ADVERTISEMENT

ಜಿಂದಾಲ್‌ ಕಂಪೆನಿಗೆ ಜಮೀನು ಕ್ರಯಪತ್ರ ನಿರ್ಣಯ ಪ್ರಶ್ನಿಸಿ ಸಿ.ಎಂಗೆ ಪತ್ರ

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 11:55 IST
Last Updated 8 ಜೂನ್ 2019, 11:55 IST
ಸಿ.ಟಿ.ರವಿ 
ಸಿ.ಟಿ.ರವಿ    

ಚಿಕ್ಕಮಗಳೂರು: ಬಳ್ಳಾರಿ ಜಿಲ್ಲೆಯ ಜಿಂದಾಲ್‌ ಕಂಪೆನಿಗೆ 3,667 ಎಕರೆ ಸರ್ಕಾರಿ ಜಮೀನನ್ನು ಕ್ರಯಪತ್ರ (ಸೇಲ್‌ ಡೀಡ್‌) ಮಾಡಿಕೊಡಲು ನಿರ್ಣಯಿಸಿರುವುದಕ್ಕೆ ಸಂಬಂಧಿಸಿದಂತೆ ಹಲವು ಸಂಶಯಗಳು, ಪ್ರಶ್ನೆಗಳು ಎದ್ದಿವೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸಚಿವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಪ್ರಶ್ನೆಗಳನ್ನು ಉಲ್ಲೇಖಿಸಿದ್ದಾರೆ.

* ಜಿಂದಾಲ್‌ ಕಂಪೆನಿಗೆ ಸೇಲ್‌ ಡೀಡ್‌ ಮಾಡಿಕೊಡುವುದರಿಂದ ರಾಜ್ಯಕ್ಕೆ ಆಗುವ ಲಾಭವೇನು.

ADVERTISEMENT

* ರಾಷ್ಟ್ರೀಯ ಹೆದ್ದಾರಿಗೆ ಅದೇ ತಾಲ್ಲೂಕಿನಲ್ಲಿ ಜಮೀನು ವಶಪಡಿಸಿಕೊಳ್ಳಲು ಖಾಸಗಿಯವರಿಗೆ ₹ 30 ಲಕ್ಷದಿಂದ ಒಂದು ಕೋಟಿವರೆಗೂ ಮೀರಿ ಪರಿಹಾರ ಕೊಟ್ಟಿರುವಾಗ ಎಕರೆಗೆ ₹ 1.22 ಲಕ್ಷದಂತೆ ಕ್ರಯ ಪತ್ರ ಮಾಡಿಕೊಡುತ್ತಿರುವುದರ ಉದ್ದೇಶ ಏನು.

* ಈವರೆಗೆ ಈ ಕಂಪೆನಿಗೆ ಎಷ್ಟು ಜಮೀನನ್ನು, ಎಷ್ಟು ವರ್ಷಗಳ ಅವಧಿಗೆ ಭೋಗ್ಯಕ್ಕೆ(ಲೀಸ್‌)ನೀಡಲಾಗಿದೆ.

*ಈ ಕಂಪೆನಿಗೆ ಸರ್ಕಾರ ಒದಗಿಸುತ್ತಿರುವ ನೀರಿನ ಪ್ರಮಾಣ ಎಷ್ಟು ಮತ್ತು ಆ ನೀರನ್ನು ಎಲ್ಲಿಂದ ಒದಗಿಸಲಾಗುತ್ತಿದೆ.

* ಕಂ‍ಪೆನಿ ಆರಂಭಿಸಿದ ಮೇಲೆ ಸುತ್ತಲಿನ ಜನಜೀವನದ ಮೇಲೆ, ಆರೋಗ್ಯದ ಮೇಲೆ, ಪರಿಸರದ ಮೇಲೆ ಆಗಿರುವ ಪರಿಣಾಮ ಏನು. ಸಾಮಾಜಿಕ ಪರಿಶೋಧನೆ ಆಗಿದೆಯೇ.

* ಈ ಸ್ಟೀಲ್‌ ಪ್ಲಾಂಟ್‌ನಿಂದ ಎಷ್ಟು ಉದ್ಯೋಗ ಸೃಷ್ಟಿ ಆಗುತ್ತದೆ ಎಂದು ಪ್ರಸ್ತಾವದಲ್ಲಿ ತಿಳಿಸಿತ್ತು. ಸೃಷ್ಟಿಯಾಗಿರುವ ಉದ್ಯೋಗ ಎಷ್ಟು? ಸ್ಥಳೀಯರು, ಕನ್ನಡಿಗರಿಗೆ ಎಷ್ಟು ನೀಡಲಾಗಿದೆ.

* ಈ ಕಂಪೆನಿ ಎಂಎಂಎಲ್‌ ಬಾಕಿ ಉಳಿಸಿಕೊಂಡಿರುವ ಹಣ ಎಷ್ಟು

* ಸಂತೋಷ್‌ ಹೆಗ್ಡೆ ಲೋಕಾಯುಕ್ತರಾಗಿದ್ದಾಗ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ವರದಿಯಲ್ಲಿ ಜಿಂದಾಲ್‌ ಕಂಪೆನಿ ಬಗ್ಗೆ ಇರುವ ಉಲ್ಲೇಖ ಏನು

* ಜಮೀನು ಪರಭಾರೆ ಮಾಡಲು ಕಾನೂನು ಇಲಾಖೆ ನೀಡಿರುವ ಅಭಿಪ್ರಾಯ ಏನು

* ಕೆಲ ಐಎಎಸ್‌, ಐಪಿಎಸ್‌ ಅಧಿಕಾರಿಗಳು ನಿವೃತ್ತಿ ನಂತರ ಈ ಕಂಪೆನಿಯಲ್ಲಿ ದೊಡ್ಡ ಮೊತ್ತದ ಸಂಬಳಕ್ಕೆ ಕೆಲಸ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ.

* ಈ ಕಂಪೆನಿ ಮತ್ತು ಇತರ ಕಂಪೆನಿಗಳಿಗೆ 2001ರಿಂದ 1009–10ರವರೆಗೆ ಎಂಎಂಎಲ್‌ ಮೂಲಕ ಕಡಿಮೆ ಬಲೆಗೆ ಅದಿರು ಸರಬರಾಜು ಮಾಡಿರುವ ಬಗ್ಗೆ ಸಿಎಜಿ ನೀಡಿರುವ ವರದಿ ಏನು

* ಬಾಕಿ ಪಾವತಿಗಾಗಿ ಎಂಎಂಎಲ್‌ ಮತ್ತು ಜೆಎಸ್‌ಡಬ್ಲು ನಡುವೆ ಕೋರ್ಟ್‌ನಲ್ಲಿರುವ ವಿವಾದ ಇತ್ಯರ್ಥವಾಗಿದೆಯೇ

* ಒಮ್ಮೆ ಸೇಲ್‌ ಡೀಡ್‌ ಮಾಡಿದ ನಂತರ ಸರ್ಕಾರ ಯಾವ ರೀತಿಯಲ್ಲಿ ಕಂಪೆನಿ ಮೇಲೆ ನಿಯಂತ್ರಣ ಮತ್ತು ನಿರ್ದೇಶನ ಮಾಡಲು ಸಾಧ್ಯವಿದೆಯೇ.

* ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 10 ಎಕರೆಗೂ ಹೆಚ್ಚಿನ ಜಾಗವನ್ನು ಯಾವುದೇ ಕೈಗಾರಿಕೆ ನೀಡುವಾಗ ಸೇಲ್‌ ಡೀಡ್‌ ಮಾಡದೇ ದೀರ್ಘಾವಧಿ ಗುತ್ತಿಗೆ ನೀಡುವ ಮೂಲಕ ಸರ್ಕಾರ ಜಮೀನಿನ ಮೇಲೆ ನಿಯಂತ್ರಣ ಹೊಂದಬೇಕು ಎಂಬ ನಿರ್ಣಯಕ್ಕೆ ವ್ಯತಿರಿಕ್ತವಾಗಿ ಭೂಮಿ ಪರಭಾರೆ ಮಾಡಲು ಹೊರಟಿರುವುದರ ಬಗ್ಗೆ ಕಾಂಗ್ರೆಸ್‌ ಪಕ್ಷದ ನಿಲುವು ಏನು ಎಂದು ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.