ADVERTISEMENT

ನಿರ್ಗತಿಕರಿಗೆ ಆಹಾರ, ತಾತ್ಕಾಲಿಕ ಗೂಡು

ನಗರಸಭೆ, ಪೊಲೀಸರು, ಸ್ವಯಂಸೇವಕರ ನೆರವಿನ ಹಸ್ತ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 17:25 IST
Last Updated 29 ಮಾರ್ಚ್ 2020, 17:25 IST
ಚಿಕ್ಕಮಗಳೂರಿನ ಜ್ಯೋತಿನಗರದ ಅಂಬೇಡ್ಕರ್‌ ವಸತಿ ಶಾಲೆಯಲ್ಲಿ ನಿರ್ಗತಿಕರಿಗೆ ತಾತ್ಕಾಲಿಕವಾಗಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿರುವುದು.
ಚಿಕ್ಕಮಗಳೂರಿನ ಜ್ಯೋತಿನಗರದ ಅಂಬೇಡ್ಕರ್‌ ವಸತಿ ಶಾಲೆಯಲ್ಲಿ ನಿರ್ಗತಿಕರಿಗೆ ತಾತ್ಕಾಲಿಕವಾಗಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿರುವುದು.   

ಚಿಕ್ಕಮಗಳೂರು: ನಗರದ ಬಸ್‌–ರೈಲು ನಿಲ್ದಾಣ, ರಸ್ತೆಗಳು, ಪಾದಚಾರಿ ಮಾರ್ಗಗಳು ಇತರೆಡೆಗಳಲ್ಲಿ ಅಲೆದಾಡುತ್ತಿದ್ದ ನಿರ್ಗತಿಕರನ್ನು ಸ್ವಯಂಸೇವಕರು ಕರೆತಂದು ತಂಗಲು ಗೂಡಿನ ವ್ಯವಸ್ಥೆ ಮಾಡಿ, ಆಹಾರ ನೀಡಿ ಮಾನವೀಯ ಮುಖ ತೋರಿದ್ದಾರೆ.

ಕೊರೊನಾ ವೈರಾಣು ಹರಡದಂತೆ ತಡೆ ನಿಟ್ಟಿನಲ್ಲಿ ಲಾಕ್‌ಡೌನ್‌ನಿಂದಾಗಿ ಅಂಗಡಿ, ಮಳಿಗೆ, ಹೋಟೆಲ್‌, ಲಾಡ್ಜ್‌ ಮುಚ್ಚಿದ್ದು ನಗರ ಸ್ತಬ್ಧವಾಗಿದೆ. ಜನರನ್ನು ಕಾಡಿಬೇಡಿ ಬದುಕು ಸಾಗಿಸುವ ಭಿಕ್ಷಕರು, ನಿರ್ಗತಿಕರು ಆಹಾರಕ್ಕಾಗಿ ಪರದಾಡುವಂತಾಗಿದ್ದು, ಸ್ವಯಂಸೇವಕರು ಅವರಿಗೆ ಈಗ ನೆರವಿನ ಹಸ್ತ ಚಾಚಿದ್ದಾರೆ.

ಎಐಟಿ ವೃತ್ತದ ಬಳಿಯ ಅಂಬೇಡ್ಕರ್ ವಸತಿ ಶಾಲೆಯ ಪಡಸಾಲೆ, ಎರಡು ಕೊಠಡಿಗಳಲ್ಲಿ ವಾಸ್ತವ್ಯಕ್ಕೆ ಶುಕ್ರವಾರದಿಂದ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿ 30 ಮಂದಿ ಇದ್ದಾರೆ. ಇಲ್ಲಿರುವವರಿಗೆ ಪೊಲೀಸರು ಮುಖಗವುಸು (ಮಾಸ್ಕ್‌) ಒದಗಿಸಿದ್ದಾರೆ.
ನಗರಸಭೆ, ಪೊಲೀಸರು, ದಾನಿಗಳು, ಸ್ವಯಂಸೇವಾ ಸಂಸ್ಥೆಗಳ ನೆರವಿನಲ್ಲಿ ಉಪಹಾರ, ಊಟ, ಹೊದಿಕೆ, ಚಾಪೆ ವ್ಯವಸ್ಥೆ ಮಾಡಲಾಗಿದೆ. ಶೌಚಾಲಯ, ಸ್ನಾನದ ಗೃಹಗಳ ಸೌಲಭ್ಯ ಇದೆ.

ADVERTISEMENT

ನಿರ್ಗತಿಕರಿಗೆ ತಾತ್ಕಾಲಿಕ ಸೌಲಭ್ಯ ಕಲ್ಪಿಸಲಾಗಿದೆ. ವೈದ್ಯಕೀಯ ತಪಾಸಣೆ ಮಾಡಿಸಲು ಕ್ರಮ ವಹಿಸಿ, ನಿಗಾ ವಹಿಸಲಾಗುವುದು ಎಂದು ನಗರಸಭೆ ಪ್ರಭಾರ ಆಯುಕ್ತ ಚಂದ್ರಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ವಯಂ ಸೇವಕ ಕಾರ್ತಿಕ್‌ ಚೆಟ್ಟಿಯಾರ್‌, ರೂಬೆನ್‌ ಮೊಸೆಸ್‌ ಸಹಿತ 15 ಸ್ವಯಂ ಸೇವಕರು ನಿರ್ಗತಿಕರ ಮೇಲೆ ನಿಗಾ ವಹಿಸಿದ್ದಾರೆ.
‘ಮಹಿಳೆಯರಿಗೆ, ಪುರಷರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಇದೆ. ಒಬ್ಬರಿಂದ ಒಬ್ಬರಿಗೆ ಅಂತರ ಇರುವಂತೆ ಗಮನ ಹರಿಸಲಾಗಿದೆ. ವಾಸ್ತವ್ಯ, ಉಪಹಾರ, ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ’ ಎಂದು ರೂಬೆನ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.