ಮೂಡಿಗೆರೆ: ಮಳೆಯಿಂದ ಮನೆ ಕಳೆದುಕೊಂಡವರಿಗೆ ಜಿಲ್ಲಾಡಳಿತ ತುರ್ತಾಗಿ ಪರಿಹಾರ ನೀಡಬೇಕು ಎಂದು ಮಾಜಿ ಸಚಿವ ಬಿ.ಬಿ. ನಿಂಗಯ್ಯ ಒತ್ತಾಯಿಸಿದರು.
ತಾಲ್ಲೂಕಿನ ಕಿರುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದುಸೆ ಭಾಗದಲ್ಲಿ ಮಂಗಳವಾರ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ, ಮನೆ ಕಳೆದುಕೊಂಡವರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿ ಅವರು ಮಾತನಾಡಿದರು.
‘ಮಳೆಯಿಂದ ಮನೆ ಕಳೆದುಕೊಂಡವರ ಸ್ಥಿತಿ ಶೋಚನೀಯವಾಗಿದೆ. ಅವರಿಗೆ ಶಾಲೆಗಳಲ್ಲಿ, ಸಮುದಾಯ ಭವನಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ತಾತ್ಕಾಲಿಕವಾಗಿ ನೆಲೆ ಕಲ್ಪಿಸಿಕೊಡಲಾಗಿದೆ. ಆದರೆ, ಆ ಕುಟುಂಬಗಳ ದಿನ ಬಳಕೆ ವಸ್ತುಗಳು ನೀರುಪಾಲಾಗಿದ್ದು, ಮಕ್ಕಳ ಸ್ಥಿತಿ ಚಿಂತಾಜನಕವಾಗಿವೆ. ತಾಲ್ಲೂಕಿನಲ್ಲಿ ಹತ್ತಾರು ಮನೆಗಳು ನೆಲಸಮವಾಗಿದ್ದರೂ, ಕಾಳಜಿ ಕೇಂದ್ರಗಳನ್ನು ತೆರೆದಿಲ್ಲ. ಎಡಬಿಡದೆ ಮಳೆ ಸುರಿಯುತ್ತಿದ್ದು, ಕೂಲಿ ಕಾರ್ಮಿಕರು ಕೆಸಲವಿಲ್ಲದೆ ಕೂರುವಂತಾಗಿದೆ. ಜಿಲ್ಲಾಡಳಿತವು ಕೂಡಲೇ ಮಳೆಹಾನಿಯ ಸಮೀಕ್ಷೆ ನಡೆಸಿ, ಮನೆ ಕಳೆದುಕೊಂಡವರಿಗೆ ಪರಿಹಾರ ಒದಗಿಸಬೇಕು’ ಎಂದು ಒತ್ತಾಯಿಸಿದರು.
‘ತಾಲ್ಲೂಕಿನಲ್ಲಿ ನಾಲ್ಕು ವರ್ಷಗಳಿಂದಲೂ ಬೆಳೆಗಾರರಿಗೆ ಫಸಲು ಸಿಕ್ಕಿಲ್ಲ. ಈ ಬಾರಿ ಕಾಫಿ, ಕಾಳುಮೆಣಸು, ಅಡಿಕೆ ಬೆಳೆಗಳೆಲ್ಲವೂ ನೆಲ ಕಚ್ಚಿದ್ದು, ರೈತರ ಪರಿಸ್ಥಿತಿ ಹೇಳ ತೀರದಾಗಿದೆ. ಕೂಡಲೇ ಬೆಳೆ ಹಾನಿಯ ಸಮೀಕ್ಷೆ ನಡೆಸಬೇಕು’ ಎಂದರು.
ಜೆಡಿಎಸ್ ಗೋಣಿಬೀಡು ಹೋಬಳಿ ಅಧ್ಯಕ್ಷ ಪ್ರಹ್ಲಾದ್, ಪದಾಧಿಕಾರಿಗಳಾದ ರಾಮ್ಮಪ್ಪ ಬೆಟ್ಟದಮನೆ, ದಿನೇಶ್ ಉದುಸೆ, ಅನಿಲ್ ಜೇನುಬೈಲ್, ಆನಂದ್ ಲೋಕವಳ್ಳಿ, ಸಂತೋಷ್ ಬೆಟ್ಟಗೆರೆ ಗ್ರಾಮಸ್ಥರಾದ ಹರೀಶ್, ಸುರೇಶ್, ಮಂಜಯ್ಯ, ಪೂರ್ಣೇಶ್, ಮಹೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.