
ಮೂಡಿಗೆರೆ (ಚಿಕ್ಕಮಗಳೂರು): ತಾಲ್ಲೂಕಿನಲ್ಲಿ ಹಾದುಹೋಗಿರುವ ಚಾರ್ಮಾಡಿ ಘಾಟಿಯ ಬಿದಿರುತಳ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಕಾಳ್ಗಿಚ್ಚು ಉಂಟಾಗಿ ಅಪಾರ ಪ್ರಮಾಣದ ಅರಣ್ಯ ಸಂಪತ್ತು ಬೆಂಕಿಗೆ ಆಹುತಿಯಾಗಿದೆ.
ಬಿದಿರುತಳ ಗ್ರಾಮದ ಬಸ್ ನಿಲ್ದಾಣದಿಂದ ಸುಮಾರು ಎರಡು ಕಿ.ಮೀ ದೂರದಲ್ಲಿ ರಾತ್ರಿ 11ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡು, ಎರಡು ಗಂಟೆಗೂ ಹೆಚ್ಚು ಕಾಲ ಉರಿಯುತ್ತಲೇ ಇತ್ತು.
ಘಾಟಿಯ ರಸ್ತೆಯುದ್ದಕ್ಕೂ ಜ್ವಾಲೆ ಕಾಣುತ್ತಿದ್ದು, ಪ್ರಯಾಣಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ರಾತ್ರಿ 12.30ರ ಸುಮಾರಿಗೆ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿದರೂ ಬೆಂಕಿಯ ಜ್ವಾಲೆ ತೀವ್ರವಾಗಿದ್ದರಿಂದ ನಂದಿಸುವ ಕಾರ್ಯ ಪೂರ್ಣವಾಗಿರಲಿಲ್ಲ.
ಬೆಂಕಿ ಕಾಣಿಸಿಕೊಂಡ ಸ್ಥಳ ಗುಡ್ಡ ಪ್ರದೇಶವಾಗಿದ್ದು, ಅಗ್ನಿಶಾಮಕ ದಳದ ವಾಹನವು ಸ್ಥಳಕ್ಕೆ ತೆರಳಲು ಆಗದೇ ಬೆಂಕಿನಂದಿಸುವ ಕಾರ್ಯಕ್ಕೆ ಅಡ್ಡಿ ಆಯಿತು. ಅರಣ್ಯ ಇಲಾಖೆ, ಅಗ್ನಿಶಾಮಕ ಸಿಬ್ಬಂದಿ ಕಾಲ್ನಡಿಗೆಯಲ್ಲೇ ಸಾಗಿ ಬೆಳಿಗ್ಗೆಯ ವೇಳೆಗೆ ಬೆಂಕಿ ನಂದಿಸಿದರು ಎಂದು ಸಿಬ್ಬಂದಿ ಮಾಹಿತಿ ನೀಡಿದರು.
ಅಪಾರ ಪ್ರಮಾಣದ ಅರಣ್ಯ ಸಂಪತ್ತು ಹಾಗೂ ವನ್ಯಪ್ರಾಣಿಗಳಿಗೆ ಹಾನಿಯಾಗಿರುವ ಸಾಧ್ಯತೆಯಿದೆ. ಬೆಂಕಿಗೆ ನಿಖರ ಕಾರಣ ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.