
ಕಡೂರು: ತಾಲ್ಲೂಕಿನ ಖಂಡುಗದಹಳ್ಳಿ ಸೋಮೇಶ್ವರ ಸ್ವಾಮಿಯ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು.
ಸಂಪ್ರದಾಯದಂತೆ ಮಹಾಶಿವರಾತ್ರಿ ಹಬ್ಬದ ಮರುದಿನ ಇಲ್ಲಿ ರಥೋತ್ಸವ ನಡೆಯುತ್ತದೆ. ಬೆಳಿಗ್ಗೆ ದೇವಾಲಯದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ವಿಶೇಷ ಅಭಿಷೇಕ, ಪೂಜಾ ಕಾರ್ಯಕ್ರಮ ನಡೆದವು. ಬಳಿಕ ಸ್ವಾಮಿಯ ಉತ್ಸವಮೂರ್ತಿಯನ್ನು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿ ದೇವಸ್ಥಾನದ ಆವರಣದಲ್ಲಿ ಭಕ್ತರ ಜಯಘೋಷಗಳ ನಡುವೆ ರಥೋತ್ಸವ ನಡೆಸಲಾಯಿತು.
ಪೂಜಾರ್ ಶೇಖರ್ ಮತ್ತು ಸತೀಶ್ ತಂಡದವರಿಂದ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಬಿಂಗಯ್ಯ ಭೃಂಗಿಗಳ ವಂಶಸ್ಥರಿಂದ ವಿಶೇಷ ಪೂಜೆಗಳು ನಡೆದವು. ರಥೋತ್ಸವದಲ್ಲಿ ಭಾಗವಹಿಸಿದ್ದ ಸಾವಿರಾರು ಭಕ್ತರಿಗೆ ದೇವಾಲಯದ ವತಿಯಿಂದ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಾಲಯದ ಧರ್ಮದರ್ಶಿ ಕೆ.ಬಿ. ಸೋಮೇಶ್ ನೇತೃತ್ವ ವಹಿಸಿದ್ದರು.
ಖಂಡುಗದಹಳ್ಳಿ, ಕಡೂರು, ಯಳ್ಳಂಬಳಸೆ, ಯಳಗೊಂಡನಹಳ್ಳಿ ಸೇರಿದಂತೆ ಸುತ್ತಮುತ್ತಲ ಭಾಗದ ಭಕ್ತರು ಭಾಗವಹಿಸಿದ್ದರು. ರಥ ಎಳೆಯುತ್ತಿದ್ದಂತೆ ಆಕಾಶದಲ್ಲಿ ಮೂರು ಗರುಡಗಳು ದೇವಾಲಯ ಸುತ್ತು ಹಾಕುತ್ತಿದ್ದ ದೃಶ್ಯವನ್ನು ಕಂಡ ಭಕ್ತರು ಅಚ್ಚರಿಯಿಂದ ಗಮನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.