ಅಜ್ಜಂಪುರ: ಕೊರೊನಾ ವೈರಸ್ ಜಗತ್ತಿನೆಲ್ಲೆಡೆ ಆತಂಕ ಸೃಷ್ಟಿಸಿದೆ. ಸಾವಿರಾರು ಜನರ ಬಲಿ ಪಡೆದಿದೆ. ಜನಸಾಮಾನ್ಯರಲ್ಲಿ ರೋಗದ ಭೀತಿ ಆವರಿಸಿದೆ. ಆದರೆ, ರೋಗಕಾರಕ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಸಜ್ಜುಗೊಂಡಿಲ್ಲ.
ಕೋವಿಡ್-19 ಸೋಂಕು ತಗುಲಿದ ವ್ಯಕ್ತಿಗೆ ‘ಐಸೋಲೇಷನ್’ ವಾರ್ಡ್ ನಿರ್ಮಿಸಿ, ತಪಾಸಣೆ, ಚಿಕಿತ್ಸೆ ನೀಡಬೇಕು ಎಂಬ ನಿಯಮವಿದೆ. ಆದರೆ, ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂತಹ ಪ್ರತ್ಯೇಕ ಮತ್ತು ಸುಸಜ್ಜಿತ ವಾರ್ಡ್ ಈವರೆಗೂ ಸ್ಥಾಪನೆ ಆಗಿಲ್ಲ.
ಕೇಂದ್ರದ ವ್ಯಾಪ್ತಿಯಲ್ಲಿ ನಾಲ್ವರು ವಿದೇಶದಿಂದ ವಾಪಸಾಗಿದ್ದು, ಒಬ್ಬರು ಹೋಂ ಕ್ವಾರಂಟೈನ್ ಪೂರ್ಣ
ಗೊಳಿಸಿದ್ದಾರೆ. ಮೂವರು ಕ್ವಾರಂಟೈನ್
ನಲ್ಲಿದ್ದಾರೆ. ತಾಲ್ಲೂಕಿಗೆ ಅಜ್ಮೀರ್, ಬಿಹಾರದಿಂದ ಮೂವರು, ಮುಂಬೈ ಯಿಂದ ಇಬ್ಬರು, ಕೋಲ್ಕತ್ತದಿಂದ ಒಬ್ಬರು ಹಿಂತಿರುಗಿದ್ದಾರೆ. ಇನ್ನು ಬೆಂಗಳೂರಿನಿಂದ ಸುಮಾರು 590ಕ್ಕೂ ಹೆಚ್ಚು ಮಂದಿ ಮರಳಿದ್ದಾರೆ. ಹೀಗಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆ ಕೊರೊನಾ ವಿಶೇಷ ತಪಾಸಣೆ ಮತ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಂಡಿಲ್ಲ.
‘ಜನರಲ್ಲಿ ಕೋವಿಡ್-19 ಭೀತಿ ಇದೆ. ತೀವ್ರ ಜ್ವರ, ನಿರಂತರ ಕೆಮ್ಮಿನಿಂದ ಬಾಧಿತರಿಗೆ ಸಾಮಾನ್ಯ ಕೊಠಡಿಯಲ್ಲಿ ತಪಾಸಣೆ, ಚಿಕಿತ್ಸೆ ನೀಡಲಾಗುತ್ತಿದೆ. ಇದು ಇತರ ರೋಗಿಗಳಿಗೆ ಭಯ ಹುಟ್ಟಿಸಿದೆ. ವಿದೇಶ, ಹೊರರಾಜ್ಯ, ಕೋವಿಡ್-19ನ ಯಾವುದೇ ಲಕ್ಷಣವುಳ್ಳವರಿಗೆ ಐಸೋಲೇಷನ್ ವಾರ್ಡ್ ತೆರೆದು, ಅಲ್ಲಿಯೇ ಚಿಕಿತ್ಸೆ ನೀಡಬೇಕು’ ಎಂದು ಚೇತನ್ ಆಗ್ರಹಿಸಿದ್ದಾರೆ.
‘ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಅಜ್ಜಂಪುರವನ್ನು ತಾಲ್ಲೂಕು ಆಗಿ ಪರಿಗಣಿಸಿಲ್ಲ ಎನಿಸುತ್ತಿದೆ. ಹಾಗಾಗಿಯೇ ಅಜ್ಜಂಪುರದಲ್ಲಿ ಐಸೋಲೇಷನ್ ವಾರ್ಡ್ ಸ್ಥಾಪಿಸಲು ಮುಂದಾಗಿಲ್ಲ. ಕೂಡಲೇ ಈ ಬಗ್ಗೆ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು. ಮಾರಣಾಂತಿಕ ಕೊರೊನಾ ಸೋಂಕು ಚಿಕಿತ್ಸೆಗೆ ಪಟ್ಟಣದಲ್ಲಿ ಐಸೋಲೇಶನ್ ವಾರ್ಡ್ ತೆರೆಯಬೇಕು’ ಎಂದು ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.
‘ಅಜ್ಜಂಪುರದ ಆರೋಗ್ಯ ಕೇಂದ್ರ, ತಾಲ್ಲೂಕು ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಲ್ಲ. ಅಲ್ಲಿ ಐಸೋಲೇಷನ್ ವಾರ್ಡ್ ಸ್ಥಾಪಿಸಿಲ್ಲ. ಕೋವಿಡ್ 19 ಸೋಂಕು ಲಕ್ಷಣ ಕಂಡು ಬಂದವರನ್ನು ತರೀಕೆರೆಗೆ ರವಾನಿಸಿ, ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ’ ಎಂದು ಟಿಎಚ್ಒ ಡಾ.ಚಂದ್ರಶೇಖರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.