ಕಳಸ: ಸಂಜೀವಮೆಟ್ಟಲು ಸಮೀಪದ ಗೊಡ್ಲುಮನೆ ಪ್ರದೇಶದಲ್ಲಿ ಭಾನುವಾರ ರಾತ್ರಿ ಕಾಡಾನೆಗಳು ಕಾಫಿ, ಅಡಿಕೆ ತೋಟಕ್ಕೆ ನುಗ್ಗಿ ಹಾನಿಮಾಡಿವೆ.
ಕೃಷಿಕ ಗೋಪಾಲ ಗೌಡ, ಮಲ್ಲೇಗೌಡ ಅವರ ತೋಟ ಮತ್ತು ಆಸುಪಾಸಿನ ತೋಟಗಳಲ್ಲಿ ಆನೆಗಳು ರಾತ್ರಿಯಿಡೀ ಓಡಾಡಿವೆ. ಅಡಿಕೆ, ಬಾಳೆ ಗಿಡಗಳನ್ನು ಮುರಿದು ಹಾಕಿವೆ. ದಾರಿಯಲ್ಲಿ ಅಡ್ಡಲಾಗಿ ಸಿಕ್ಕ ಬೇಲಿಯನ್ನೂ ಪುಡಿ ಮಾಡಿವೆ. 2 ದಿನಗಳಿಂದ ದುಗ್ಗಪ್ಪನಕಟ್ಟೆ ಪ್ರದೇಶದ ಅಕೇಶಿಯಾ ಪ್ಲಾಂಟೇಶನ್ ಒಳಗೆ ಆಶ್ರಯ ಪಡೆದಿದ್ದ ಆನೆಗಳು ಭಾನುವಾರ ರಾತ್ರಿ ತೋಟಗಳಿಗೆ ನುಗ್ಗಿ ನಷ್ಟ ಉಂಟು ಮಾಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
‘ಮಳೆಯಿಂದಾಗಿ ಈಗಾಗಲೇ ತೋಟದಲ್ಲಿ ಬಹಳಷ್ಟು ಹಾನಿ ಆಗಿದೆ. ಈಗ ಆನೆ ದಾಳಿಯಿಂದ ಮತ್ತಷ್ಟು ನಷ್ಟ ಆಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಓಡಿಸುವ ಕೆಲಸ ತುರ್ತಾಗಿ ಮಾಡಬೇಕಿದೆ’ ಎಂದು ಗೊಡ್ಲುಮನೆ ಮಹೇಂದ್ರ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚೇತನ್ ಗಸ್ತಿ, ‘ನಮ್ಮ ಸಿಬ್ಬಂದಿ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆನೆಗಳನ್ನು ಓಡಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.