ADVERTISEMENT

ಕೆಂಪೇಗೌಡ: ಕಡೂರು, ಬೀರೂರಿನಲ್ಲಿ ಮೃತ್ತಿಕೆ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 7:36 IST
Last Updated 7 ನವೆಂಬರ್ 2022, 7:36 IST
ಬೀರೂರಿನ ಪುರಸಭೆ ಮುಂಭಾಗದಲ್ಲಿ ಭಾನುವಾರ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಸಲುವಾಗಿ ಮೃತ್ತಿಕೆ ಸಂಗ್ರಹ ವಾಹನಕ್ಕೆ ಸದಸ್ಯರು ಮತ್ತು ಅಧಿಕಾರಿ ವರ್ಗದವರು ಹಾಗೂ ನಾಗರಿಕರು ಗೌರವಪೂರ್ವಕ ಸ್ವಾಗತ ನೀಡಿದರು
ಬೀರೂರಿನ ಪುರಸಭೆ ಮುಂಭಾಗದಲ್ಲಿ ಭಾನುವಾರ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಸಲುವಾಗಿ ಮೃತ್ತಿಕೆ ಸಂಗ್ರಹ ವಾಹನಕ್ಕೆ ಸದಸ್ಯರು ಮತ್ತು ಅಧಿಕಾರಿ ವರ್ಗದವರು ಹಾಗೂ ನಾಗರಿಕರು ಗೌರವಪೂರ್ವಕ ಸ್ವಾಗತ ನೀಡಿದರು   

ಬೀರೂರು: ಬೆಂಗಳೂರಿನಲ್ಲಿ ನ.11ರಂದು ಅನಾವರಣಗೊಳಿಸಲಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯ ಸಲುವಾಗಿ ನಡೆಯುತ್ತಿರುವ ಮೃತ್ತಿಕೆ ಸಂಗ್ರಹದ ಅಭಿಯಾನ ರಥಕ್ಕೆ ಭಾನುವಾರ ಬೀರೂರು ಪಟ್ಟಣದ ಪುರಸಭೆ ಮುಂಭಾಗ ಪೂಜೆ ಸಲ್ಲಿಸಲಾಯಿತು.

ಮಹಾತ್ಮ ಗಾಂಧಿ ವೃತ್ತಕ್ಕೆ ಮಧ್ಯಾಹ್ನ ಬಂದ ರಥವನ್ನು ಪುರಸಭೆ ಸದಸ್ಯರು ಮತ್ತು ಅಧಿಕಾರಿ ವರ್ಗ ಹಾಗೂ ಪೂರ್ಣಕುಂಭ ಹೊತ್ತ ಮಹಿಳೆಯರು ಪುಷ್ಪಾರ್ಚನೆ ಮೂಲಕ ಸ್ವಾಗತಿಸಿದರು. ವೀರಗಾಸೆ ತಂಡದೊಂದಿಗೆ ಮೆರವಣಿಗೆ ಮೂಲಕ ಪುರಸಭೆ ಮುಂಭಾಗಕ್ಕೆ ಕರೆತಂದರು. ಕಚೇರಿ ಮುಂಭಾಗದಲ್ಲಿ ಹೂವಿನಹಾರ ಸಮರ್ಪಿಸಿ ಪೂಜೆ ಸಲ್ಲಿಸಿ ಫಲ ತಾಂಬೂಲದೊಂದಿಗೆ ಮೃತ್ತಿಕೆಯನ್ನು ವಾಹನ ಸಿಬ್ಬಂದಿಗೆ ಹಸ್ತಾಂತರಿಸಲಾಯಿತು. ಲಿಂಗದಹಳ್ಳಿ ರಸ್ತೆ ಮೂಲಕ ಹೊಗರೇಹಳ್ಳಿಗೆ ಬೀಳ್ಕೊಡಲಾಯಿತು.

ಸ್ಥಾಯಿಸಮಿತಿ ಅಧ್ಯಕ್ಷ ಬಿ.ಆರ್.ಮೋಹನ್ ಕುಮಾರ್, ಸದಸ್ಯರಾದ ಲಕ್ಷ್ಮಣ್, ಎಸ್.ಎನ್.ರಾಜು, ಮುಖ್ಯಾಧಿಕಾರಿ ಎನ್.ಮಂಜಪ್ಪ, ಕಂದಾಯ ಅಧಿಕಾರಿ ಯೋಗೀಶ್, ಆರೋಗ್ಯ ನಿರೀಕ್ಷಕ ಲಕ್ಷ್ಮಣ್, ಮುಬಾರಕ್, ಇಮ್ರಾನ್, ಧರ್ಮಸ್ಥಳ ಸಂಘದ ವಸಂತಮ್ಮ ಮತ್ತು ಮಹಿಳಾ ಸಂಘದ ಸದಸ್ಯೆಯರು, ನಾಗರಿಕರು ಇದ್ದರು.

ADVERTISEMENT

ಅದ್ಧೂರಿ ಸ್ವಾಗತ

ಕಡೂರು: ಕಡೂರಿಗೆ ಆಗಮಿಸಿದ ಮೃತ್ತಿಕಾ ಸಂಗ್ರಹ ರಥವನ್ನು ತಾಲ್ಲೂಕು ಆಡಳಿತದ ವತಿಯಿಂದ ಸ್ವಾಗತಿಸಲಾಯಿತು.

ಶಾಸಕ ಬೆಳ್ಳಿಪ್ರಕಾಶ್ ಮಾತನಾಡಿ, ನಾಡಿನ ಹೆಮ್ಮೆಯ ಸಂಕೇತವೇ ಆಗಿರುವ ಕೆಂಪೇಗೌಡರ ತತ್ವಾದರ್ಶಗಳನ್ನು ಮುಂದಿನ ಪೀಳಿಗೆಗೂ ತಿಳಿಸುವ ಉದ್ದೇಶದಿಂದ ಸರ್ಕಾರ ಕೆಂಪೇಗೌಡರ ಬೃಹತ್ತಾದ ಪ್ರತಿಮೆ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಅದಕ್ಕೆ ಪೂರಕವಾಗಿ ನಾಡಿನ ಉದ್ದಗಲಕ್ಕೂ ಮೃತ್ತಿಕಾರಥ ಸಂಚಾರದ ಪವಿತ್ರ ಕಾರ್ಯ ನಡೆದಿದೆ.ಕಡೂರಿನ ಜನತೆಯ ಪರವಾಗಿ ಮೃತ್ತಿಕಾ ರಥವನ್ನು ಸ್ವಾಗತಿಸಲಾಗಿದೆ ಎಂದರು.

ಪಟ್ಟಣಕ್ಕೆ ಬಂದ ರಥವನ್ನು ತಾಲ್ಲೂಕು ಕಚೇರಿ ಬಳಿ ಪೂರ್ಣಕುಂಭ ಸ್ವಾಗತ ಕೋರಲಾಯಿತು.

ನಂತರ ಜಾನಪದ ಕಲಾತಂಡದೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು.

ತಹಶೀಲ್ದಾರ್ ಜೆ.ಉಮೇಶ್, ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಮುಖ್ಯಾಧಿಕಾರಿ ಕೆ.ರುದ್ರೇಶ್, ಸಿಡಿಪಿಒ ಪ್ರೇಮ್‌ಕುಮಾರ್, ಕಲ್ಮರಡಪ್ಪ, ಸಮಾಜ ಕಲ್ಯಾಣಾಧಿಕಾರಿ ಎಚ್.ಡಿ. ರೇವಣ್ಣ, ಮಾರ್ಗದ ಮಧು, ಹೊ.ರಾ. ಕೃಷ್ಣಕುಮಾರ್, ಪ್ರಸನ್ನ, ಜಿಗಣೇಹಳ್ಳಿ ನೀಲಕಂಠಪ್ಪ, ರಾಜ್‌ಕುಮಾರ್, ಗೋಪಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.