ADVERTISEMENT

ಬಾಲಕಿಯ ಅತ್ಯಾಚಾರ: ಅಪರಾಧಿಗೆ 20 ವರ್ಷ ಕಠಿಣ ಸಜೆ

17 ವರ್ಷದ ಬಾಲಕಿಯ ಅತ್ಯಾಚಾರ ಎಸಗಿದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 2:50 IST
Last Updated 2 ಆಗಸ್ಟ್ 2021, 2:50 IST

ಚಿಕ್ಕಮಗಳೂರು: 17 ವರ್ಷದ ಬಾಲಕಿಯ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಚಿಕ್ಕಮಗಳೂರು ತಾಲ್ಲೂಕಿನ ಅಲ್ಲಂಪುರದ ಎ.ಆರ್‌.ಗುರುಮೂರ್ತಿ ಅಲಿಯಾಸ್‌ ಗೊಂಬೆ ಎಂಬಾತಗೆ 20 ವರ್ಷ ಕಠಿಣ ಸಜೆ, ₹ 50 ಸಾವಿರ ದಂಡವನ್ನು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್‌ (ಎಫ್‌ಟಿಎಸ್‌ಸಿ– ಪೊಕ್ಸೊ) ವಿಧಿಸಿ ಆದೇಶಿಸಿದೆ.

ನ್ಯಾಯಾಧೀಶರಾದ ವಿನುತಾ ಪಿ. ಶೆಟ್ಟಿ ಈ ಆದೇಶ ನೀಡಿದ್ದಾರೆ. ಸಂತ್ರಸ್ತ ಬಾಲಕಿಗೆ ದಂಡದ ಮೊತ್ತ ₹ 50 ಸಾವಿರ, ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಪರಿಹಾರ ಧನ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

ಏನಿದು ಪ್ರಕರಣ: 2019ರ ಜೂನ್‌ 7ರಂದು ಪ್ರಕರಣ ನಡೆದಿತ್ತು. ಮೂಡಿಗೆರೆ ತಾಲ್ಲೂಕಿನ ಬಣಕಲ್‌ ಪೋಲಿಸ್‌ ಠಾಣಾ ವ್ಯಾಪ್ತಿಯ ಗ್ರಾಮದ ಬಾಲಕಿಯು ಅಜ್ಜನ ಮನೆಗೆ ಬಂದಿದ್ದಾಗ ಗುರುಮೂರ್ತಿ ಪರಿಚಯಿಸಿಕೊಂಡಿದ್ದ. ಇಬ್ಬರೂ ಫೋನ್‌ನಲ್ಲಿ ಸಂಪರ್ಕದಲ್ಲಿದ್ದರು.

ADVERTISEMENT

ಮದುವೆಯಾಗುವುದಾಗಿ ಬಾಲಕಿಯನ್ನು ಗುರುಮೂರ್ತಿ ಪುಸಲಾಯಿಸಿದ್ದ. ಬಾಲಕಿಯ ಊರಿಗೆ ಹೋಗಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಅತ್ಯಾಚಾರ ಎಸಗಿದ್ದ. ವಿಚಾರವನ್ನು ಯಾರಿಗೂ ತಿಳಿಸದಂತೆ ಬಾಲಕಿಗೆ ಬೆದರಿಕೆ ಹಾಕಿದ್ದ.

ಬಾಲಕಿ ಗರ್ಭಿಣಿಯಾಗಿರುವುದು ತಾಯಿಗೆ ಗೊತ್ತಾಗಿದೆ. ಆಗ ಬಾಲಕಿ ನಡೆದ ಸಂಗತಿಯನ್ನು ತಾಯಿಗೆ ತಿಳಿಸಿದ್ದಾರೆ.

ಬಾಲಕಿಯ ತಾಯಿ ಗುರುಮೂರ್ತಿಯನ್ನು ವಿಚಾರಿಸಿದಾಗ ಆತ ನಿರಾಕರಿಸಿದ್ದ. 2020ರ ಫೆ. 2ರಂದು ಬಣಕಲ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸ್‌ ಇನ್‌ಸ್ಪೆಕ್ಟರ್‌ ಎಚ್‌.ಎಂ.ಜಗನ್ನಾಥ್‌ ತನಿಖೆ ನಡೆಸಿ ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪೊಕ್ಸೊ ಕೋರ್ಟ್‌ನ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಬಿ.ಎಚ್‌.ಶ್ರೀಹರ್ಷ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.