ಕಡೂರು: ರಾಜ್ಯ ಪುರಾತತ್ವ ಇಲಾಖೆಯ ಆಸಕ್ತಿಯ ಫಲವಾಗಿ ಹದುಗಿದ್ದ ತಾಲ್ಲೂಕಿನ ಕೆರೆಸಂತೆಯಲ್ಲಿ ಹೊಯ್ಸಳರ ಕಾಲದ ಲಕ್ಷ್ಮೀನರಸಿಂಹ ದೇಗುಲ ಹೊರಜಗತ್ತಿಗೆ ಕಾಣುವಂತಾಗಿದೆ.
ಕೆರೆಸಂತೆ ಐತಿಹಾಸಿಕವಾಗಿ ಮಹತ್ವದ ಸ್ಥಳ. ಇತಿಹಾಸದಲ್ಲಿ ವೈಭವದಿಂದ ಮೆರೆದ ಹೇಮಾವತಿ ಪಟ್ಟಣವೇ ಇಂದಿನ ಕೆರೆಸಂತೆ. ಇದರ ನಿರ್ಮಾತೃ ಹೊಯ್ಸಳ ವಿಷ್ಣುವರ್ಧನ. ಶೈವ ಮತ್ತು ವೈಷ್ಣವರ ಸೌಹಾರ್ದದ ತಾಣವಿದು. ಇಲ್ಲಿ ಹಲವಾರು ದೇಗುಲಗಳಿವೆ. ಇಲ್ಲಿರುವ ಗುಡ್ಡದ ಒಂದು ಪಾರ್ಶ್ವದಲ್ಲಿ ಹಲವಾರು ಕಂಬಗಳು, ಮುರಿದ ವಿಗ್ರಹಗಳು ಕಂಡುಬರುತ್ತಿದ್ದವು. ಮುಳ್ಳುಕಂಟಿಗಳಿಂದ ತುಂಬಿ ಹೋಗಿದ್ದ, ಅಲ್ಲದೆ, ಈ ಜಾಗದಲ್ಲಿ ಚಿರತೆಗಳೂ ಓಡಾಡುತ್ತಿದ್ದರಿಂದ ಅತ್ತ ಜನರು ಸುಳಿಯುತ್ತಿರಲಿಲ್ಲ.
ಕೆರೆಸಂತೆಯ ನವೀನ್ ಪುರೋಹಿತ್ ಆ ಪರಿಸರದಲ್ಲಿ ಓಡಾಡಿ, ದೊಡ್ಡ ಮಣ್ಣಿನ ದಿಬ್ಬವಿರುವುದನ್ನು ಕಂಡರು. ಮಣ್ಣಿನ ಗುಡ್ಡದಲ್ಲಿ ದೇಗುಲ ಮುಚ್ಚಿಹೋಗಿರುವ ಸಾಧ್ಯತೆವ್ಯಕ್ತಪಡಿಸಿ ಅವರು, ಸಾಮಾಜಿಕ ತಾಣಗಳಲ್ಲಿ ಈ ವಿಷಯ ಪ್ರಚುರಪಡಿಸಿದರು.
ಅಚ್ಚರಿಯೆಂಬಂತೆ ಕೆರೆಸಂತೆಯ ಲಕ್ಷ್ಮೀನರಸಿಂಹ ದೇಗುಲದ ಮೂಲ ವಿಗ್ರಹ ಕಡೂರಿನ ಕೋಟೆ ಚೆನ್ನಕೇಶವ ದೇಗುಲದಲ್ಲಿದೆ ಎಂದು ನಿವೃತ್ತ ತಹಶೀಲ್ದಾರ್ ಡಾ.ಲಕ್ಷ್ಮೀನಾರಾಯಣಪ್ಪ ಮಾಹಿತಿ ನೀಡಿದರು.
ಹೊಯ್ಸಳ ಶೈಲಿಯ ಈ ದೇಗುಲದ ಮುಂದೆ ಶಾಸನವೊಂದಿದೆ. ಈ ಶಾಸನದಲ್ಲಿ ರಾಮಾನುಜಾಚಾರ್ಯರು ಮತ್ತು ಲಕ್ಷ್ಮೀನರಸಿಂಹ ಚಿತ್ರಗಳಿದ್ದು, ಹಸು ಮತ್ತು ಹಾಲು ಕುಡಿಯುತ್ತಿರುವ ಕರುವಿನ ಚಿತ್ರಣ ಗಮನ ಸೆಳೆಯುತ್ತದೆ.
1223ರಲ್ಲಿ ಹೊಯ್ಸಳ ವೀರನರಸಿಂಹ ಹಿಮಗಿರಿಯ ಲಕ್ಷ್ಮೀನರಸಿಂಹನಿಗೆ ದಾನ ನೀಡಿದ ಉಲ್ಲೇಖವೂ ಇದೆ.
ಈ ದೇಗುಲದ ಮೂಲ ನರಸಿಂಹ ವಿಗ್ರಹ ಭಗ್ನಗೊಂಡು, ನಂತರ ಹೊಸ ವಿಗ್ರಹ ಇಟ್ಟಿರಬಹುದೆಂದು ಊಹಿಸಲಾಗಿದೆ. ವಿಗ್ರಹ ಎರಡು ಅಡಿ ಎತ್ತರವಾಗಿದೆ. ಪುರಾತತ್ವ ಇಲಾಖೆಯ ಕಾರ್ಯದಿಂದ ಮಣ್ಣಿನಡಿ ಮರೆಯಾಗಿದ್ದ ದೇಗುಲವೊಂದು ಮತ್ತೆ ಗತವೈಭವಕ್ಕೆ ಮರಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.