ADVERTISEMENT

ಚಾರ್ಮಾಡಿ ಘಾಟಿಯಲ್ಲಿ ಆವರಿಸಿದ ದಟ್ಟ ಮಂಜು: ಬಸ್‌ಗಳ ಮುಖಾಮುಖಿ ಡಿಕ್ಕಿ, ಚಾಲಕರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 7 ಜುಲೈ 2023, 14:45 IST
Last Updated 7 ಜುಲೈ 2023, 14:45 IST
ಚಾರ್ಮಾಡಿ ಘಾಟ್‌ನಲ್ಲಿ ಕೆಎಸ್‌ಆರ್‌ಟಿಸಿ  ಬಸ್‌ಗಳ ನಡುವೆ  ಡಿಕ್ಕಿ ಸಂಭವಿಸಿರುವುದು
ಚಾರ್ಮಾಡಿ ಘಾಟ್‌ನಲ್ಲಿ ಕೆಎಸ್‌ಆರ್‌ಟಿಸಿ  ಬಸ್‌ಗಳ ನಡುವೆ  ಡಿಕ್ಕಿ ಸಂಭವಿಸಿರುವುದು   

ಕೊಟ್ಟಿಗೆಹಾರ : ಚಾರ್ಮಾಡಿ ಘಾಟಿಯ ಬಿದಿರುತಳ ಸಮೀಪ ಕೆಎಸ್‌ಆರ್‌ಟಿಸಿ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಎರಡೂ ಬಸ್‌ಗಳ ಚಾಲಕರಿಗೆ ಗಂಭೀರ ಗಾಯಗಳಾಗಿವೆ.ರಸ್ತೆಯಲ್ಲಿ ದಟ್ಟ ಮಂಜು ಕವಿದಿದ್ದರಿಂದ ಚಾಲಕರಿಗೆ ಎದುರಿನಿಂದ ಬಂದ ವಾಹನ ಕಾಣಿಸದೆ ಅಪಘಾತ ಸಂಭಿಸಿದೆ.

ಧರ್ಮಸ್ಥಳದಿಂದ ಚಿತ್ರದುರ್ಗಕ್ಕೆ ಹೋಗುತ್ತಿದ್ದ ಮತ್ತು ಹುಬ್ಬಳ್ಳಿಯಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಬಸ್‌ಗಳ ನಡುವೆ ಡಿಕ್ಕಿ ಸಂಭವಿಸಿದೆ. ಕಾಲಿಗೆ ಗಂಭೀರವಾಗಿ ಗಾಯಗೊಂಡ ಚಾಲಕರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‌ನಲ್ಲಿದ್ದ  ಪ್ರಯಾಣಿಕರಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬಸ್‌ ಅಪಘಾತ ನಡೆದ ಸ್ಥಳದಿಂದ ಕೊಟ್ಟಿಗೆಹಾರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕೆಲವು ಪ್ರಯಾಣಿಕರು ಬಸ್‌ನಿಂದ ಇಳಿದು 10 ಕಿ.ಮೀ. ನಡೆದು ಕೊಟ್ಟಿಗೆಹಾರ ಸೇರಿದರು. ಬಣಕಲ್ ಸಬ್‌ಇನ್‌ಸ್ಪೆಕ್ಟರ್‌ ಜಂಬೂರಾಜ್ ಮಹಾಜನ್, ಹೆದ್ದಾರಿ ಗಸ್ತು ವಿಭಾಗದ ಸಬ್‌ಇನ್‌ಸ್ಪೆಕ್ಟರ್‌ ಹೇಮಾ, ಎಎಸ್‌ಐ ಟಿ.ಕೆ.ಶಶಿ, ಪೊಲೀಸ್ ಸಿಬ್ಬಂದಿ, ಸಮಾಜ ಸೇವಕ ಮೊಹಮ್ಮದ್ ಆರೀಫ್, ಸ್ಥಳೀಯರು ಸ್ಥಳಕ್ಕೆ ಭೇಟಿ ನೀಡಿ, ಅಪಘಾತಕ್ಕೀಡಾದ ಬಸ್‌ಗಳನ್ನು ರಸ್ತೆಯಿಂದ ತೆರವುಗೊಳಿಸುವಲ್ಲಿ ಸಹಕರಿಸಿದರು.

ADVERTISEMENT

ತಡೆಗೋಡೆ ಕಾಮಗಾರಿ ಬೇಗನೇ ಮುಗಿಸಲು ಒತ್ತಾಯ

ಶುಕ್ರವಾರ ಅಪಘಾತ ನಡೆದ ಸ್ಥಳದಲ್ಲಿ 2019ರಲ್ಲಿ ಭೂಕುಸಿತದಿಂದ ರಸ್ತೆ ಬದಿ ಕುಸಿದಿತ್ತು. 4 ವರ್ಷ ಕಳೆದರೂ ಈ ಜಾಗದಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ, ಇಲ್ಲಿ ರಸ್ತೆ ಇಕ್ಕಟ್ಟಾಗಿದೆ. ರಸ್ತೆಯಲ್ಲಿ ದಟ್ಟ ಮಂಜು ಕವಿದಿದ್ದರಿಂದ ಮತ್ತು ಕಾಮಗಾರಿ ನಡೆಯುತ್ತಿದ್ದ ಸ್ಥಳವೂ ಕಾಣಿಸದೆ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿವೆ. ಸಂಬಂಧಿಸಿದ ಅಧಿಕಾರಿಗಳು ಚಾರ್ಮಾಡಿ ಘಾಟಿಯಲ್ಲಿ ನಡೆಯುತ್ತಿರುವ ತಡೆಗೋಡೆ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.