
ಪ್ರಜಾವಾಣಿ ವಾರ್ತೆ
ಕಡೂರು : ತಾಲೂಕಿನ ಎಮ್ಮೆದೊಡ್ಡಿ ಪ್ರದೇಶದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದ್ದು ನಂತರ ಅದನ್ನು ಭದ್ರಾ ಅಭಯಾರಣ್ಯಕ್ಕೆ ಬಿಟ್ಟಿರುವುದಾಗಿ ವಲಯ ಅರಣ್ಯ ಅಧಿಕಾರಿ ಹರೀಶ್ ತಿಳಿಸಿದರು.
ಎಮ್ಮೆದೊಡ್ಡಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆಯ ಕಾಟ ವಿಪರೀತವಾಗಿದೆ ಎಂದು ಇತ್ತೀಚೆಗೆ ನಡೆದ ಜನಸಂಪರ್ಕ ಸಭೆಯಲ್ಲಿ ಗ್ರಾಮಸ್ಥರು ದೂರಿ ಚಿರತೆ ಹಿಡಿಯಲು ಬೋನ್ ಇರಿಸುವಂತೆ ಶಾಸಕ ಆನಂದ್ ಅವರಲ್ಲಿ ಮನವಿ ಸಲ್ಲಿಸಿದ್ದರು. ಅರಣ್ಯ ಇಲಾಖೆಯ ಅಧಿಕಾರಿಗಳು ರಂಗೇನಹಳ್ಳಿ ಅಮೃತಾಪುರ ವಲಯದಲ್ಲಿ ನಾಯಿಯನ್ನು ಕೂಡಿ ಬೋನ್ ಇಟ್ಟಿದ್ದರು. ಬೇಟೆ ಅರಸಿ ಬಂದ ಚಿರತೆ ಶನಿವಾರ ರಾತ್ರಿ ನಾಯಿಯನ್ನು ತಿನ್ನಲು ಬಂದು ಬೋನಿಗೆ ಬಿದ್ದಿದೆ.
ಸೆರೆ ಸಿಕ್ಕ ಚಿರತೆಯನ್ನು ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಮುತ್ತೋಡಿಯ ಭದ್ರಾ ಅಭಯಾರಣ್ಯ ವ್ಯಾಪ್ತಿಯ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ. ಸದ್ಯಕ್ಕೆ ಸುತ್ತಮುತ್ತಲ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದು, ಚಿರತೆಯ ಕಾಟ ಈ ಭಾಗದಲ್ಲಿ ಸಾಮಾನ್ಯವಾಗಿದೆ, ಅರಣ್ಯ ಇಲಾಖೆಯವರು ಮತ್ತಷ್ಟು ಬೀಟ್ ಹೆಚ್ಚಿಸಿ ಜನರಿಗೆ ವನ್ಯಪ್ರಾಣಿಗಳಿಂದ ರಕ್ಷಣೆ ಕೊಡಲಿ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.