ADVERTISEMENT

ಕಡೂರಿಗೆ ಪ್ರಜ್ವಲ್ ಕೊಡುಗೆ ಶೂನ್ಯ: ಶಾಸಕ ಆನಂದ್

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 13:13 IST
Last Updated 6 ಏಪ್ರಿಲ್ 2024, 13:13 IST
ಕೆ.ಎಸ್.ಆನಂದ್
ಕೆ.ಎಸ್.ಆನಂದ್   

ಕಡೂರು: ಚಿಕ್ಕಮಗಳೂರು ಕ್ಷೇತ್ರದಿಂದ ಕಡೂರನ್ನು ತೆಗೆದು ಹಾಸನ ಲೋಕಸಭಾ ಕ್ಷೇತ್ರಕ್ಕೆ ಸೇರಿಸಿದ ನಂತರ ದೇವೇಗೌಡರು ಮತ್ತು ಪ್ರಜ್ವಲ್ ಸಂಸದರಾಗಿದ್ದಾರೆ. ಆದರೆ ಕಡೂರಿಗೆ ಅವರಿಬ್ಬರ ಕೊಡುಗೆ ಶೂನ್ಯ ಎಂದು ಶಾಸಕ ಕೆ.ಎಸ್.ಆನಂದ್ ದೂರಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಕಾಂಗ್ರೆಸ್ ಮೈತ್ರಿಯಿಂದ ಪ್ರಜ್ವಲ್ ಸಂಸದರಾದರು. ಆದರೆ ಅವರು ಕಾಂಗ್ರೆಸ್‌ಗೆ ಕೃತಜ್ಞತೆ ಸಲ್ಲಿಸಲಿಲ್ಲ. ಇದೇ ಪರಿಸ್ಥಿತಿ ಬಿಜೆಪಿಗೂ ಆಗಲಿದೆ. ಸಖ್ಯವಿಲ್ಲದೆ ಪ್ರಜ್ವಲ್ ಚುನಾವಣೆಗೆ ಸ್ಪರ್ಧಿಸಿದರೆ ಠೇವಣಿ ಕಳೆದುಕೊಳ್ಳುತ್ತಾರೆ ಎಂದರು.

ಐದು ವರ್ಷಗಳಲ್ಲಿ ಕ್ಷೇತ್ರಕ್ಕೆ ಐದು ಬಾರಿ ಮಾತ್ರ ಬಂದಿರುವ ಪ್ರಜ್ವಲ್ ಯಾವ ನೈತಿಕತೆ ಇರಿಸಿಕೊಂಡು ಮತಯಾಚನೆ ಮಾಡುತ್ತಾರೆ ಎಂದು ಪ್ರಶ್ನಿಸಿದ ಆನಂದ್‌, ಸ್ವತ: ಅಮಿತ್ ಶಾ ಅವರೇ ಪ್ರಜ್ವಲ್ ಅವರನ್ನು ಬದಲಿಸುವ ಇಂಗಿತ ವ್ಯಕ್ತಪಡಿಸಿದರೂ ರೇವಣ್ಣ ಹಠದಿಂದ ಬಿಜೆಪಿ ಮೈತ್ರಿಯೊಂದಿಗೆ ಪ್ರಜ್ವಲ್ ಕಣದಲ್ಲಿದ್ದಾರೆ. ಅವರಿಗೆ ಜನರೇ ಉತ್ತರಿಸಲಿದ್ದಾರೆ ಎಂದರು.

ADVERTISEMENT

ಪ್ರಬುದ್ಧ ರಾಜಕಾರಣಿ ವೈ.ಎಸ್.ವಿ ದತ್ತ ಈ ವಯಸ್ಸಿನಲ್ಲಿ ಬಿಜೆಪಿ ಶಾಲು ಹಾಕಿಸಿಕೊಳ್ಳುತ್ತಾರೆಂದು ಯಾರೂ ನಿರೀಕ್ಷಿಸಿರಲಿಲ್ಲ. ಕೋಮುವಾದಿ ಪಕ್ಷವನ್ನು ವಿರೋಧಿಸುತ್ತಿದ್ದ ಅವರು ಈಗ ತಾವೇ ಕೋಮುವಾದಿಯಾದರೇ ಎಂಬ ಪ್ರಶ್ನೆ ಎದುರಾಗಿದೆ. ಜಾತ್ಯತೀತ ನಿಲುವು ಹೊಂದಿದ್ದ ದೇವೇಗೌಡರು ಕುಟುಂಬದ ರಾಜಕೀಯ ಉಳಿವಿಗಾಗಿ ಬಿಜೆಪಿಗೆ ಜೆಡಿಎಸ್‌ ಅಡವಿಟ್ಟಿರುವುದು ಅವರ ನೈತಿಕ ಅಧಃಪತನಕ್ಕೆ ಸಾಕ್ಷಿ ಎಂದು ಆನಂದ್‌ ಹೇಳಿದರು.

ಶ್ರೇಯಸ್ ಮೇಲಿನ ಅಭಿಮಾನ ಮತ್ತು‌ ಪ್ರಜ್ವಲ್ ವಿರೋಧಿ ಅಲೆಯಿಂದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲುವು ನಿಶ್ಚಿತ. ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜನರನ್ನು ತಲುಪಿಲ್ಲ ಎನ್ನುವ ವಿರೋಧ ಪಕ್ಷದ ನಾಯಕ ಅಶೋಕ್ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ತಮ್ಮ ಕ್ಷೇತ್ರಗಳಲ್ಲೇ ಸಮೀಕ್ಷೆ ನಡೆಸಿ ವಾಸ್ತವಾಂಶ ಅರಿಯಲಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.