ADVERTISEMENT

ನಕಲಿ ದಾಖಲೆ ಸೃಷ್ಟಿಸಿ ದಲಿತರ ಭೂ ಕಬಳಿಕೆ: ಆರೋಪ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 2:22 IST
Last Updated 22 ಫೆಬ್ರುವರಿ 2026, 2:22 IST
   

ಬಾಳೆಹೊನ್ನೂರು: ‘ಪಟ್ಟಣದ ಬಿ. ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂ. 139ರಲ್ಲಿ ರಂಗಯ್ಯ ಎಂಬುವರಿಗೆ ಮಂಜೂರಾಗಿದ್ದ ಜಮೀನನ್ನು ಸ್ಥಳೀಯ ಪ್ರಭಾವಿಗಳು ನಕಲಿ ದಾಖಲೆ ಸೃಷ್ಟಿಸಿ ತಮ್ಮ ಹೆಸರಿಗೆ ಖಾತೆ ಬದಲಾಯಿಸಿಂಡಿದ್ದಾರೆ. ಅಲ್ಲದೇ ದಲಿತರಿಗೆ ಕಿರುಕುಳ ನೀಡುತ್ತಿದ್ದಾರೆ’ ಎಂದು ದಸಂಸ(ದಲಿತ ಸಂಘರ್ಷ ಸಮಿತಿ) ಜಿಲ್ಲಾ ಸಮಿತಿ ಸದಸ್ಯ ಎಚ್‌.ಎಂ. ಶಿವಣ್ಣ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರ ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವುದು ಕಾನೂನು ಬಾಹಿರವಾಗಿದ್ದು, ನ್ಯಾಯ ಒದಗಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ ಎಂದು ದೂರಿದರು.

ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಪ್ರಭಾವಿಗಳು ಪಂಚಾಯಿತಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಇ–ಸ್ವತ್ತು ಮಾಡಿಸಿಕೊಂಡಿದ್ದಾರೆ. ರಂಗಯ್ಯ ಅವರಿಗೆ ಮಂಜೂರಾಗಿದ್ದ ಜಮೀನಿನಲ್ಲಿ 30 ಗುಂಟೆಯನ್ನು ಶಾಲೆಗೆ ದಾನವಾಗಿ ನೀಡಲಾಗಿದ್ದು, 10 ಗುಂಟೆ ಪ್ರದೇಶವನ್ನು ಸಾರ್ವಜನಿಕ ರಸ್ತೆಗಾಗಿ ಬಿಡಲಾಗಿದೆ. ಉಳಿದ ಜಮೀನನ್ನು ಕುಟುಂಬದೊಳಗೆ ಮೂರು ಪಾಲುಗಳಾಗಿ ಹಂಚಲಾಗಿದೆ. ಅದರಲ್ಲಿ ರಾಯಪ್ಪ ಅವರಿಗೆ ಬಂದ ಪಾಲಿನ ಎರಡು ಗುಂಟೆಯನ್ನು ಅಂಕಿತಗೌಡ ಅವರಿಗೆ 20 ವರ್ಷಗಳ ಅವಧಿಗೆ ಭೋಗ್ಯಕ್ಕೆ ನೀಡಲಾಗಿತ್ತು. ಅವಧಿ ಮುಗಿದಿದ್ದರೂ ಜಮೀನು ಹಿಂತಿರುಗಿಸಿಲ್ಲ ಎಂದು ಅವರು ಹೇಳಿದರು.

ADVERTISEMENT

ದಸಂಸ ಮುಖಂಡ ರಾಯಪ್ಪ ಮಾತನಾಡಿ, ‘ಪ್ರಭಾವಿಗಳು ನಮ್ಮ ಜಮೀನಿಗೆ ಹೋಗಲು ದಾರಿ ನೀಡದೇ ಅಡಿಕೆ ಕೊಯ್ಲಿಗೆ ತೊಂದರೆ ನೀಡುತ್ತಿದ್ದಾರೆ. ಅಂಕಿತಗೌಡ ಹಾಗೂ ಸುರೇಶ್‌ಗೌಡ ಅವರಿಂದ ಜೀವ ಬೆದರಿಕೆ ಒಡ್ಡಲಾಗಿದೆ. ಪೊಲೀಸ್ ಠಾಣೆಗೆ ದೂರು ನೀಡಿದರೂ ಕ್ರಮ ಕೈಗೊಳ್ಳಲಾಗಿಲ್ಲ’ ಎಂದು ಆರೋಪಿಸಿದರು.

ಮಾಹಿತಿ ಹಕ್ಕಿನ ಕಾಯ್ದೆಯಡಿ ಪಡೆದ ಮಾಹಿತಿಯ ಪ್ರಕಾರ ತಹಶೀಲ್ದಾರ್ ಕಚೇರಿಯಲ್ಲಿ ಮೂಲ ದಾಖಲೆಗಳಿಲ್ಲ ಎಂದು ತಿಳಿಸಿದ್ದರೂ ನಕಲಿ ದಾಖಲೆ ಸೃಷ್ಟಿಸಿ ಇ–ಸ್ವತ್ತು ಮಾಡಲಾಗಿದೆ. ಈ ಪ್ರಕ್ರಿಯೆಯಲ್ಲಿ ನರಸಿಂಹರಾಜಪುರ ಭೂಮಾಪನ ಇಲಾಖೆಯ ಕೆಲ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದ ಅವರು, ಜಿಲ್ಲಾಧಿಕಾರಿ ಕ್ರಮಕ್ಕೆ ಸೂಚಿಸಿದ್ದರೂ ತಾಲ್ಲೂಕು ಕಚೇರಿ ಅಧಿಕಾರಿಗಳು ಸ್ಪಂದಿಸಿಲ್ಲ. ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಸಂಬಂಧಿತ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದಸಂಸ ಮುಖಂಡ ಡಿ.ಎ. ಗಣೇಶ್, ಅಣ್ಣಪ್ಪ, ಪೇಟೆಕೆರೆ ಶೇಖರ್, ಸುರೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.