ADVERTISEMENT

‘ನೆಮ್ಮದಿಯಿಂದ ಬದುಕಲು ಅಧಿಕಾರ ಅಗತ್ಯ’

ಜೈ ಭೀಮ್ ಜನಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2022, 5:22 IST
Last Updated 3 ನವೆಂಬರ್ 2022, 5:22 IST
ಮೂಡಿಗೆರೆ ಪಟ್ಟಣದಲ್ಲಿ ಸಂವಿಧಾನ ರಕ್ಷಣೆಗಾಗಿ ರಾಜ್ಯ ವ್ಯಾಪಿ ಸಂಚರಿಸುತ್ತಿರುವ ಜೈಭೀಮ್ ಸಂಚಾರಿ ಜಾಥಾ ಸಭೆಯಲ್ಲಿ ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಮಾತನಾಡಿದರು.
ಮೂಡಿಗೆರೆ ಪಟ್ಟಣದಲ್ಲಿ ಸಂವಿಧಾನ ರಕ್ಷಣೆಗಾಗಿ ರಾಜ್ಯ ವ್ಯಾಪಿ ಸಂಚರಿಸುತ್ತಿರುವ ಜೈಭೀಮ್ ಸಂಚಾರಿ ಜಾಥಾ ಸಭೆಯಲ್ಲಿ ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಮಾತನಾಡಿದರು.   

ಮೂಡಿಗೆರೆ: ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಜನಸಾಮಾನ್ಯರು ಶಾಂತಿಯಿಂದ ಬದುಕದಂತಾಗಿದೆ. ಧಾರ್ಮಿಕ ಭಾವನೆ ವಿಷ ಬೀಜ ಬಿತ್ತುತ್ತಾ ವೋಟ್ ಬ್ಯಾಂಕ್ ರಾಜಕಾರಣ ಹಾಗೂ ದೇಶದ ಆಸ್ತಿ ಸಂಪತ್ತನ್ನು ಉದ್ಯಮಿಗಳಿಗೆ ಮಾರಾಟ ಮಾಡಿದ್ದಾರೆಂದು ಬಿಎಸ್‍ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಆರೋಪಿಸಿದರು.

ಅವರು ಬುಧವಾರ ಪಟ್ಟಣದಲ್ಲಿ ಸಂವಿಧಾನ ರಕ್ಷಣೆಗಾಗಿ ರಾಜ್ಯ ವ್ಯಾಪ್ತಿ ಸಂಚರಿಸುತ್ತಿರುವ ಜೈ ಭೀಮ್ ಜನಜಾಗೃತಿ ಜಾಥಾದಲ್ಲಿ ಮಾತನಾಡಿದರು.

ಸಂವಿಧಾನದ ಉಳಿಯಬೇಕೆಂದರೆ ಬಿಜೆಪಿ ನೇತೃತ್ವದ ಸರ್ಕಾರವನ್ನು ಬೇರು ಸಮೇತ ಕಿತ್ತೊಗೆಯುವ ಕೆಲಸ ಆಗಬೇಕಿದೆ ಎಂದು ಹೇಳಿದರು.

ADVERTISEMENT

ರಾಜ್ಯ ಉಸ್ತುವಾರಿ ದಿನೇಶ್ ಗೌತಮ್ ಮಾತನಾಡಿ, ಬೆಲೆ ಏರಿಕೆಯಿಂದ ಸಾಮಾನ್ಯ ಜನ ಮಾತ್ರವಲ್ಲ, ಮಧ್ಯಮವರ್ಗದ ಜನರು ಬದುಕಲು ಸಾಧ್ಯವಾಗದಂತಾಗಿದೆ. ದಲಿತರಿಗೆ ಮೀಸಲಾತಿ ಸಿಗಬೇಕಾದ 9 ಕ್ಷೇತ್ರವನ್ನು ಮಾರಿ ಖಾಸಗೀಕರಣ ಮಾಡಿದ್ದಾರೆ. ದಲಿತರ, ರೈತರ, ಕೂಲಿ ಕಾರ್ಮಿಕರ ಬದುಕು ಹಸನಾಗಬೇಕೆಂದರೆ ಬಿಎಸ್‍ಪಿ ಅಧಿಕಾರಕ್ಕೆ ಬರಬೇಕು ಎಂದರು.

ಅಧ್ಯಕ್ಷತೆಯನ್ನು ಬಿಎಸ್‍ಪಿ ತಾಲೂಕು ಅಧ್ಯಕ್ಷ ಲೋಕವಳ್ಳಿ ರಮೇಶ್ ವಹಿಸಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಪಿ.ವೇಲಾಯುಧನ್, ಪಿ.ಪರಮೇಶ್, ಕೆ.ಬಿ.ಸುಧಾ, ಕೆ.ಎಂ.ಗೋಪಾಲ, ಶಂಕರ್, ಎಂ.ಬಾಬು, ಜಿ.ಕೆ.ಬಸವರಾಜು, ಪಿ.ಕೆ.ಮಂಜುನಾಥ್ ಮತ್ತಿತರರಿದ್ದರು.

‘ಸಂವಿಧಾನವೇ ಪ್ರಣಾಳಿಕೆ’
ಕೊಪ್ಪ:
‘ಅಭಿವೃದ್ಧಿಗೆ ಬೇರೆ ಯಾವ ಪ್ರಣಾಳಿಕೆಯ ಅಗತ್ಯವಿಲ್ಲ, ಸಂವಿಧಾನದ ಮೂಲ ಉದ್ದೇಶ ಯಥಾವತ್ತಾಗಿ ಜಾರಿ ಮಾಡುವುದೇ ಎಲ್ಲ ಪಕ್ಷದ ಪ್ರಣಾಳಿಕೆ ಆಗಬೇಕು. ಬಹುಜನ ಸಮಾಜ ಪಕ್ಷ ಮಾತ್ರ ಸಂವಿಧಾನವನ್ನು ಪ್ರಣಾಳಿಕೆಯನ್ನಾಗಿ ಮಾಡಿಕೊಂಡಿದೆ’ ಎಂದು ಬಹುಜನ ಸಮಾಜ ಪಕ್ಷ (ಬಿ.ಎಸ್.ಪಿ) ರಾಜ್ಯ ಉಸ್ತುವಾರಿ ಎಂ.ಗೋಪಿನಾಥ್ ತಿಳಿಸಿದರು.

ಇಲ್ಲಿನ ಪುರಭವನದ ಬಳಿ ಸೋಮವಾರ ಬಹುಜನ ಸಮಾಜ ಪಕ್ಷ ವತಿಯಿಂದ ಆಯೋಜಿಸಿದ್ದ ಸಂವಿಧಾನ ಸಂರಕ್ಷಣೆಗಾಗಿ ರಾಜ್ಯವ್ಯಾಪಿ ‘ಜೈ ಭೀಮ್ ಜನಜಾಗೃತಿ ಜಾಥಾ’ದಲ್ಲಿ ಅವರು ಮಾತನಾಡಿ, ‘ಜಾತಿ ವ್ಯವಸ್ಥೆ, ತಾರತಮ್ಯ, ಯಜಮಾನ ಪ್ರವೃತ್ತಿ ಅಳಿದು ನಿಜವಾದ ಪ್ರಜಾಪ್ರಭುತ್ವ ಬರಬೇಕೆಂದರೆ ಸಂವಿಧಾನದ ಮೂಲ ಉದ್ದೇಶಗಳನ್ನು ಈಡೇರಿಸಬೇಕು’ ಎಂದರು.

‘ಒಂದು ವರ್ಷದಲ್ಲಿ ರಾಜ್ಯದಲ್ಲಿ 623 ಜಾತಿ ದೌರ್ಜನ್ಯ ಪ್ರಕರಣವಾಗಿದೆ, ಈವರೆಗೆ ಒಬ್ಬರಿಗೂ ಶಿಕ್ಷೆಯಾಗಿಲ್ಲ’ ಎಂದು ಹೇಳಿದರು.

ಎನ್.ಆರ್.ಪುರದಿಂದ ಕೊಪ್ಪ ಪಟ್ಟಣದ ಮೂಲಕ ಶೃಂಗೇರಿಗೆ ಹೋಗುವ ಮಾರ್ಗ ಮಧ್ಯೆ ತಾಲ್ಲೂಕಿನ ಕುದುರೆಗುಂಡಿಯಲ್ಲಿ ಜಾಥಾವನ್ನು ಇಲ್ಲಿನ ಕಾರ್ಯಕರ್ತರು ಸ್ವಾಗತಿಸಿದರು. ಬಕ್ಕಿ ಮಂಜುನಾಥ್ ತಂಡ ಭೀಮ ಗೀತೆಯನ್ನು ಹಾಡಿದರು. ಪಕ್ಷದ ರಾಜ್ಯ ಕಾರ್ಯದರ್ಶಿ ಗೌತಮ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುನಿಯಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್, ರಾಜ್ಯ ಕಾರ್ಯದರ್ಶಿಗಳಾದ ಜಾಕಿರ್, ಸುಧಾ, ಪರಮೇಶ್ವರ್, ಜಿಲ್ಲಾ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಉಪಾಧ್ಯಕ್ಷರಾದ ಗಂಗಾಧರ್, ಮಂಜುಳಾ, ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಆನಂದ ಬೆಳಗೊಳ, ತಾಲ್ಲೂಕು ಅಧ್ಯಕ್ಷ ಕಿರಣ್, ಸಂಯೋಜಕ ಪ್ರಭಾಕರ್, ರಮೇಶ್, ಶೇಖರ್, ಸುಬ್ರಹ್ಮಣ್ಯ ಚಂಡೆಗುಡ್ಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.