ADVERTISEMENT

ಕಳಸದಲ್ಲಿ ಕಳಸೇಶ್ವರ ರಥೋತ್ಸವದ ಸಡಗರ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 7:24 IST
Last Updated 31 ಜನವರಿ 2026, 7:24 IST
   

ಕಳಸ: ತಾಲ್ಲೂಕಿನ ಆರಾಧ್ಯ ದೈವ ಕಳಸೇಶ್ವರನ ರಥೋತ್ಸವ ಶುಕ್ರವಾರ ಭಕ್ತರ ಸಡಗರದ ನಡುವೆ ನೆರವೇರಿತು.

ಕಳೆದ ಶನಿವಾರ ಗಣಪತಿ ಪೂಜೆ ಮತ್ತು ಅಂಕುರಾರ್ಪಣೆಯೊಂದಿಗೆ ರಥೋತ್ಸವದ ವಿಧಿಗಳು ಆರಂಭಗೊಂಡಿದ್ದವು. ಜಾತ್ರೆಗೆ ಪೂರ್ವಭಾವಿಯಾಗಿ ಧ್ವಜಾರೋಹಣ, ರಕ್ಷೋಘ್ನ ಹೋಮ, ವೃಷಭಾರೋಹಣ, ಕೌತುಕೋತ್ಸವ, ಸಿಂಹಾರೋಹಣ, ಮಯೂರಾರೋಹಣ ಮುಂತಾದ ವಿಧಿಗಳು ದೇಗುಲದಲ್ಲಿ ವಿಧಿವತ್ತಾಗಿ ನಡೆದಿದ್ದವು. ಗಣಪತಿ ಹೋಮ, ಪಂಚಬ್ರಹ್ಮ ಹೋಮ, ಹಂಸಾರೋಹಣ, ಶಿಖರ ಪ್ರತಿಷ್ಠೆ, ಅಧಿವಾಸ ಹೋಮ ಮತ್ತು ಗಜಾರೋಹಣದಲ್ಲಿ ಜನರು ಉತ್ಸಾಹದಿಂದ ಭಾಗವಹಿಸಿದ್ದರು.

ಕಳಸ ಆಸುಪಾಸಿನ ಗ್ರಾಮಗಳಿಂದ ಭಕ್ತರು ತಾವು ಬೆಳೆದ ಧಾನ್ಯ, ತರಕಾರಿಯನ್ನು ತಲೆಯ ಮೇಲೆ ಹೊತ್ತು ತಂದು ಕಳಸೇಶ್ವರನಿಗೆ ಅರ್ಪಿಸಿ ಕೃತಾರ್ಥತೆ ತೋರಿದರು.
ರಥೋತ್ಸವದ ಪ್ರಯುಕ್ತ ದೇಗುಲದ ಪರಿಸರದಲ್ಲಿ ಕಣ್ಣು ಕೋರೈಸುವ ವಿದ್ಯುದೀಪಗಳ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ, ದೇವರ ಉತ್ಸವ ಮೂರ್ತಿಯನ್ನು ದೇಗುಲದ ಸುತ್ತಲೂ ಪ್ರದಕ್ಷಿಣಿ ನಡೆಸಲಾಯಿತು. ಆನಂತರ ಶುಭ ಮುಹೂರ್ತದಲ್ಲಿ ರಥಾರೋಹಣ ನಡೆದಾಗ ಭಕ್ತರು ತಾವು ಬೆಳೆದ ಅಡಿಕೆ, ಕಾಫಿ, ಏಲಕ್ಕಿ, ಮೆಣಸನ್ನು ರಥದ ಕಡೆಗೆ ತೂರಿದರು. ತೋರಣ ಪತಾಕೆ, ಧ್ವಜಗಳ ಮುಮ್ಮೇಳ ಮತ್ತು ವಾದ್ಯದ ಹಿಮ್ಮೇಳದ ನಡುವೆ ಭಕ್ತರು ರಥವನ್ನು ಸಡಗರದಿಂದ ಎಳೆದರು.

ADVERTISEMENT

ಊರಿನ ಒಡೆಯನ ರಥೋತ್ಸವಕ್ಕೆ ದೂರದ ಊರುಗಳಲ್ಲಿ ನೆಲೆಸಿದ್ದವರು ಕೂಡ ಬಂದಿದ್ದರು. ರಾಜ್ಯ ಹೆದ್ದಾರಿಯೂ ಆಗಿರುವ ರಥಬೀದಿಯಲ್ಲಿ ಜನಸಂದಣಿಯ ನಿಯಂತ್ರಣ ಪೊಲೀಸರಿಗೆ ಸವಾಲು ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.