ADVERTISEMENT

12 ಮಂದಿ ಬಂಧನ; ಕಾರು, ನಗ–ನಗದು ವಶ

‘ಐ ಕಾಯಿನ್‌’ ಹಣ ಹೂಡಿಕೆ; ವಂಚನೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 6:08 IST
Last Updated 19 ಜುಲೈ 2019, 6:08 IST

ಚಿಕ್ಕಮಗಳೂರು: ‘ಐ ಕಾಯಿನ್‌’ಗೆ ಆನ್‌ಲೈನ್‌ನಲ್ಲಿ ಹಣ ಹೂಡಿಕೆ ವಂಚನೆ ಪ್ರಕರಣದಲ್ಲಿ 12 ಮಂದಿಯನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 10 ಕಾರುಗಳು, ₹ 43 ಸಾವಿರ ನಗದು, ₹ 5ಲಕ್ಷ ಮೌಲ್ಯದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಕಾಡುಹೊಳೆಯ ಕವಿತಾ (32), ನಿಂಜೂರಿನ ಸಂಜಯ್ ಹೆಗ್ಗಡೆ (39), ಬೈಂದೂರು ತಾಲ್ಲೂಕಿನ ಅರುಣಗಿರಿಯ ಗಿರೀಶ್‌ (54), ಕುಂದಾಪುರ ತಾಲ್ಲೂಕಿನ ಕರ್ಕಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಸುದೇಶ ಶೆಟ್ಟಿ (25), ವಾಂಡ್ಸೆ ಗ್ರಾಮದ ಪ್ರಭಾಕರ ಗಾಣಿಗ (36), ಉಡುಪಿಯ ಚಂದ್ರಶೇಖರ್‌ (37),

ಮಂಗಳೂರಿನ ದೀಪಕ್‌ ಶೆಟ್ಟಿ (34), ಕಿನ್ನಿಗೊಳಿಯ ಬಿ.ಎ.ಸತೀಶ್‌ (31), ಲೋಹಿತ್‌ (32) , ಭೋಜ ಅಲಿಯಾಸ್‌ ಭೋಜರಾಜ್‌ (40), ಕೋಡಿಯಾಳಬೈಲಿನ ಮಧುಕರ್‌ (69), ಬಿನೋದ್‌ ರಾಜ್‌ (33) ಬಂಧಿತರು.

ADVERTISEMENT

‘ಐಕಾನ್‌’ ವೆಬ್‌ಸೈಟಿಗೆ ಹಣ ಹೂಡಿದರೆ ಆರು ತಿಂಗಳಲ್ಲಿ ದ್ವಿಗುಣ ವಾಗುತ್ತದೆ ಎಂದು ನಂಬಿಸಿ ಹಣ ವಂಚಿಸಲಾಗಿತ್ತು . ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಬಾರ್‌ಲೇನ್‌ ರಸ್ತೆಯ ರುಕ್ಸಿಂದಾ ಬಾನು ಎಂಬುವರನ್ನು ಬಂಧಿಸಲಾಗಿತ್ತು. ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಹಣ ಹೂಡಿ ವಂಚನೆಯಾಗಿರುವ ಬಗ್ಗೆ ಸುಮಾರು 250 ಜನರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಗರ, ಸುತ್ತಮುತ್ತಲಿನ ಜಿಲ್ಲೆಗಳ ಜನರು ದೂರು ನೀಡಿದ್ದರು.

ಹಲವಾರು ಮಂದಿ ಶಾಮೀಲಾಗಿ ವಂಚನೆ ಎಸಗಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಕಾರ್ಯಾಚರಣೆ ಕೈಗೊಂಡು ಈಗ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.