ಕಡೂರು: ಸಮಾನತೆಯ ಆದರ್ಶದಲ್ಲಿ ಕ್ರಾಂತಿ ಮಾಡಿದ ಬಸವಣ್ಣನವರ ಅನುಯಾಯಿಯಾಗಿದ್ದ ನೂಲಿಯ ಚಂದಯ್ಯನವರ ಚಿಂತನೆಗಳು ನಮಗೆ ಆದರ್ಶವಾಗಬೇಕು ಎಂದು ಶಾಸಕ ಬೆಳ್ಳಿಪ್ರಕಾಶ್ ತಿಳಿಸಿದರು.
ಕಡೂರಿನಲ್ಲಿ ತಾಲ್ಲೂಕು ಕುಳುವ ಸಮಾಜ ಸೋಮವಾರ ಏರ್ಪಡಿಸಿದ್ದ ನೂಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಆರೂವರೆ ಲಕ್ಷ ಎಕರೆ ಅರಣ್ಯ ಜಮೀನನ್ನು ಕಂದಾಯ ಇಲಾಖೆಗೆ ವಾಪಸ್ ಪಡೆಯುವ ಪ್ರಯತ್ನಗಳಾಗುತ್ತಿದೆ. ಅದು ಸಫಲ ವಾದರೆ ತಾಲ್ಲೂಕಿನಲ್ಲಿ ಸಿಗಬಹುದಾದ ಜಮೀನನ್ನು ಬಗರ್ ಹುಕುಂ ಸಾಗುವಳಿ ಯಲ್ಲಿ ನೀಡುವ ಪ್ರಯತ್ನ ಮಾಡಬಹು ದಾಗಿದೆ. ಕುಳುವ ಸಮಾಜದ ಅಭಿವೃದ್ಧಿ ಗಾಗಿ ಸಹಕಾರ ನೀಡುತ್ತೇನೆ ಎಂದರು.
ಮಾಜಿ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ಕಾರ್ಲ್ ಮಾರ್ಕ್ಸ್ಗಿಂತ ಮುಂಚೆಯೇ 12ನೇ ಶತಮಾನದಲ್ಲಿ ಕಾಯಕ ಚಳವಳಿ ನಡೆಯಿತು. ಆ ಕ್ರಾಂತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಶಿವಶರಣರ ಪೈಕಿ ನೂಲಿಯ ಚಂದಯ್ಯ ಪ್ರಮುಖರು. ಕಾಯಕನಿಷ್ಠೆಯೇ ಮುಖ್ಯವಾಗಿದ್ದ ಚಂದಯ್ಯ, ಶಿವಪೂಜೆಗಿಂತ ಕಾಯಕವೇ ಮುಖ್ಯವೆಂದು ಸಾರಿದರು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಆರ್.ಮಹೇಶ ಒಡೆಯರ್ ಮಾತನಾಡಿ, ತಳಸಮುದಾಯಗಳಲ್ಲಿ ಆತ್ಮಸ್ಥೈರ್ಯ ಮೂಡಿಸಲು ಇಂತಹ ಆಚರಣೆ ಪೂರಕ ಎಂದರು.
ನಂದಿ ಮಠದ ವೃಷಭೇಂದ್ರ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಜಿಲ್ಲಾ ಕುಳುವ ಸಮಾಜದ ಕಾರ್ಯಾಧ್ಯಕ್ಷ ಟಿ.ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕು ಘಟಕದ ಅಧ್ಯಕ್ಷ ಎ.ಜಿ.ಗಿರೀಶ್ ಅಧ್ಯಕ್ಷತೆ ವಹಿಸಿದ್ದರು.
ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್, ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಸದಸ್ಯರಾದ ಶ್ರೀಕಾಂತ್, ಗಂಗಾಧರ್, ಬೀರೂರು ಪುರಸಭೆ ಮುಖ್ಯಾಧಿಕಾರಿ ಮಂಜಪ್ಪ, ಬಿಜೆಪಿ ಮುಖಂಡ ಅಡಿಕೆ ಚಂದ್ರು, ಜಿಲ್ಲಾ ಕುಳುವ ಸಮಾಜದ ಅಧ್ಯಕ್ಷ ಕೆ.ವಿ.ವಾಸು, ಡಿ.ಎಸ್.ಎಸ್.ಮುಖಂಡ ಶೂದ್ರಶ್ರೀನಿವಾಸ್, ಮಂಜುನಾಥ್, ಸಿ.ಎಚ್.ಮೂರ್ತಿ, ಮಲ್ಲಿದೇವಿಹಳ್ಳಿ ಶ್ರೀನಿವಾಸ್, ಯೋಗ ಶಿಕ್ಷಕ ನವೀನ್, ಸರಸ್ವತಿಪುರ ಸಂತೋಷ್, ದಾನಪ್ಪ ಇದ್ದರು. ನಂದಿಮಠದ ಶ್ರೀಗಳನ್ನು ರಥದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.