ಕಡೂರು: ಪುರಸಭೆಯ ಮಾಜಿ ಸದಸ್ಯ ಆರ್.ಎಂ.ಬಸವರಾಜು ಸಾವಿನ ಕುರಿತು ನಡೆದಿರುವ ತನಿಖೆಯು ತೃಪ್ತಿ ತಂದಿಲ್ಲ. ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸಬೇಕು ಎಂದು ಬಸವರಾಜು ಅವರ ಸಹೋದರ ಎಂ. ತ್ಯಾಗರಾಜ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ‘ಆರ್.ಎಂ.ಬಸವರಾಜು ಒಂದು ವರ್ಷದ ಹಿಂದೆ ನಿಗೂಢವಾಗಿ ಸಾವನ್ನಪ್ಪಿದ್ದು, ಪೊಲೀಸ್ ದೂರು ದಾಖಲಿಸಲಾಗಿತ್ತು. ಬಳಿಕ ತನಿಖೆ ನಡೆದಿದ್ದು, ಜೊತೆಯಲ್ಲೆ ಬಹಳಷ್ಟು ದಾಖಲೆಗಳು ಸಮರ್ಪಕ ಆಗಿಲ್ಲದಿರುವುದು ಕಂಡು ಬಂದಿದೆ. ಅವರ ಸಾವಿನ ಕಾರಣದ ವೈದ್ಯಕೀಯ ವರದಿ ಸ್ಪಷ್ಟವಾಗಿಲ್ಲ. ಐದು ದಿನಗಳ ನಂತರ ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಒಂದು ವರ್ಷದ ನಂತರ ವೈದ್ಯಕೀಯ ಪರೀಕ್ಷಾ ವರದಿ ನೀಡಲಾಗಿದೆ. ವ್ಯಕ್ತಿಯ ಸಾವಿನ ಬಗ್ಗೆ ವರದಿ ಬರಲು ಒಂದು ವರ್ಷ ಅವಧಿ ಬೇಕೆ? ಪೊಲೀಸರು ನಮ್ಮ ಕುಟುಂಬ ವರ್ಗದವರ ಹೇಳಿಕೆಗಳನ್ನು ಸರಿಯಾಗಿ ಪರಿಗಣಿಸಿಲ್ಲ. ಇದರ ಜೊತೆ ಬಸವರಾಜು ಅವರ ಸ್ವಂತ ಆಸ್ತಿ ವಿಚಾರದಲ್ಲಿ ಸಹ ಬಹಳಷ್ಟು ಗೊಂದಲಗಳು,ಸುಳ್ಳು ದಾಖಲೆಗಳು ಸೃಷ್ಟಿಯಾಗಿವೆ. ಬಹುಶಃ ಯಾರದೋ ಪ್ರಭಾವಕ್ಕೊಳಗಾಗಿ ತನಿಖೆ ದಿಕ್ಕುತಪ್ಪಿದೆ ಎಂಬ ಅನುಮಾನ ಉಂಟಾಗಿದೆ’ ಎಂದು ಅವರು ದೂರಿದರು.
ಈ ಕುರಿತು ಸಮಗ್ರ ತನಿಖೆ ನಡೆಸಲು ಗೃಹಸಚಿವರು, ಮುಖ್ಯಮಂತ್ರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಲಾಗಿದೆ. ದಯವಿಟ್ಟು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗಮನ ಹರಿಸಿ, ನ್ಯಾಯ ಕೊಡಿಸಬೇಕೆಂದು ಕೋರುತ್ತೇನೆ ಎಂದು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.