ಬಾಳೆಹೊನ್ನೂರು: ಶಾಸಕ ಟಿ.ಡಿ.ರಾಜೇಗೌಡರ ವಿರುದ್ಧ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಖಾಂಡ್ಯ ಹೋಬಳಿ ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿಗೆ ಸಮೀಪದ ಕಡಬಗೆರೆಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ‘ಶಾಸಕರ ಏಳಿಗೆಯನ್ನು ಸಹಿಸಲು ಸಾಧ್ಯವಾಗದೆ ಜೀವರಾಜ್ ಅವರು ಸುಳ್ಳು ಆರೋಪ ಮಾಡಿದ್ದಾರೆ. ಇದು ಅವರ ಹತಾಶೆಯನ್ನು ತೋರಿಸುತ್ತದೆ. ರಾಜೇಗೌಡರು ಯಾವುದೇ ತನಿಖೆ ಎದುರಿಸಲೂ ಸಿದ್ಧರಿದ್ದಾರೆ. ಬಿಜೆಪಿ ಮುಖಂಡರು ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುವುದು ಬೇಡ’ ಎಂದರು.
ಖಾಂಡ್ಯ ಹೋಬಳಿ ಅಧ್ಯಕ್ಷ ಬಿ.ಸಿ.ಮಂಜುನಾಥ್ ಮಾತನಾಡಿ, ಬಿಜೆಪಿ ಮುಖಂಡರು ಪ್ರಾಮಾಣಿಕ ಶಾಸಕರ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ ಅವರು ಯಾವುದೇ ಕಾನೂನು ಬಾಹಿರವಾಗಿ ಆಸ್ತಿ ಖರೀದಿ ಮಾಡಿಲ್ಲ. ಎಲ್ಲ ಆರೋಪಗಳಿಗೂ ಶೀಘ್ರದಲ್ಲೇ ರಾಜೇಗೌಡರು ಉತ್ತರಿಸಲಿದ್ದಾರೆ’ ಎಂದರು.
ಮುಖಂಡರಾದ ಎಸ್.ಜೆ.ಜಯಶೀಲ, ಎಸ್.ಪೇಟೆ ಸತೀಶ್, ಎ.ಕೆ.ಸುಧಾಕರ, ಪ್ರಸನ್ನ, ಮಸೀಗದ್ದೆ ಸತೀಶ್, ದಾನಿಹಳ್ಳಿ ಮಂಜುನಾಥ್, ಗಣೇಶ್, ನಾರ್ಬಟ್ ಪಿಂಟೊ, ದಿನೇಶ ಧರ್ಮೇಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.