ADVERTISEMENT

ಕೊಪ್ಪ: ತರಕಾರಿ ಕೃಷಿಯಲ್ಲಿ ಬಂಪರ್‌ ಆದಾಯ

ಮಣಿಪುರದ ಕೃಷಿಕ ಅಲ್ಪೋನ್ಸ್ ಡಿಸೋಜ ಕುಟುಂಬ ವಿಭಿನ್ನ ಕೃಷಿ

ರವಿಕುಮಾರ್ ಶೆಟ್ಟಿಹಡ್ಲು
Published 28 ಜನವರಿ 2020, 19:58 IST
Last Updated 28 ಜನವರಿ 2020, 19:58 IST
ಗದ್ದೆ ನೆಲದಲ್ಲಿ ಬಸಳೆಸೊಪ್ಪು ಹಬ್ಬಿಸಿದ ಕೊಪ್ಪ ತಾಲ್ಲೂಕಿನ ಮಣಿಪುರ ಕೃಷಿಕ ಅಲ್ಪೋನ್ಸ್ ಡಿಸೋಜ ಕುಟುಂಬ
ಗದ್ದೆ ನೆಲದಲ್ಲಿ ಬಸಳೆಸೊಪ್ಪು ಹಬ್ಬಿಸಿದ ಕೊಪ್ಪ ತಾಲ್ಲೂಕಿನ ಮಣಿಪುರ ಕೃಷಿಕ ಅಲ್ಪೋನ್ಸ್ ಡಿಸೋಜ ಕುಟುಂಬ   

ಕೊಪ್ಪ: ತಾಲ್ಲೂಕಿನ ಹರಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಗುಣವಂತೆ ಗ್ರಾಮದ ಮಣಿಪುರದ ಕೃಷಿಕ ಅಲ್ಪೋನ್ಸ್ ಡಿಸೋಜ ಅವರ ಅರ್ಧ ಎಕರೆ ಜಾಗದಲ್ಲಿ ಶ್ರಮದಾಯಕ ಕೃಷಿ ಕಾಯಕ ಮಾಡುತ್ತಿದ್ದಾರೆ.

ತರಕಾರಿ ಕೃಷಿಯಲ್ಲಿ ಇದೀಗ ಹರಿವೆ ಸೊಪ್ಪು, ಸೋರೆ ಕಾಯಿ, ತೊಂಡೆ, ಪಡವಳಕಾಯಿ, ಬದನೆಕಾಯಿ ಬೆಳೆಯಿಂದ ಲಾಭದಾಯಕ ಜೀವನ ಕಂಡು ಕೊಂಡಿದ್ದಾರೆ. ಒಟ್ಟು ಮೂರು ಎಕರೆ ಜಾಗದಲ್ಲಿ ಕಾಫಿ, ಅಡಿಕೆ, ಕಾಳು ಮೆಣಸು ಬೆಳೆಯುತ್ತಿದ್ದಾರೆ. ಇಷ್ಟಾದರೂ ತರಕಾರಿ ಕೃಷಿಯಲ್ಲಿಯೇ ಇವರು ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ.

ಕೃಷಿಗೆ ಭತ್ತದ ಗದ್ದೆಯ ಪಕ್ಕದ ಹಳ್ಳದ ನೀರನ್ನು ಆಶ್ರಯಿಸಿರುವ ಇವರು ನಿರಂತರವಾಗಿ 35ಕ್ಕೂ ಹೆಚ್ಚಿನ ವರ್ಷಗಳಿಂದ ತರಕಾರಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಶಿವರಾತ್ರಿ ಚಳಿ ಮುಗಿದ ನಂತರ ಬೆಳೆ ಬದಲಾವಣೆ ಮಾಡಲಿರುವ ಅಲ್ಪೋನ್ಸ್ ಅವರು ಇದೇ ಜಾಗದಲ್ಲಿ ಬೆಂಡೆ, ಬೀನ್ಸ್, ಅಲಸಂದೆ, ಗದ್ದೆ ಸೌತೆ, ಎಳೆ ಸೌತೆ ಬೆಳೆಯಲು ತಯಾರಿ ನಡೆಸಿದ್ದಾರೆ.

ADVERTISEMENT

ಬಸಳೆ ಸೊಪ್ಪಿನ ಬಳ್ಳಿಯನ್ನು ಮಂಗಳೂರಿನಿಂದ ಪ್ರತಿ ವರ್ಷ ತಂದು ನಾಟಿ ಮಾಡುತ್ತಿದ್ದಾರೆ. ಉತ್ತಮ ಇಳುವರಿ ಕೊಡುವ ವಿವಿಧ ತರಕಾರಿ ಬೀಜವನ್ನು ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರಿನ ಆಯ್ದ ಕಡೆಗಳಲ್ಲಿ ಖರೀದಿಸಿ ಕೃಷಿಗೆ ಬಳಸುತ್ತಿದ್ದಾರೆ.

‘ತರಕಾರಿ ಬೀಜ ಬಿತ್ತನೆ ನಂತರ ಸಾವಯವ ಗೊಬ್ಬರವನ್ನು ತಿಂಗಳಿಗೊಮ್ಮೆ ಹಾಕಿ, ನೀರನ್ನು ವಾರಕ್ಕೆ ಎರಡು ದಿನಗಳಂತೆ ಹಾಯಿಸಬೇಕು. ಹರಿವೆ ಸೊಪ್ಪಿಗೆ ಮಾತ್ರ ಪ್ರತಿದಿನ ನೀರು ತಪ್ಪಿಸುವಂತಿಲ್ಲ’ ಎಂಬುದು ಅಲ್ಪೋನ್ಸ್ ಹೇಳುವ ಮಾತು.

ಅಲ್ಪೋನ್ಸ್ ಅವರ ಪತ್ನಿ ಲವಿನಾ ಡಿಸೋಜ ಪ್ರತಿ ವಾರದಂದು ಬಾಳೆಹೊನ್ನೂರಿನ ಸಂತೆ ದಿನ ಅಲ್ಲಿ ತರಕಾರಿ ಮಾರಾಟ ಮಾಡುತ್ತಾರೆ.

‘ತರಕಾರಿಯನ್ನು ಕುದುರೆಗುಂಡಿ, ಕೊಪ್ಪ, ಜಯಪುರ ಭಾಗದ ಅಂಗಡಿಗಳಿಗೆ ರಖಂ ದರದಲ್ಲಿ ಮಾರಾಟ ಮಾಡುತ್ತೇವೆ. ಬಸಳೆ ಸೊಪ್ಪನ್ನು 500ಕ್ಕೂ ಹೆಚ್ಚಿನ ಕಟ್ಟನ್ನು ವಾರಕ್ಕೆ ಕೊಯ್ದು ಪ್ರತಿ ಕಟ್ಟಿಗೆ ₹ 20ರಂತೆ ನಾವೇ ಮಾರಾಟ ಮಾಡುತ್ತಿದ್ದೇವೆ’ ಎಂದು ಲವಿನಾ ತಿಳಿಸಿದರು.

‘ನಾವು ತರಕಾರಿ ಬೆಳೆಯುತ್ತಿರುವ ಜಾಗದಲ್ಲಿ ಜಿಂಕೆ, ಮಂಗಗಳ ಕಾಟ ಹೆಚ್ಚಿದೆ. ಅವುಗಳ ಹಾವಳಿ ತಡೆಯಲು ಬೇಲಿಗೆ ಮೆಷ್ ಅಳವಡಿಸಿದ್ದೇವೆ. ನಿರಂತರವಾಗಿ ಕೆಲಸ ಮಾಡದಿದ್ದಲ್ಲಿ ತರಕಾರಿ ಕೃಷಿ ಮಾಡುವುದು ಕಷ್ಟ. ಲಾಭ ಬೇಕು ಎಂದ ಮೇಲೆ ಹೆಚ್ಚಿನ ಶ್ರಮ ಹಾಕಲೇಬೇಕು. ಬೇರೆ ಬೆಳೆಗಳ ಬೆಲೆ ಏರಿಳಿತಗಳ ನಡುವೆ ತರಕಾರಿ ಕೃಷಿ ಪ್ರಸ್ತುತ ಸೂಕ್ತ’ ಎನ್ನುತ್ತಾರೆ ಅಲ್ಪೋನ್ಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.