ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ಎಂಎಸ್ಡಿಎಂ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವಿವಾಹಿತೆಗೆ ಜನಿಸಿದ್ದ ಶಿಶುವನ್ನು ಶೃಂಗೇರಿಯ ಮಹಿಳೆಯೊಬ್ಬರಿಗೆ ಮಾರಿದ ಆರೋಪದಡಿ ಪ್ರಸೂತಿ ತಜ್ಞ ಡಾ.ಜಿ.ಎಸ್.ಬಾಲಕೃಷ್ಣ ಸಹಿತ ನಾಲ್ವರ ವಿರುದ್ಧ ದೂರು ದಾಖಲಾಗಿದೆ.
ವೈದ್ಯ ಬಾಲಕೃಷ್ಣ, ಶುಶ್ರೂಷಕಿಯರಾದ ಶೋಭಾ, ರೇಷ್ಮಾ, ಶೃಂಗೇರಿಯ ಆಶ್ರಯ ಕಾಲೊನಿಯ ಪ್ರೇಮಲತಾ ವಿರುದ್ಧ ಕೊಪ್ಪ ತಾಲ್ಲೂಕು ವೈದ್ಯಾಧಿಕಾರಿ ಡಾ.ಗಾನವಿ ಅವರು ಕೊಪ್ಪ ಠಾಣೆಯಲ್ಲಿ ಸೋಮವಾರ ದೂರು ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಗ್ರಾಮವೊಂದರ ಅವಿವಾಹಿತ ಗರ್ಭಿಣಿಯೊಬ್ಬರು ಕೊಪ್ಪದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಮಾರ್ಚ್ 14ರಂದು ಹೆರಿಗೆಯಾಗಿತ್ತು.
‘ಮಗುವನ್ನು ಸಾಕಲು ನಿಮಗೆ ಸಾಧ್ಯ ಇಲ್ಲ. ಅದನ್ನು ಇಲ್ಲೇ ಕೊಟ್ಟು ಹೋಗಿ. ಇಲ್ಲದಿದ್ದರೆ, ಮದುವೆಯಾಗದೆ ಮಗು ಹೆತ್ತಿರುವುದನ್ನು ಪೊಲೀಸರಿಗೆ ತಿಳಿಸುತ್ತೇನೆ. ಡಿಸ್ಚಾರ್ಜ್ ಮಾಡಲ್ಲ ಎಂದು ಡಾ.ಬಾಲಕೃಷ್ಣ ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತೆಯ ತಾಯಿ ತಿಳಿಸಿದ್ದಾರೆ. ಹೀಗಾಗಿ, ವೈದ್ಯ ತಿಳಿಸಿದ ವ್ಯಕ್ತಿಗಳಿಗೆ ಮಗು ನೀಡಿದೆವು. ಮಗು ಖರೀದಿಸಿದವರು ಹೆತ್ತ ತಾಯಿ ಕಡೆಯವರಿಗೆ ₹ 5 ಸಾವಿರ, ವೈದ್ಯರಿಗೆ ₹ 50 ಸಾವಿರ ನೀಡಿದರು ಎಂದೂ ಅವರು ತಿಳಿಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಕಲಿ ದಾಖಲೆ ಸೃಷ್ಟಿ ಯತ್ನ: ಮಾರ್ಚ್ 14ರಂದು ಕರ್ತವ್ಯದಲ್ಲಿದ್ದ ಶುಶ್ರೂಷಕಿ ಶೋಭಾ ಅವರು ಹೆರಿಗೆ ವಿವರಗಳನ್ನು ರಿಜಿಸ್ಟರ್ನಲ್ಲಿ ನಮೂದಿಸದಿರುವುದು, ಹೆರಿಗೆ ಆಗಿಲ್ಲ ಎಂದು ಡಾ.ಬಾಲಕೃಷ್ಣ ಅವರು ಕೇಸ್ ಶೀಟ್ನಲ್ಲಿ ನಮೂದಿಸಿರುವುದು. ಅದೇ ಕೇಸ್ ಶೀಟ್ ನಂಬರ್ನಲ್ಲಿ ಇನ್ನೊಬ್ಬ ಮಹಿಳೆ ಹೆಸರು, ವಿಳಾಸವನ್ನು ಹಾಕಿ ಮಾರ್ಚ್ 20ರಂದು ಶುಶ್ರೂಷಕಿ ರೇಷ್ಮಾ ಅವರು ಹೆರಿಗೆ ರಿಜಿಸ್ಟರ್ನಲ್ಲಿ ದಾಖಲಿಸಿರುವುದು ಕಂಡುಬಂದಿದೆ.
ರಿಜಿಸ್ಟರ್ನಲ್ಲಿ ಹೆಸರು ದಾಖಲಾಗಿರುವ ಮಹಿಳೆ ಗರ್ಭಿಣಿ ಅಲ್ಲ. ಅವರಿಗೆ ಗರ್ಭಿಣಿ ಕಾರ್ಡ್, ತಾಯಿ ಕಾರ್ಡ್ ನೋಂದಣಿಯಾಗಿಲ್ಲ. ವಿಳಾಸ ಕಾಲಂನಲ್ಲಿ ಪ್ರೇಮಲತಾ, ಆಶ್ರಯ ಕಾಲೊನಿ, ಶೃಂಗೇರಿ ಎಂದು ನಮೂದಿಸಲಾಗಿದೆ. ಜನನ ಪ್ರಮಾಣ ಪತ್ರ ಸಿಗುವಂತೆ ಮಾಡಲು ದುರುದ್ದೇಶಪೂರ್ವಕವಾಗಿ ಹೆರಿಗೆ ರಿಜಿಸ್ಟರ್ನಲ್ಲಿ ಸುಳ್ಳು ವಿವರ ದಾಖಲಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ವತಿಯಿಂದ ಎನ್.ಆರ್.ಪುರದಲ್ಲಿ ಈಚೆಗೆ ನಡೆದ ಸಭೆಯಲ್ಲಿ ಆಯೋಗದ ಸದಸ್ಯ ಶಂಕರಪ್ಪ ಅವರು, ‘ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಮಾರಾಟವಾಗಿದ್ದರೂ ಪೊಲೀಸರು ದೂರು ದಾಖಲಿಸಿಲ್ಲ. ಈ ಕುರಿತು ಶಿವಮೊಗ್ಗದಲ್ಲಿ ದೂರು ಬಂದಿದೆ' ಎಂಬುದಾಗಿ ತಿಳಿಸಿದ್ದರು. ಆ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.