ADVERTISEMENT

ಕಡೂರು | ಹದಗೆಟ್ಟೆ ಹೆದ್ದಾರಿ: ಪ್ರಯಾಣ ಅಪಾಯಕಾರಿ

ಬೈಪಾಸ್ ಕಾಮಗಾರಿ ವಿಳಂಬ, ನಿರಂತರ ಮಳೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 4:58 IST
Last Updated 24 ಅಕ್ಟೋಬರ್ 2025, 4:58 IST
ಬೀರೂರು– ಕಡೂರು ಸಂಪರ್ಕಿಸುವ ಹೆದ್ದಾರಿಯ ಬೈಪಾಸ್‌ ಬಳಿ ಗುಂಡಿ ಬಿದ್ದಿರುವುದು
ಬೀರೂರು– ಕಡೂರು ಸಂಪರ್ಕಿಸುವ ಹೆದ್ದಾರಿಯ ಬೈಪಾಸ್‌ ಬಳಿ ಗುಂಡಿ ಬಿದ್ದಿರುವುದು   

ಕಡೂರು: ಬೈಪಾಸ್‌ ರಸ್ತೆ ಕಾಮಗಾರಿಯ ನಿಧಾನಗತಿ, ಸರ್ವಿಸ್ ರಸ್ತೆಗಳ ಮೇಲಿನ ಒತ್ತಡದ ನಡುವೆ ಮಳೆಗೆ ಸಿಲುಕಿರುವ ರಸ್ತೆಗಳು ಹದಗಟ್ಟಿವೆ. ಕಡೂರು-ಬೀರೂರು ನಡುವೆ ಇರುವ ಹೆದ್ದಾರಿಯು ಬೀರೂರು ಹೊರವಲಯದಲ್ಲಿ ಗುಂಡಿ ಬಿದ್ದು ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಈ ರಸ್ತೆ ಮೇಲೆ ಓಡಾಡುವವರ ಆರೋಗ್ಯಕ್ಕೂ ಸಮಸ್ಯೆ ಆಗುತ್ತಿದೆ.

ಬೀರೂರು ಹೊರವಲಯದಲ್ಲಿ ಆರಂಭಗೊಂಡು ಕಡೂರು ಹೊರವಲಯದ ಬಳ್ಳೇಕೆರೆ ಸಂಪರ್ಕಿಸುವ ಹೆದ್ದಾರಿ ಪ್ರವೇಶಕ್ಕೂ ಮೊದಲು ಹೆದ್ದಾರಿ 206ರಲ್ಲಿ ಇರುವ, ಕಡೂರು ಕಡೆಗಿನ ಅಂಡರ್‌ಪಾಸ್‌ ಪಕ್ಕ ಇರುವ ರಸ್ತೆಯೂ ಗುಂಡಿ ಬಿದ್ದಿದೆ. ರಸ್ತೆಯೂ ಕಿರಿದಾಗಿದ್ದು, ಪಕ್ಕದಲ್ಲಿ ಬೈಪಾಸ್‌ ತಡೆಗೋಡೆಯೂ ಇರುವ ಕಾರಣ ಗುಂಡಿ ತಪ್ಪಿಸಲು ಸಾಧ್ಯವಾಗುತ್ತಿಲ್ಲ.

ರಸ್ತೆ ಗುಂಡಿಯ ಸಮಸ್ಯೆಯ ಜತೆಗೆ ಅವೈಜ್ಞಾನಿಕ ಸರ್ವೀಸ್‌ ರಸ್ತೆಗಳು ಅಪಾಯಕ್ಕೆ ಆಹ್ವಾನ ನೀಡುವಂತಿವೆ. ಕಡೂರು ತಿರುವಿನಲ್ಲಿ ಪ್ಲೈ ಓವರ್‌ ಪಕ್ಕದಲ್ಲಿ ಮೂರು ರಸ್ತೆಗಳು ಒಂದು ಕಡೆ ಕಡೂರು ಹೆದ್ದಾರಿ ತಲುಪಿದರೆ, ಇನ್ನೊಂದು ಶಿವಮೊಗ್ಗ ಕಡೆಗೆ, ಮತ್ತೊಂದು ತಂಗಲಿ ಕಡೆ ತೆರಳುವ ರಸ್ತೆಗಳಲ್ಲಿ ಪ್ರಯಾಣಿಸುವವರ ಸ್ಥಿತಿ ಅಯೋಮಯವಾಗಿದೆ. ಇಲ್ಲಿ ಆಗಾಗ್ಗೆ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ವಾಹನ ದಟ್ಟಣೆ ಹೆಚ್ಚಿದರೆ ಅಪಘಾತ, ಪ್ರಾಣಾಪಾಯ ಸಂಭವಿಸುವ ಸ್ಥಿತಿಯೂ ಇದೆ. ಅಜ್ಜಂಪುರ ರಸ್ತೆ ಕಡೆಯಿಂದ ಬೈಪಾಸ್‌ ಮೂಲಕ ಹೆದ್ದಾರಿಗೆ ಸಂಪರ್ಕ ಕಲ್ಪಿಸಿದ್ದು, ಬೀರೂರು ಕಡೆಯಿಂದ ಬರುವವರು ಅಥವಾ ಕಡೂರಿನಿಂದ ಶಿವಮೊಗ್ಗ ಕಡೆ ತೆರಳುವವರು ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತಕ್ಕೆ ತುತ್ತಾಗಬೇಕಾದ ಸ್ಥಿತಿ ಇದೆ ಎನ್ನುತ್ತಾರೆ ವಾಹನ ಸವಾರರು.

ADVERTISEMENT

ಮಳೆ ಹೆಚ್ಚಾಗುತ್ತಿರುವುದರಿಂದ ಬೀರೂರು ಪ್ರಥಮ ದರ್ಜೆ ಕಾಲೇಜು ಬಳಿ ಹೆದ್ದಾರಿ ಗುಂಡಿ ಬಿದ್ದಿದೆ. ಬೀರೂರು-ಅಜ್ಜಂಪುರ ರಸ್ತೆಯಲ್ಲಿ ಯುಜಿಡಿ ಮ್ಯಾನ್‌ಹೋಲ್‌ಗಳು ರಸ್ತೆಯ ಮಧ್ಯೆಯೇ ಇದ್ದು ರಸ್ತೆಯನ್ನೇ ಹದಗೆಡಿಸಿವೆ. ಆಳುಗುಂಡಿ ಇರುವ ಎಲ್ಲ ಕಡೆ ಗುಂಡಿ ಬಿದ್ದು ರಸ್ತೆ ಸಂಚಾರ ಅಪಾಯಕಾರಿ ಆಗುತ್ತಿದೆ.

ಕಡೂರು ಮತ್ತು ಬೀರೂರು ಪಟ್ಟಣದ ಮುಖ್ಯ ರಸ್ತೆಗಳನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ಈಚೆಗೆ ದುರಸ್ತಿ ಪಡಿಸಲಾಗಿದೆ. ಗ್ರಾಮೀಣ ರಸ್ತೆಗಳಿಗೂ ಕಾಯಕಲ್ಪ ಒದಗಿಸಿ ಕ್ಷೇತ್ರದಾದ್ಯಂತ ರಸ್ತೆ ಸಂಪರ್ಕ ಉತ್ತಮಗೊಳಿಸಲಾಗುತ್ತಿದೆ. ಹೆದ್ದಾರಿ ಅಥವಾ ಬೈಪಾಸ್‌ ಕಾಮಗಾರಿಗೆ ಸಂಬಂಧಿಸಿ ವಿಭಾಗಕ್ಕೆ ಪತ್ರ ವ್ಯವಹಾರ ನಡೆಸಲಾಗುವುದು. ಸರ್ವಿಸ್‌ ರಸ್ತೆಗಳಲ್ಲಿ ಸೂಕ್ತ ತಿರುವಿಗೆ ಬ್ಯಾರಿಕೇಡ್‌ ಅಳವಡಿಸುವಂತೆ ಸೂಚಿಸಲಾಗುವುದು ಎಂದು ಶಾಸಕ ಕೆ.ಎಸ್‌.ಆನಂದ್‌ ತಿಳಿಸಿದರು.

ಅವೈಜ್ಞಾನಿಕ ಸರ್ವೀಸ್‌ ರಸ್ತೆಗಳ ಬಳಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ರಸ್ತೆಗಳನ್ನು ಕೂಡಲೇ ದುರಸ್ತಿಪಡಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

 ಕಡೂರಿನಿಂದ ತರೀಕೆರೆ ಶಿವಮೊಗ್ಗಕ್ಕೆ ತೆರಳುವ ಅಂಡರ್‌ಪಾಸ್‌ ಬಳಿ ರಸ್ತೆ ಹದಗೆಟ್ಟಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.