ADVERTISEMENT

ಬದುಕನ್ನು ತಾತ್ವಿಕವಾಗಿ ಕಟ್ಟಿಕೊಟ್ಟ ವಿಶ್ವಮಾನ ಕುವೆಂಪು-ಮುಕುಂದರಾಜ್

ಕುವೆಂಪು ಚಿಂತನೆಗಳ ಸಾರ್ವಕಾಲಿಕ ಮಹತ್ವ ವಿಷಯದ ಕುರಿತು ವಿಶೇಷ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 8:04 IST
Last Updated 13 ಫೆಬ್ರುವರಿ 2026, 8:04 IST
ನಗರದ ಟಿಎಂಎಸ್ ಕಾಲೇಜು ಸಭಾಂಗಣದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಎಲ್.ಎನ್. ಮುಕುಂದರಾಜ್ ಅವರು ಕುವೆಂಪು ಭಾವಚಿತ್ರಕ್ಕೆಪುಷ್ಪ ನಮನ ಸಲ್ಲಿಸಿದರು
ನಗರದ ಟಿಎಂಎಸ್ ಕಾಲೇಜು ಸಭಾಂಗಣದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಎಲ್.ಎನ್. ಮುಕುಂದರಾಜ್ ಅವರು ಕುವೆಂಪು ಭಾವಚಿತ್ರಕ್ಕೆಪುಷ್ಪ ನಮನ ಸಲ್ಲಿಸಿದರು   

ಚಿಕ್ಕಮಗಳೂರು: ‘ಕುವೆಂಪು ಕೇವಲ ಕವಿಯಲ್ಲ, ಕನ್ನಡ ನಾಡಿನ ಜನ ಹೇಗೆ ಬದುಕಬೇಕು ಎಂಬುದನ್ನು ತಾತ್ವಿಕವಾಗಿ ಕಟ್ಟಿಕೊಟ್ಟ ವಿಶ್ವಮಾನವ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ-ಸಾಹಿತ್ಯ ವಿಚಾರ ವೇದಿಕೆ ಚಿಕ್ಕಮಗಳೂರು, ಜ್ಞಾನಜ್ಯೋತಿ ಟೌನ್ ಮಹಿಳಾ ಸಮಾಜದ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಗುರುವಾರ ನಗರದ ಟಿಎಂಎಸ್ ಕಾಲೇಜಿನ ಸಭಾಂಗಣದಲ್ಲಿ ‘ಕುವೆಂಪು ಚಿಂತನೆಗಳ ಸಾರ್ವಕಾಲಿಕ ಮಹತ್ವ’ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕನ್ನಡದಲ್ಲಿ ಎರಡು ಧರ್ಮಗಳಿವೆ. ಮೊದಲನೆಯದು 12ನೇ ಶತಮಾನದಲ್ಲಿ ಬಸವಣ್ಣ ಕಟ್ಟಿಕೊಟ್ಟ ಲಿಂಗಾಯತ ಧರ್ಮ, ಎರಡನೆಯದು ಕುವೆಂಪು ಕಟ್ಟಿಕೊಟ್ಟ ವಿಶ್ವಮಾನವ ಧರ್ಮ. ಇವೆರಡು ಅಪ್ಪಟ ಕನ್ನಡ ಧರ್ಮಗಳು. ನಮಗೆ ಹೊರಗಿನ ಭಾಷೆ, ಸಂಸ್ಕೃತಿ, ಸಾಹಿತ್ಯ, ದೇವರು, ಧರ್ಮದ ಬಗ್ಗೆ ಆಸಕ್ತಿ ಜಾಸ್ತಿ. ಆದರೆ ನಮ್ಮ ನೆಲದಲ್ಲಿ ಹುಟ್ಟಿದ ಧರ್ಮಗಳ ಮೇಲೆ ಆಸಕ್ತಿ ಕಡಿಮೆ’ ಎಂದರು.

‘ಯಾವುದನ್ನು ಗೌತಮ ಬುದ್ಧ ಹೇಳಲು ಸಾಧ್ಯವಾಗಲಿಲ್ಲ ಅದನ್ನು 12ನೇ ಶತಮಾನದಲ್ಲಿ ಬಸವಣ್ಣ ಹೇಳಿದರು. ಬೌದ್ಧ ಧರ್ಮ ಒಂದು ವೈಜ್ಞಾನಿಕ ಧರ್ಮ. ನೀನು ಯಾವುದನ್ನು ಇಷ್ಟ ‍ಪಡುತ್ತೀಯ ಅದು ನಿನ್ನ ಇಷ್ಟದೈವ ಎಂದು ಬಸವಣ್ಣ ಹೇಳಿದರು. ಈ ಭಾರತಾಂಬೇಯನ್ನೇ ದೇವರೆಂದು ಪೂಜೆ ಮಾಡು ಎಂದು ವಿಶ್ವಮಾನವ ಕವಿ ಕುವೆಂಪು ಸಾರಿದರು’ ಎಂದು ಹೇಳಿದರು.

ಕುವೆಂಪು ಅವರು ಬೋಧಿಸಿರುವ ವಿಶ್ವಮಾನವ ಧರ್ಮದಲ್ಲಿ ಬುದ್ಧನ ಚಿಂತನೆಗಳು, ಬಸವಣ್ಣ, ಅಂಬೇಡ್ಕರ್ ಅವರ ಚಿಂತನೆ ಎಲ್ಲವೂ ಸೇರಿದೆ. ಈ ಯುವ ಜನಾಂಗ ವಿಶ್ವಮಾನವ ಸಂದೇಶದತ್ತ ಚಿಂತನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

‘ಕುವೆಂಪು ಚಿಂತನೆಗಳು ಸಾರ್ವಕಾಲಿಕ ಮಹತ್ವ’ ವಿಷಯ ಕುರಿತು ಉಪನ್ಯಾಸ ನೀಡಿದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಬಿ.ಜಿ. ವಿರೂಪಾಕ್ಷ, ‘ಕುವೆಂಪು ಅವರ ಚಿಂತನೆಗಳು ಸಾರ್ವಕಾಲಿಕ ಮಹತ್ವದಾಗಿವೆ. ಕುವೆಂಪು ಅವರು ಜಗದ ಕವಿ, ಯುಗದ ಕವಿ, 20ನೇ ಶತಮಾನದ ಬಹುದೊಡ್ಡ ಸಾಕ್ಷಿಪ್ರಜ್ಞೆ’ ಎಂದರು.

ಕುವೆಂಪು ಪ್ರಕೃತಿಯ ದೊಡ್ಡ ಆರಾಧಕರಾಗಿದ್ದು, ಪ್ರಕೃತಿಯನ್ನೇ ಪೂಜಿಸಿದವರು. ‘ದೇವರು ರುಜು ಮಾಡಿದನು’ ಎಂಬ ಕವಿತೆಯಲ್ಲಿ ಅದು ಅರ್ಥವಾಗುತ್ತದೆ. ಪ್ರಕೃತಿಯಲ್ಲಿ ಸಂತಸ ಇದೆ. ಪ್ರಕೃತಿಯಲ್ಲಿ ನೆಮ್ಮದಿ ಇದೆ. ಪ್ರಕೃತಿಯನ್ನು ಹಾಳು ಮಾಡಬೇಡಿ ಎಂದು ಸಂದೇಶ ಸಾರಿದರು ಎಂದು ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಚಿಕ್ಕಮಗಳೂರು ಗಣೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಟಿ.ಎಂ.ಎಸ್. ಕಾಲೇಜಿನ ಪ್ರಾಂಶುಪಾಲ ಇಂದ್ರೇಶ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಿ.ಸಿ.ಸಿ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಡಿ.ನಾಗೇಶ್, ಚಕೋರ ಸಾಹಿತ್ಯ ವೇದಿಕೆ ಜಿಲ್ಲಾ ಸಂಚಾಲಕ ಗಿರೀಶ್ ಮೂಗ್ತಿಹಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.