
ಕಳಸ: ಕಳಸ-ಕುದುರೆಮುಖ-ಎಸ್.ಕೆ.ಬಾರ್ಡರ್ ರಾಜ್ಯ ಹೆದ್ದಾರಿಯು ಜಿಲ್ಲೆಯ ಅತ್ಯಂತ ಹದಗೆಟ್ಟ ರಸ್ತೆ ಎಂದೇ ಹೆಸರು ಪಡೆದಿದ್ದು, ಈ ರಸ್ತೆಯ ಕಾಮಗಾರಿ ನನೆಗುದಿಗೆ ಬಿದ್ದಿರುವುದನ್ನು ಖಂಡಿಸಿ ಸದ್ಯದಲ್ಲೇ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ರವಿ ರೈ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಸಾರ್ವಜನಿಕರು ನಡೆಸಿದ ಹೋರಾಟದ ಫಲವಾಗಿ ಈ ರಸ್ತೆ ಮರುಡಾಂಬರೀಕರಣಕ್ಕೆ ₹13 ಕೋಟಿ ಬಿಡುಗಡೆ ಆಗಿದೆ. ಕಳೆದ ವರ್ಷವೇ ಆರಂಭವಾಗಿ ಈ ವೇಳೆಗೆ ಕಾಮಗಾರಿ ಮುಗಿಯಬೇಕಿತ್ತು. ಆದರೆ ಈವರೆಗೂ ರಸ್ತೆಗೆ ಡಾಂಬರೀಕರಣ ಮಾಡುವ ಕೆಲಸ ನಡೆಯುತ್ತಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಸದ್ಯದಲ್ಲೇ ಬೇಸಿಗೆ ಮಳೆ ಆರಂಭವಾಗುತ್ತದೆ. ಆನಂತರ ಮಾಡುವ ಡಾಂಬರೀಕರಣದ ಕಾಮಗಾರಿ ಗುಣಮಟ್ಟ ಕಳೆದುಕೊಳ್ಳುತ್ತದೆ. ಈಗಿನ ಸೂಕ್ತ ಹವಾಮಾನದಲ್ಲಿ ಡಾಂಬರೀಕರಣ ನಡೆಸುವ ಬಗ್ಗೆ ಲೋಕೋಪಯೋಗಿ ಇಲಾಖೆ ಯಾಕೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಕುದುರೆಮುಖ-ಎಸ್.ಕೆ.ಬಾರ್ಡರ್ ಹದಗೆಟ್ಟ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ಕಳಸದಿಂದ ಮಂಗಳೂರಿಗೆ ರೋಗಿಗಳನ್ನು ಕರೆದೊಯ್ಯುವುದು ಯಾತನಾಮಯ ಆಗಿದೆ. ಕರಾವಳಿಯಿಂದ ಮಲೆನಾಡಿಗೆ ಪ್ರವಾಸಿಗರು ಬರುವುದನ್ನೇ ನಿಲ್ಲಿಸಿದ್ದಾರೆ. ಮನೆ ನಿರ್ಮಾಣದ ವಸ್ತುಗಳನ್ನು ಕಳಸಕ್ಕೆ ತರುವುದು ದುಬಾರಿ ಆಗುತ್ತಿದೆ. ಈ ಎಲ್ಲ ಅಂಶಗಳನ್ನು ಮರೆಮಾಚಿ ಗುತ್ತಿಗೆದಾರರ ಹಿತಾಸಕ್ತಿಯನ್ನು ಅಧಿಕಾರಿಗಳು ಕಾಯುತ್ತಿದ್ದಾರೆ. ಈ ವಾರದ ಒಳಗೆ ಡಾಂಬರೀಕರಣ ಶುರು ಆಗದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದೂ ರವಿ ರೈ ಎಚ್ಚರಿಸಿದ್ದಾರೆ.
ಕರಾವಳಿಯ ಕಾಲೇಜುಗಳು, ಆಸ್ಪತ್ರೆಗಳಿಗೆ ಅನಿವಾರ್ಯವಾಗಿ ಹೋಗಬೇಕಾದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಕಾಮಗಾರಿ ನಡೆಸಿ ಈ ರಸ್ತೆ ಬಳಕೆದಾರರ ಸಂಕಟ ನಿವಾರಿಸಬೇಕು ಎಂದು ನೆಲ್ಲಿಬೀಡಿನ ತೇಜಸ್ ಒತ್ತಾಯಿಸಿದರು.
‘ಮಾರ್ಚ್ 24ರ ಒಳಗೆ ಈ ರಸ್ತೆ ಕಾಮಗಾರಿ ಮುಗಿಸಬೇಕಿದೆ. ಗುತ್ತಿಗೆದಾರ ಜಲ್ಲಿ, ಮರಳು ಸಂಗ್ರಹ ಮಾಡಿದ್ದಾರೆ. ಆದರೆ ಡಾಂಬರು ತರಲು ಆರ್ಥಿಕ ತೊಂದರೆ ಇದೆ ಎಂಬ ನೆಪ ಹೇಳುತ್ತಿದ್ದಾರೆ. ನಿಗದಿತ ದಿನದ ಒಳಗೆ ಕಾಮಗಾರಿ ಮುಗಿಸಲು ಸೂಚನೆ ನೀಡಿದ್ದೇವೆ’ ಎಂದು ಲೋಕೋಪಯೋಗಿ ಇಲಾಖೆ ಕಿರಿಯ ಎಂಜಿನಿಯರ್ ಚೆನ್ನಯ್ಯ 'ಪ್ರಜಾವಾಣಿ'ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.