂಸ್ಥಾನದ ನಾಣ್ಯಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಅಲ್ಲದೇ ಮೈಸೂರು ಶೈಲಿಯ ಚಿತ್ರಗಳು, ನೂಲುವ ಚರಕ, ವಿವಿಧ ಬಗೆಯ ಕಂಚಿನ ವಸ್ತುಗಳು, ತಾಂಬೂಲದ ಪರಿಕರಗಳು, ಪಿರಂಗಿ, ಗುಂಡು, ಬಂದೂಕಿನ ಮದ್ದಿನ ಚೀಲ, ದಸರಾ ಗೊಂಬೆಗಳು ಸೇರಿದಂತೆ ಅನೇಕ ಬಗೆಯ ಪ್ರಾಚೀನ ಕಾಲದ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಮೊದಲ ದಿನ ವಸ್ತು ಪ್ರದರ್ಶನಕ್ಕೆ ಪ್ರತಿಕ್ರಿಯೆ ಕಡಿಮೆಯಿದ್ದು, 2ನೇ ದಿನವಾದ ಮಂಗಳವಾರ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಬಂದು ವೀಕ್ಷಿಸಿದ್ದರಿಂದ ಇಡೀ ದಿನ ಜನಜಂಗುಳಿ ಏರ್ಪಟ್ಟಿತ್ತು.
‘ಸುಮಾರು 25 ವರ್ಷಗಳಿಂದ ದೇಶದಾದ್ಯಂತ ಪ್ರವಾಸ ಮಾಡಿ ಪ್ರಾಚೀನ ನಾಣ್ಯಗಳು, ಕಲಾಕೃತಿಗಳು, ಅಪರೂಪದ ವಸ್ತು, ಅಂಚೆಚೀಟಿ, ಲಕೋಟೆ, ನೋಟುಗಳು, ಹಾಗೂ ಪುಸ್ತಕಗಳನ್ನು ಸಂಗ್ರಹ ಮಾಡಿದ್ದೆ. ಅವುಗಳು ಕೇವಲ ಕೊಶೋಕ್ಠಡಿಗೆ ಸೀಮಿತವಾಗ ಬಾರದೆಂಬ ದೃಷ್ಟಿಯಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗಿದೆ. ವೀಕ್ಷಕರ ಸಂಖ್ಯೆ ಹೆಚ್ಚಾದರೆ ಗುರುವಾರವೂ ಮುಂದುವರಿಸಲಾಗುವುದು. ಪ್ರದರ್ಶನ ಉಚಿತವಾಗಿದ್ದು, ಮುಕ್ತವಾಗಿ ವೀಕ್ಷಿಸಬಹುದು’ ಎಂದು ವಸ್ತು ಪ್ರದದರ್ಶನದ ಆಯೋಜಕ ವಕೀಲ ಅಶೋಕ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.