ADVERTISEMENT

ಕಾಫಿನಾಡಲ್ಲಿ ಕ್ಷೀಣಿಸಿದ ವಿದೇಶಿಗರ ಕಲರವ

2 ವರ್ಷದಿಂದ ಗಣನೀಯವಾಗಿ ಕುಸಿದ ಸಂಖ್ಯೆ

ಬಿ.ಜೆ.ಧನ್ಯಪ್ರಸಾದ್
Published 28 ಅಕ್ಟೋಬರ್ 2018, 20:15 IST
Last Updated 28 ಅಕ್ಟೋಬರ್ 2018, 20:15 IST
ಬಾಬಾಬುಡನ್‌ಗಿರಿಯ ಸಂಜೆ ಸೊಬಗು ವೀಕ್ಷಣೆಯಲ್ಲಿ ತಲ್ಲೀನರಾd ವಿದೇಶಿಗರು
ಬಾಬಾಬುಡನ್‌ಗಿರಿಯ ಸಂಜೆ ಸೊಬಗು ವೀಕ್ಷಣೆಯಲ್ಲಿ ತಲ್ಲೀನರಾd ವಿದೇಶಿಗರು   

ಚಿಕ್ಕಮಗಳೂರು: ಕಾಫಿನಾಡಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಬರುವ ವಿದೇಶಿ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಐದು ವರ್ಷಗಳಲ್ಲಿ ಅರ್ಧದಷ್ಟು ಕುಸಿದಿದೆ.

ಶೃಂಗೇರಿ, ಕಳಸ, ಹೊರನಾಡು, ಬಾಳೆಹೊನ್ನೂರು, ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ, ಬೆಳವಾಡಿ, ಮತ್ತೋಡಿ ನಿಸರ್ಗ ತಾಣ, ಕಲ್ಲತ್ತಿಗಿರಿ, ಕೆಮ್ಮಣ್ಣುಗುಂಡಿ, ಚಿಕ್ಕಮಗಳೂರು, ಹಿರೇಮಗಳೂರು ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು. 2014ರಿಂದ ಜಿಲ್ಲೆಗೆ ವಿದೇಶಿ ಪ್ರವಾಸಿಗರ ಭೇಟಿ ಪ್ರಮಾಣ ಇಳಿಕೆ ಕ್ರಮದಲ್ಲಿ ಸಾಗಿದೆ. ಪ್ರವಾಸಿ ಸ್ಥಳಗಳಲ್ಲಿ ಮೂಲಸೌಕರ್ಯ ಕೊರತೆ, ಅತಿವೃಷ್ಟಿ, ಸುರಕ್ಷತೆ ಸಮಸ್ಯೆ ಮೊದಲಾದ ಕಾರಣಗಳಿಂದ ಜಿಲ್ಲೆಯ ಕಡೆಗೆ ವಿದೇಶಿ ಪ್ರವಾಸಿಗರ ಲಕ್ಷ್ಯ ಕಡಿಮೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬಾಬಾಬುಡನಗ್‌ ಗಿರಿಗೆ ಈಚೆಗೆ ಪ್ರವಾಸ ಬಂದಿದ್ದ ರಷ್ಯಾದ ಅಲಸ್ಕಾ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಇದೇ ಮೊದಲ ಬಾರಿಗೆ ಇಲ್ಲಿಗೆ ಪ್ರವಾಸ ಬಂದಿದ್ದೇನೆ. ಬೆಟ್ಟಸಾಲು, ಹಸಿರು ವನರಾಶಿ, ಜಲಪಾತ, ಗುಹೆ, ಪರಿಸರ ಎಲ್ಲವೂ ಸುಂದರವಾಗಿದೆ. ಪ್ರವಾಸಿ ತಾಣಗಳಲ್ಲಿ ಶೌಚಾಲಯ, ವಿಶ್ರಾಂತಿ ಕೋಣೆ, ಆರೈಕೆ ಕೊಠಡಿ, ವೈದ್ಯಕೀಯ ಸೌಕರ್ಯ ಕೊರತೆ ಇದೆ. ಮೂಲಸೌಕರ್ಯ ಕಲ್ಪಿಸುವುದಕ್ಕೆ ಆದ್ಯತೆ ನೀಡಬೇಕು’ ಎಂದರು.

ADVERTISEMENT

2010ರಿಂದ ಜಿಲ್ಲೆ ಕಡೆಗೆ ಪ್ರವಾಸಿಗರ ದಾಂಗುಡಿ ಹೆಚ್ಚಾಗಿದೆ. ಐದಾರು ವರ್ಷಗಳ ಹಿಂದೆ ವಿದೇಶಿ ಪ್ರವಾಸಿಗರು ಹೆಚ್ಚು ಬರುತ್ತಿದ್ದರು. ಅಧ್ಯಯನ ಅವಕಾಶಗಳು ಕಡಿಮೆ ಇರುವುದು, ಸುರಕ್ಷತೆ ಸಮಸ್ಯೆ, ಮೂಲಸೌಕರ್ಯ ಕೊರತೆ ಕಾರಣಗಳಿಂದ ಈಗ ವಿದೇಶಿ ಪ್ರವಾಸಿಗರು ಕಡಿಮೆಯಾಗಿದ್ದಾರೆ ಎಂದು ಪರಿಸರಾಸಕ್ತರೊಬ್ಬರು ಹೇಳುತ್ತಾರೆ.

ಜಿಲ್ಲೆಯಲ್ಲಿ ಮಠಗಳು, ‍ಧಾರ್ಮಿಕ ಪುಣ್ಯಕ್ಷೇತ್ರಗಳು, ಸೌಹಾರ್ದ ಕೇಂದ್ರ, ಗಿರಿಶ್ರೇಣಿಯಂಥ ತಾಣಗಳು ಜಾಸ್ತಿ ಇವೆ. ಮೋಜು, ಮನರಂಜನೆಗೆ ಅವಕಾಶ ಕಡಿಮೆ. ವಿದೇಶಿ ಪ್ರವಾಸಿಗರು ಸ್ವಚ್ಛಂದವಾಗಿ ವಿಹರಿಸಲು ಹೆಚ್ಚು ಇಷ್ಟಪಡುತ್ತಾರೆ. ಇಲ್ಲಿನ ತಾಣಗಳಲ್ಲಿ ಅದಕ್ಕೆ ಅವಕಾಶಗಳು ಕಡಿಮೆ. ಹೀಗಾಗಿ, ಇತ್ತ ಕಡೆಗೆ ಅವರ ಒಲವು ಹರಿಯುತ್ತಿಲ್ಲ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಯೊಬ್ಬರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.