
ಕೊಪ್ಪ: ‘ತಾಲ್ಲೂಕಿನಲ್ಲಿ ಜ.15ರಿಂದ ಫೆ.6ರ ತನಕ ವಿವಿಧ ಕಡೆಗಳಲ್ಲಿ ಗ್ರಾಮಮಟ್ಟದಲ್ಲಿ ಹಿಂದೂ ಸಮಾಜೋತ್ಸವ ಹಮ್ಮಿಕೊಳ್ಳಲಾಗಿದೆ. ಹಿಂದೂಗಳನ್ನು ಒಗ್ಗೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ಅಧ್ಯಕ್ಷ ಕೆ.ಎಸ್.ಸುಬ್ರಹ್ಮಣ್ಯ ಶೆಟ್ಟಿ ತಿಳಿಸಿದರು.
ಪಟ್ಟಣದಲ್ಲಿ ಬುಧವಾರ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರು ವರ್ಷದ ಪ್ರಯುಕ್ತ ವಿವಿಧ ಕಡೆಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹರಿಹರಪುರ ಸ್ವಾಮೀಜಿ, ಶಕಟಪುರ ಸ್ವಾಮೀಜಿ, ಆದಿ ಚುಂಚನಗಿರಿಯ ಶೃಂಗೇರಿ ಶಾಖಾ ಮಠದ ಸ್ವಾಮೀಜಿ, ಎನ್.ಆರ್.ಪುರದ ಬಸ್ತಿ ಮಠದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಇದು ಹಿಂದೂಗಳ ಹಬ್ಬ, ಎಲ್ಲಾ ಪಕ್ಷದವರು ಭಾಗವಹಿಸಬೇಕು' ಎಂದು ಮನವಿ ಮಾಡಿದರು.
ಕಾರ್ಯಕ್ರಮ ಸಂಯೋಜಕ ಪ್ರಬೋಧಿನಿ ಗುರುಕುಲದ ಉಮೇಶ್ ರಾವ್ ಮಾತನಾಡಿ, ‘ಜ.15ರಂದು ಅಗಳಗಂಡಿಯಲ್ಲಿ, 18ರಂದು ಕೆಸವೆ, 22ಕ್ಕೆ ಕೊಪ್ಪದಲ್ಲಿ, 25ಕ್ಕೆ ಹರಿಹರಪುರ, ಹೇರೂರು, ಬಸರಿಕಟ್ಟೆ, ಕೊಗ್ರೆಯಲ್ಲಿ, 26ಕ್ಕೆ ಬಂಡಿಗಡಿಯಲ್ಲಿ, ಫೆ.1ರಂದು ಜಯಪುರ, ನಿಲುವಾಗಿಲು, 2ರಂದು ಬೊಮ್ಮಲಾಪುರ, 4ಕ್ಕೆ ಉತ್ತಮೇಶ್ವರ, 5ಕ್ಕೆ ಅಂದಗಾರು, 6ರಂದು ತೆಂಗಿನಮನೆಯಲ್ಲಿ ಸಮಾಜೋತ್ಸವ ಆಯೋಜಿಸಲಾಗಿದೆ’ ಎಂದರು.
‘ಜ.22ರಂದು ಅಯೋಧ್ಯೆಯಲ್ಲಿ ಬಲರಾಮನ ಪ್ರತಿಷ್ಠಾಪನೆಯಾದ ದಿನದ ಪ್ರಯುಕ್ತ ಅಂದು ಸಂಜೆ 6 ಗಂಟೆಗೆ ಅಖಂಡ ದೀಪೋತ್ಸವ, ಶೋಭಾಯಾತ್ರೆ ಆಯೋಜಿಸಲಾಗಿದೆ. ಬಳಿಕ ಶಕಟಪುರ ಮಠದ ವಿದ್ಯಾಭಿನವ ಕೃಷ್ಣಾನಂದತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ದೇವಾಲಯ ಸಂವರ್ಧನ ಸಮಿತಿ ರಾಜ್ಯ ಸಂಯೋಜಕ ಮನೋಹರ್ ಮಠದ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ’ ಎಂದು ಮಾಹಿತಿ ನೀಡಿದರು.
ಹಿಂದೂ ಸಮಾಜೋತ್ಸವ ಆಯೋಜನೆ ಸಮಿತಿ ಗೌರವಾಧ್ಯಕ್ಷ ಎಲ್.ಎಂ.ಪ್ರಕಾಶ್ ಕೌರಿ, ಸಮಿತಿಯ ಉಪಾಧ್ಯಕ್ಷರಾದ ಡಾ.ಉದಯ ಶಂಕರ್, ಬಿ.ಕೆ.ಗಣೇಶ್ ರಾವ್, ಕೋಶಾಧ್ಯಕ್ಷ ಸಂದೇಶ, ಭೋಜ ಪೂಜಾರಿ ಜಯಪುರ, ರೇಖಾ ಉದಯ ಶಂಕರ್, ಸರಸ್ವತಿ, ಶ್ರವಣ್ ಪಟೇಲ್, ವಿಜಯಕುಮಾರ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.