
ಆಲ್ದೂರು: ಸಮೀಪದ ಕೂದುವಳ್ಳಿ ಲೂರ್ದು ಮಾತೆ ಚರ್ಚ್ ವ್ಯಾಪ್ತಿಯ ಆಲ್ದೂರು ಪುರದಲ್ಲಿನ ಕ್ರೈಸ್ತ ಸ್ಮಶಾನ ಭೂಮಿಯಲ್ಲಿ ಸಮಾಧಿ ಹಬ್ಬ ಆಚರಣೆ ಮಾಡಲಾಯಿತು.
ಸಮಾಧಿಗಳಿಗೆ ತೀರ್ಥಪ್ರೊಕ್ಷಣೆ ಮಾಡಿ ಆಶೀರ್ವದಿಸಿದ ಧರ್ಮ ಕೇಂದ್ರ ಗುರು ಡೆನ್ಜಿಲ್ ಲೋಬೊ ಮಾತನಾಡಿ, ಸತ್ತವರು ದೈಹಿಕವಾಗಿ ನಮ್ಮೊಂದಿಗೆ ಇರದಿದ್ದರೂ ದೇವರ ಸಾನಿಧ್ಯದಲ್ಲಿ ಜೀವಿಸುತ್ತಾರೆ. ಅವರ ಆತ್ಮ ಶಾಂತಿಗಾಗಿ ಪ್ರತಿದಿನವೂ ಪ್ರಾರ್ಥಿಸಬೇಕು ಎಂದು ಹೇಳಿದರು.
ಮಲ್ಲಂದೂರು ಸಂತ ಲಾರೆನ್ಸ್ ಚರ್ಚ್ನಲ್ಲಿ ಸಕಲ ಅಮೃತ ವಿಶ್ವಾಸಿಗಳ ಸ್ಮರಣ ದಿನ ಆಚರಿಸಲಾಯಿತು.
ಧರ್ಮ ಕೇಂದ್ರ ಗುರು ಅನಿಲ್ ಪಾಯ್ಸ್ ಬಲಿ ಪೂಜೆ ನೆರವೇರಿಸಿ, ಸ್ಮಶಾನ ಭೂಮಿಯ ಕ್ರೈಸ್ತರ ಸಮಾಧಿಗಳಿಗೆ ಆಶೀರ್ವದಿಸಿ ಪ್ರಾರ್ಥನೆ ಸಲ್ಲಿಸಿದರು.
ಬಸ್ಕಲ್ ಸಂತ ಜೋಸೆಫರ ಚರ್ಚ್ನಲ್ಲಿ ಧರ್ಮ ಕೇಂದ್ರ ಗುರು ಜೇಮ್ಸ್ ಚಾರ್ಲಿ ಬಲಿ ಪೂಜೆ ಅರ್ಪಿಸಿದರು. ಮೃತರು ಲೌಕಿಕ ಜಗತ್ತಿನಿಂದ ದೈಹಿಕವಾಗಿ ನಮ್ಮನ್ನು ಅಗಲಿದರೂ ದೇವರೊಂದಿಗೆ ಸನಿಹದಲ್ಲಿ ಸದಾ ಜೀವಂತವಾಗಿರುತ್ತಾರೆ ಅವರ ಶಾಂತಿಗಾಗಿ ಪ್ರತಿದಿನವೂ ಪ್ರಾರ್ಥನೆಯಲ್ಲಿ ಸ್ಮರಿಸಬೇಕು ಎಂದು ಸಂದೇಶ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.