ಚಿಕ್ಕಮಗಳೂರು: ವಾರದಿಂದ ಸುರಿದ ಮಹಾಮಳೆಗೆ ಜಿಲ್ಲೆಯಲ್ಲಿ 190 ಕುಟುಂಬಗಳು ನೆಲೆ ಕಳೆದುಕೊಂಡಿವೆ. 281 ರೈತರ ಬೆಳೆ ಹಾಳಾಗಿದ್ದು, 188 ಕಿಲೋ ಮೀಟರ್ ರಸ್ತೆ ಹಾಳಾಗಿದೆ. 52 ಸೇತುವೆಗಳು ಹಾನಿಗೀಡಾಗಿವೆ.
ಕಳೆದ ಏಳು ದಿನಗಳಲ್ಲಿ ವಾಡಿಕೆಯಂತೆ ಜಿಲ್ಲೆಯ ಸರಾಸರಿ ಮಳೆ 12 ಸೆಂಟಿ ಮೀಟರ್ ಆಗಬೇಕಿತ್ತು. ಆದರೆ, 33 ಸೆಂಟಿ ಮೀಟರ್ ಮಳೆಯಾಗಿದೆ. ಅದರಲ್ಲೂ ಚಿಕ್ಕಮಗಳೂರು, ಶೃಂಗೇರಿ, ಮೂಡಿಗೆರೆ, ಕಳಸ, ಕೊಪ್ಪ, ಎನ್.ಆರ್.ಪುರ ತಾಲ್ಲೂಕನ್ನು ಏಳು ದಿನ ಮಳೆಯಲ್ಲೇ ಮುಳುಗಿಸಿತ್ತು. ಶೃಂಗೇರಿ ತಾಲ್ಲೂಕಿನಲ್ಲಿ ಏಳು ದಿನಗಳಲ್ಲಿ ವಾಡಿಕೆ ಮಳೆ 29 ಸೆಂಟಿ ಮೀಟರ್ ಆಗಬೇಕಿತ್ತು. ಆದರೆ, ಅತೀ ಹೆಚ್ಚು 74 ಸೆಂಟಿ ಮೀಟರ್ ಮಳೆಯಾಗಿದೆ.
ಈ ಮಳೆ ಮಲೆನಾಡನ್ನು ನಡುಗಿಸಿದ್ದು, 9 ಕಡೆಗಳಲ್ಲಿ ಹೆಚ್ಚಿನ ಪ್ರಮಾಣದ ಭೂಕುಸಿತ ಉಂಟಾಗಿದೆ. ಇದಲ್ಲದೇ ಸಣ್ಣ–ಪುಟ್ಟದಾಗಿ ರಸ್ತೆ ಬದಿ ಹಲವು ಕಡೆ ಮಣ್ಣು ಜರಿದಿದೆ. ಮರಗಳು, ವಿದ್ಯುತ್ ಕಂಬಗಳು ಮನೆಗಳ ಮೇಲೆಯೇ ಕುಸಿದು ಬಿದ್ದಿವೆ. ಇದರೊಂದಿಗೆ ಬಿರುಗಾಳಿ ಮತ್ತು ವಿಪರೀತ ಮಳೆಯಿಂದಲೂ ಗೋಡೆಗಳು ಕುಸಿದು ಹಲವರು ಮನೆ ಕಳೆದುಕೊಂಡಿದ್ದಾರೆ.
ಜೂನ್ 1ರಿಂದ ಈವರೆಗೆ ಒಟ್ಟಾರೆ 190 ಕುಟುಂಬಗಳು ಮನೆ ಕಳೆದುಕೊಂಡು ಬೀದಿಗೆ ಬಿದ್ದಿವೆ. ಚಿಕ್ಕಮಗಳೂರು ತಾಲ್ಲೂಕಿನಲ್ಲೇ ಅತೀ ಹೆಚ್ಚು 44 ಮನೆಗಳಿಗೆ ಹಾನಿಯಾಗಿದ್ದು, ಮೂಡಿಗೆರೆ ತಾಲ್ಲೂಕಿನಲ್ಲಿ 45 ಮತ್ತು ಬಯಲು ಸೀಮೆಯಾದ ಕಡೂರು ತಾಲ್ಲೂಕಿನಲ್ಲೂ 23 ಮನೆಗಳಿಗೆ ಹಾನಿಯಾಗಿದೆ. ಒಟ್ಟು ನಾಲ್ಕು ಹಸುಗಳೂ ಮೃತಪಟ್ಟಿವೆ.
ಇದಲ್ಲದೇ ಏಪ್ರಿಲ್ 1ರಿಂದ ಮೇ 31ರವರೆಗೆ ಮುಂಗಾರು ಪೂರ್ವ ಮಳೆಯಲ್ಲೂ 91 ಮನೆಗಳು ಹಾನಿಗೀಡಾಗಿದ್ದು, ಮರ ಮತ್ತು ವಿದ್ಯುತ್ ಕಂಬ ಬಿದ್ದು ನಾಲ್ವರು ಮೃತಪಟ್ಟಿದ್ದರು. ಮೂರು ಜಾನುವಾರುಗಳೂ ಬಲಿಯಾಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.