ADVERTISEMENT

ಕೊಪ್ಪ| ಕನ್ನಡ ಸಾಹಿತ್ಯ ಸಮ್ಮೇಳನ: ಆಹ್ವಾನ ಪತ್ರಿಕೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 5:59 IST
Last Updated 13 ಜನವರಿ 2026, 5:59 IST
ಕೊಪ್ಪ ತಾಲ್ಲೂಕು ಕೊಗ್ರೆಯಲ್ಲಿ ನಡೆಯಲಿರುವ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು
ಕೊಪ್ಪ ತಾಲ್ಲೂಕು ಕೊಗ್ರೆಯಲ್ಲಿ ನಡೆಯಲಿರುವ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು   

ಕೊಪ್ಪ: ತಾಲ್ಲೂಕಿನ ಗುಡ್ಡೆತೋಟ ಗ್ರಾಮ ಪಂಚಾಯಿತಿ ವ್ಯಾಪ್ತಿ ಕೊಗ್ರೆಯ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಜ.17ರಿಂದ ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸಮ್ಮೇಳನದ ಆಹ್ವಾನ ಪತ್ರಿಕೆ ಸೋಮವಾರ ಬಿಡುಗಡೆ ಮಾಡಲಾಯಿತು.

ಈ ವೇಳೆ ಮಾತನಾಡಿದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಎಂ.ಶ್ರೀಹರ್ಷ, 'ಹಿರಿಯ ಜಾನಪದ ಕಲಾವಿದ, ಹರಿಕಥಾ ಕೀರ್ತನಕಾರ ಜೆ.ಸಿ.ಸುಬ್ಬರಾವ್ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ. ಹಲವು ಗೋಷ್ಠಿ, ವಿವಿಧ ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ' ಎಂದರು.

17ರಂದು ಮಧ್ಯಾಹ್ನ 3 ಗಂಟೆಗೆ ತಹಶೀಲ್ದಾರ್ ಲಿಖಿತಾ ಮೋಹನ್ ರಾಷ್ಟ್ರ ಧ್ವಜರೋಹಣ, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಪರಿಷತ್ ಧ್ವಜಾರೋಹಣ ನೆರವೇರಿಸುವರು. ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸುವರು. ಉದ್ಘಾಟನಾ ಸಮಾರಂಭದಲ್ಲಿ ಗುಣನಾಥ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ನಟ ದೊಡ್ಡಣ್ಣ ಸಮ್ಮೇಳನ ಉದ್ಘಾಟಿಸುವರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ವಸ್ತು ಪ್ರದರ್ಶನ ಉದ್ಘಾಟಿಸುವರು. ಸಂಜೆ 7 ಗಂಟೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ವೈಭವ ಹಾಗೂ ಜಗದೀಶ್ ಕಣದಮನೆ ತಂಡದಿಂದ ಸಿ.ಅಶ್ವತ್ ನೆನಪು ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯಲಿದೆ' ಎಂದು ವಿವರಿಸಿದರು.

ADVERTISEMENT

18ರಂದು ಬೆಳಿಗ್ಗೆ 9 ಗಂಟೆಗೆ ಜಾನಪದ ಜಗತ್ತು ಹಾಗೂ ಮಹಿಳಾ ಗೋಷ್ಠಿ ನಡೆಯಲಿದೆ. ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಜಾನಪದ ಎಸ್.ಬಾಲಾಜಿ ಭಾಗವಹಿಸುವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಶ್ಯಾಮಲಾ ಅಧ್ಯಕ್ಷತೆ ವಹಿಸುವರು. ಎಸ್.ಎಸ್.ವೆಂಕಟೇಶ್ ಉಪನ್ಯಾಸ ನೀಡುವರು. 10.30ಕ್ಕೆ ಮಲೆನಾಡಿನ ಬದುಕು ಬವಣೆ ಕುರಿತು ನೆಂಪೆ ದೇವರಾಜ್ ಹಾಗೂ ಶಿವಾನಂದ ಕಳವೆ ಉಪನ್ಯಾಸ ನೀಡುವರು. ರೈತ ಹೋರಾಟಗಾರ ಕೆ.ಟಿ. ಗಂಗಾಧರ್ ಅಧ್ಯಕ್ಷತೆ ವಹಿಸುವರು ಎಂದರು.

12.30ಕ್ಕೆ ಕನ್ನಡ ನುಡಿ ಸಂಭ್ರಮ ಗೋಷ್ಠಿಯಲ್ಲಿ ಕೃಷಿ ಲೇಖಕ ನರೇಂದ್ರ ರೈ ದೇರ್ಲ, ವಕೀಲ ಸುಧೀರ್ ಕುಮಾರ್ ಮುರೊಳ್ಳಿ ಉಪನ್ಯಾಸ ನೀಡುವರು. ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ಬಿ.ಎಂ.ಪುಟ್ಟಯ್ಯ ಅಧ್ಯಕ್ಷತೆ ವಹಿಸುವರು. ಬಳಿಕ ಬಹಿರಂಗ ಅಧಿವೇಶನದಲ್ಲಿ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಸಂಜೆ 4 ಗಂಟೆಗೆ ಸಮಾರೋಪ ನಡೆಲಿದೆ. ನಟ ಮಂಡ್ಯ ರಮೇಶ್ ನೇತೃತ್ವದಲ್ಲಿ 'ಸ್ಥಾವರವೂ ಜಂಗಮ' ನಾಟಕ ಪ್ರದರ್ಶನಗೊಳ್ಳಲಿದೆ. ಒಟ್ಟು ಎಂಟು ಕೃತಿಗಳು ಬಿಡುಗಡೆಗೊಳ್ಳಲಿದೆ' ಎಂದರು.

ಕಸಾಪ ಪೂರ್ವಧ್ಯಕ್ಷರಾದ ಗುಡ್ಡೆತೋಟ ನಟರಾಜ್, ಎಸ್.ಎನ್.ಚಂದ್ರಕಲಾ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಆರ್.ನಾರಾಯಣ್ ಮಾತನಾಡಿದರು. ಸಮ್ಮೇಳನದ ಸಂಪನ್ಮೂಲ ಸಮಿತಿ ಅಧ್ಯಕ್ಷ ಕೆ.ಎಸ್.ರವೀಂದ್ರ ಕುಕ್ಕುಡಿಗೆ, ಪ್ರಮುಖರಾದ ಕೀರ್ತಿರಾಜ್, ರಾಜೇಶ್, ಎಂ.ಆರ್.ರಮೇಶ್, ನಾಗರಾಜ್ ಪವಾರ್, ಶಿಕ್ಷಕ ಸುಕೇಶ್, ಮಾಜಿ ಸೈನಿಕ ಶುಕುರ್ ಅಹಮ್ಮದ್, ಎಂ.ಟಿ.ಶಂಕರಪ್ಪ, ಜಿನೇಶ್ ಇರ್ವತ್ತೂರ್, ಸುಮಾ, ಜಾಸ್ಮಿನ್ ದಯಾಕರ್, ಪ್ರಚಾರ ಸಮಿತಿಯ ಸತೀಶ್ ಜೈನ್ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.