ADVERTISEMENT

ಹೋಬಳಿ ಮಟ್ಟದಲ್ಲಿ ಕನ್ನಡ ಸಮ್ಮೇಳನ

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 4:48 IST
Last Updated 6 ಡಿಸೆಂಬರ್ 2021, 4:48 IST
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಸೂರಿ ಶ್ರೀನಿವಾಸ್ ಅವರನ್ನು ಕೊಪ್ಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರು ಭಾನುವಾರ ಸನ್ಮಾನಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಸೂರಿ ಶ್ರೀನಿವಾಸ್ ಅವರನ್ನು ಕೊಪ್ಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರು ಭಾನುವಾರ ಸನ್ಮಾನಿಸಿದರು.   

ಕೊಪ್ಪ: ‘ಕನ್ನಡ ಕಟ್ಟುವ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲೂ ಘಟಕಗಳನ್ನು ರಚಿಸಲಾಗುವುದು. ಹೋಬಳಿ ಮಟ್ಟದಲ್ಲಿ ಸಮ್ಮೇಳನ ಆಯೋಜಿಸಲಾಗುವುದು’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.

ಬಾಳಗಡಿಯಲ್ಲಿರುವ ಕನ್ನಡ ಭವನದಲ್ಲಿ ಭಾನುವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಆಯ್ಕೆಗಾಗಿ ಹೆಸರು ಸೂಚಿಸುವ ಸಲುವಾಗಿ ಕರೆಯಲಾಗಿದ್ದ ಆಜೀವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜಿಸಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

‘ತಾಲ್ಲೂಕಿನಲ್ಲಿ ಹೆಚ್ಚು ದತ್ತಿ ನಿಧಿ ಸಂಗ್ರಹಿಸಿ, ಉಪನ್ಯಾಸಗಳನ್ನು ಏರ್ಪಡಿಸಬೇಕಿದೆ. ಜಿಲ್ಲೆಯಲ್ಲಿ ಈ ಹಿಂದೆ ದತ್ತಿನಿಧಿ ಸಂಗ್ರಹ ಕಡಿಮೆಯಾಗಿತ್ತು. ನಾನು ಅಧ್ಯಕ್ಷನಾದ ಬಳಿಕ ಜಿಲ್ಲೆಯಲ್ಲಿ ದತ್ತಿನಿಧಿ ಸಂಗ್ರಹ ಹೆಚ್ಚಿಸಲಾಗಿದೆ. ಎಂದು ತಿಳಿಸಿದರು.

ADVERTISEMENT

‘ಕನ್ನಡ ಸೇವೆ ಮಾಡುವವರನ್ನು ಆಯ್ಕೆ ಮಾಡಲಾಗುವುದು. ತಾಲ್ಲೂಕು ಸಾಹಿತ್ಯ ಪರಿಷತ್ ಘಟಕದಲ್ಲಿ ಅಧ್ಯಕ್ಷರಾಗಿ ಕನ್ನಡ ಸೇವೆ ಸಲ್ಲಿಸಲು ಆಸಕ್ತಿ ಇರುವವರು, ಕನ್ನಡ ರಥವನ್ನು ಎಳೆಯಲು ಬದ್ಧರಾಗಿರುವವರು ತಮ್ಮ ಹೆಸರನ್ನು ತಿಳಿಸಬೇಕು. ಬೇರೆಯವರ ಹೆಸರನ್ನು ಸೂಚಿಸುವಂತಿಲ್ಲ. ನಂತರ ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ಅವಕಾಶ ನೀಡಿದರು.

ಸದಸ್ಯೆ ಎಸ್.ಎನ್.ಚಂದ್ರಕಲಾ ಅವರು, ‘ಈವರೆಗೆ ತಾಲ್ಲೂಕಿನಲ್ಲಿ ಮಹಿಳೆಗೆ ಅವಕಾಶ ನೀಡಿಲ್ಲವಾದ್ದರಿಂದ ನನಗೆ ಅವಕಾಶ ನೀಡಿ’ ಎಂದರು. ಚಾವಲ್ಮನೆ ಸುರೇಶ್ ನಾಯ್ಕ್ ಅವರು, ‘ಕನ್ನಡ ಸೇವೆಯಲ್ಲಿ ನಾನು ತೊಡಗಿಸಿಕೊಂಡಿದ್ದೇನೆ, ನನಗೆ ಅವಕಾಶ ನೀಡಿ’ ಎಂದು ತಮ್ಮ ಆಸಕ್ತಿ ತಿಳಿಸಿದರು.

ಸದಸ್ಯ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ‘ಬೇರೆಯವರ ಹೆಸರು ಸೂಚಿಸಲು ಅವಕಾಶ ನೀಡಬೇಕು. ಇತರೆ ಸಮುದಾಯದವರಿಗೂ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

ಬಳಿಕ ಸದಸ್ಯರಾದ ಜಿನೇಶ್ ಇರ್ವತ್ತೂರು, ಹರೀಶ್ ಭಂಡಾರಿ ಅವರು, ‘ಕಳೆದ ಅರ್ಧ ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಎಚ್.ಎಸ್.ಇನೇಶ್ ಅವರಿಗೆ ಮತ್ತೊಮ್ಮೆ ಅವಕಾಶ ನೀಡಬೇಕು’ ಎಂದು ಸೂಚಿಸಿದರು.

ಸದಸ್ಯ ಎಂ.ಆರ್.ರಮೇಶ್ ಅವರ ಹೆಸರನ್ನು ವಿವೇಕಾನಂದ ಸೂಚಿಸಿದರು. ಆದರೆ, ರಮೇಶ್ ಅವರು ನಿರಾಕರಿಸಿದರು.

ಗುಡ್ಡೇತೋಟ ನಟರಾಜ್ ಅವರು ಚಂದ್ರಕಲಾ ಅವರ ಹೆಸರನ್ನು ಸೂಚಿಸಿದರು.

ಸದಸ್ಯರಾದ ಎಚ್.ಎಸ್.ಇನೇಶ್, ಎಚ್.ಎಂ.ರವಿಕಾಂತ್, ಎಸ್.ಎನ್.ರಾಮಸ್ವಾಮಿ, ಜಗದೀಶ್, ಕೋಡ್ರು ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.